ಬೆಳ್ತಂಗಡಿ: ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗದ ಪೊಲೀಸ್ ಅಧೀಕ್ಷಕ, ಉಪಾಧೀಕ್ಷರ ಸಮ್ಮುಖದಲ್ಕಿ ಸಾರ್ವಜನಿಕ ಅಹವಾಲು ಕುಂದುಕೊರತೆ ಸ್ವೀಕಾರ ಸಭೆಯು ಜೂ.16ರಂದು ತಾಲೂಕು ಕಚೇರಿ ಸಭಾಂಗಣದಲ್ಲಿ ಜರುಗಿತು.
ಕರ್ನಾಟಕ ಲೋಕಾಯುಕ್ತ ಕಾಯಿದೆಯಡಿಯಲ್ಲಿ ಬರುವ
ದೂರು ಅರ್ಜಿಗಳನ್ನು ಸ್ವೀಕರಿಸಲಾಯಿತು. ಆಯಾಯ ಗ್ರಾಮಸ್ಥರಿಂದ ಬಂದ ಅಹವಾಲು ಸ್ವೀಕರಿಸಿ ಸಂಬಂಧ ಪಟ್ಟ ಅಧಿಕಾರಿಗಳನ್ನು ಕರೆದು ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿದರು.
ಬೆಳಗ್ಗೆ 11 ಗಂಟೆಗೆ ಆರಂಭವಾದ ಜನ ಸಂಪರ್ಕ ಸಭೆಯಲ್ಲಿ ಗ್ರಾಮ ಪಂಚಾಯತ್, ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ಸರ್ಕಾರಿ ಕಛೇರಿಗಳಲ್ಲಿ ಅಧಿಕೃತ ಕೆಲಸಗಳಲ್ಲಿ ವಿಳಂಬ ಹಾಗೂ ಕೆಲಸಕಾರ್ಯಗಳಿಗೆ ತೊಂದರೆ ಕೊಡುವ ಸರಕಾರಿ ಅಧಿಕಾರಿ/ನೌಕರರ ವಿರುದ್ಧ ಸಾರ್ವಜನಿಕರು ದೂರುಗಳನ್ನು ನೀಡಿದ್ದರು.
ದೂರು ಸ್ವೀಕರಿಸಿ ಮಾತನಾಡಿದ, ಮಂಗಳೂರು ಲೋಕಾಯುಕ್ತ ವಿಭಾಗದ ಪೋಲಿಸ್ ಅಧೀಕ್ಷಕ ಕುಮಾರಚಂದ್ರ, ಲೋಕಾಯುಕ್ತದ ವಿಭಾಗಕ್ಕೆ ಯಾವುದೆಲ್ಲ ಕೇಸ್ ಗಳು ಸಂಬಂಧಿಸುತ್ತದೆ, ಯಾವ ವ್ಯವಹಾರಗಳೆಲ್ಲ ಲಂಚ ಎಂದು ಪರಿಗಣಿಸುತ್ತದೆ, ಯಾವ ರೀತಿಯಲ್ಲಿ ಭ್ರಷ್ಟಾಚಾರ ನಡೆಯುತ್ತದೆ, ಲಂಚ- ಭ್ರಷ್ಟಾಚಾರ ಕಂಡುಬಂದಲ್ಲಿ ಯಾವ ರೀತಿಯಾಗಿ ಕಂಪ್ಲೇಂಟ್ ಮಾಡಬೇಕು, ಲಂಚ ಭ್ರಷ್ಟಾಚಾರ ತಡೆಯುವಲ್ಲಿ ಸಾರ್ವಜನಿಕರ ಪಾತ್ರ ಏನು ಎಂಬುದರ ಬಗ್ಗೆ ಸವಿವರವಾದ ಮಾಹಿತಿ ನೀಡಿದರು.
ತಾಲೂಕು ಪಂಚಾಯತ್ ಗೆ ಸಂಬಂದಿಸಿದ 7 ದೂರುಗಳು, ಕಂದಾಯ ಇಲಾಖೆಗೆ ಸಂಬಂಧಿಸಿದ 10 ದೂರುಗಳು, ಅರಣ್ಯ ಇಲಾಖೆಗೆ ಸಂಬಂಧಿಸಿದ 2 ದೂರುಗಳು, ಎಡಿಎಲ್ಆರ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ ಮತ್ತು ಕೋ-ಆಪರೇಟಿವ್ ಸೊಸೈಟಿಗೆ ಸಂಬಂಧಿಸಿದ ತಲಾ 1 ದೂರುಗಳನ್ನು ಸೇರಿ ಒಟ್ಟು 24 ದೂರುಗಳನ್ನು ಸಾರ್ವಜನಿಕ ಅಹವಾಲಿನ ಮೂಲಕ ಸ್ವೀಕರಿಸಲಾಯಿತು.
ಜನಸಂಪರ್ಕ ಸಭೆಯಲ್ಲಿ ಉಪಾಧೀಕ್ಷ ಸುರೇಶ್ ಕುಮಾರ್, ಪೊಲೀಸ್ ನಿರೀಕ್ಷಕಿ ಭಾರತಿ, ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿಸಾನಿಕಂ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್, ತಾಲೂಕು ಮತ್ತು ಹೋಬಳಿ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಉಳಿದಂತೆ ಬೆಳ್ತಂಗಡಿಯ ಎಲ್ಲಾ ಇಲಾಖೆಯ ಅಧಿಕಾರಿಗಳು ಲೋಕ ಅದಾಲತ್ ನಲ್ಲಿ ಭಾಗವಹಿಸಿದ್ದರು.