ಕೊಕ್ಕಡ: ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಸ್ಥಾನದಲ್ಲಿ ಜೂ.20ರಂದು ಹುಂಡಿ (ಕಾಣಿಕೆ ಡಬ್ಬಿ) ಎಣಿಕೆ ವೇಳೆ ನಡೆದಿದ್ದೊಂದೆನ್ನಲಾದ ಅವ್ಯವಹಾರ ಆರೋಪದ ಹಿನ್ನೆಲೆಯಲ್ಲಿ ಶನಿವಾರದಂದು ಕೆನರಾ ಬ್ಯಾಂಕ್ನ ಉನ್ನತ ಅಧಿಕಾರಿಗಳು ದಿಢೀರನೆ ದೇವಸ್ಥಾನಕ್ಕೆ ಭೇಟಿ ನೀಡಿದ್ದು ಭಾರೀ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ಮೂಲಗಳ ಪ್ರಕಾರ, ಪುತ್ತೂರು ರೀಜನಲ್ ಶಾಖೆಯ ಹಿರಿಯ ಅಧಿಕಾರಿಗಳು ಹಾಗೂ ಕೊಕ್ಕಡ ಶಾಖೆಯ ವ್ಯವಸ್ಥಾಪಕರು ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಸ್ಥಳೀಯ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ ಅವರೊಂದಿಗೆ ಸಭೆ ನಡೆಸಿ ಆರೋಪಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ.
ಹುಂಡಿ ಎಣಿಕೆ ವೇಳೆ ಬ್ಯಾಂಕ್ ಸಿಬ್ಬಂದಿಯವರು ಹಣದ ಎಣಿಕೆಯಲ್ಲಿ ಗೋಲ್ಮಾಲ್ ಎಸಗಿದ್ದಾರೆ ಎನ್ನುವ ಗಂಭೀರ ಆರೋಪವು ದೇವಸ್ಥಾನ ವಲಯದಲ್ಲಿ ಭಾರೀ ಆತಂಕವನ್ನುಂಟುಮಾಡಿದ್ದು, ಸಾರ್ವಜನಿಕ ವಲಯ ಬ್ಯಾಂಕ್ಗಳ ನಂಬಿಕೆಯನ್ನು ಪ್ರಶ್ನಿಸುವಂತಾಗಿದೆ. ಘಟನೆ ಬೆಳಕಿಗೆ ಬಂದ ನಂತರ ತಕ್ಷಣದ ಕ್ರಮವಾಗಿ ಉನ್ನತ ಅಧಿಕಾರಿಗಳನ್ನು ಕಳಿಸಿ ಪರಿಶೀಲನೆ ನಡೆಸಿರುವುದು, ಪ್ರಕರಣದ ಗಂಭೀರತೆಯನ್ನು ಸೂಚಿಸುತ್ತದೆ.
ಸ್ಥಳೀಯ ಮೂಲಗಳಿಂದ ಲಭ್ಯವಿರುವ ಮಾಹಿತಿಯಂತೆ, ಬ್ಯಾಂಕ್ ಅಧಿಕಾರಿಗಳು ಈ ಆರೋಪದ ಬಗ್ಗೆ ಆಂತರಿಕ ತನಿಖೆಯನ್ನು ನಡೆಸಲಾಗುವುದು ಎಂದು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಾಮಾನ್ಯವಾಗಿ ದೇವಾಲಯದ ಹುಂಡಿ ಎಣಿಕೆ ಪ್ರಕ್ರಿಯೆಯಲ್ಲಿ ಬ್ಯಾಂಕ್ ಸಿಬ್ಬಂದಿಗಳ ಭದ್ರತೆಯ ಜೊತೆಗೆ ಶುದ್ಧತೆ ಹಾಗೂ ಪಾರದರ್ಶಕತೆ ಇರಬೇಕಾದ್ದರಿಂದ ಇಂತಹ ಆರೋಪಗಳು ಸಂವೇದನಾಶೀಲ ಧಾರ್ಮಿಕ ಕ್ಷೇತ್ರಗಳಲ್ಲಿ ಅಪಸ್ವರ ಸೃಷ್ಟಿಸುತ್ತವೆ.
ಈ ಹಿನ್ನೆಲೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಕೂಡ ಇಂತಹ ಘಟನೆಗಳು ಪುನರಾವೃತವಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಭಕ್ತರು ಆಗ್ರಹಿಸುತ್ತಿದ್ದಾರೆ.