
ಪಣೆಜಾಲು: ಪಪ್ಪು ಗ್ರೂಪ್ಸ್ ಬೆಳ್ತಂಗಡಿ ವತಿಯಿಂದ ಆಹ್ವಾನಿತ ತಂಡಗಳ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟವು ಪಣೆಜಾಲಿನ ಲಯನ್ಸ್ ಒಳಾಂಗಣ ಕ್ರೀಡಾಂಗಣದಲ್ಲಿ ಜೂ.13ರಂದು ನಡೆಯಿತು.

ಈ ಸಂದರ್ಭದಲ್ಲಿ ಒಳಾಂಗಣ ಕ್ರೀಡಾಂಗಣದ ವ್ಯವಸ್ಥೆಯನ್ನು ಕಲ್ಪಿಸಿದ ಪಣೆಜಾಲಿನ ಶ್ರೀ ಸ್ಟಾರ್ ಯುವಕ ಮಂಡಲದ ಸರ್ವಸದಸ್ಯರ ಪರವಾಗಿ ಯತೀಶ್ ಸಿರಿಮಜಲುರವರನ್ನು ಗುರುತಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಪಂದ್ಯಾಕೂಟದಲ್ಲಿ 12 ತಂಡಗಳು ಭಾಗವಹಿಸಿದ್ದು, ಪ್ರಥಮ ಬಹುಮಾನವನ್ನು ಗುರುವಾಯನಕೆರೆ ಪಪ್ಪು ಮೊಬೈಲ್ಸ್ ನ ಮಾಲಕ ಶರೀಫ್ ಹಾಗೂ ಪ್ರತೀಕ್ ರೆಂಕೆದಗುತ್ತು ಪಡೆದುಕೊಂಡರು. ದ್ವಿತೀಯ ಸ್ಥಾನವನ್ನು ಪಡಂಗಡಿಯ ಸಂದೇಶ್ ಹಾಗೂ ಮುಗುಳಿಯ ರಂಜನಾ ವರ್ಮಾ ಪಡೆದುಕೊಂಡರು. ತೃತೀಯ ಸ್ಥಾನವನ್ನು ಪ್ರಸಾದ್ ಹಾಗೂ ಮುನ್ನ, ಚತುರ್ಥ ಸ್ಥಾನವನ್ನು ರೋಶನ್ ಮೇಲಂತಬೆಟ್ಟು ಹಾಗೂ ಧ್ರುವ ಪಡೆದುಕೊಂಡರು. ಪಂದ್ಯಾಕೂಟದ ತೀರ್ಪುಗಾರಿಕೆಯನ್ನು ಪ್ರಣೀತ್ ನೆರವೇರಿಸಿದರು.

ಸಮಾರೋಪ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಮೆಸ್ಕಾಂ ಇಲಾಖೆಯ ಯೋಗೀಶ್ ಹಾಗೂ ಹಿರಿಯ ಬ್ಯಾಡ್ಮಿಂಟನ್ ಆಟಗಾರ ರಾಜವರ್ಮ ಜೈನ್ರವರು ವಿಜೇತರಿಗೆ ಪ್ರಶಸ್ತಿ ವಿತರಿಸಿ ಶುಭಹಾರೈಸಿದರು.

ಪಂದ್ಯಾಕೂಟವನ್ನು ಸರಕಾರಿ ಪ್ರೌಢಶಾಲೆ ಕೊಕ್ರಾಡಿಯ ಪ್ರಥಮ ದರ್ಜೆ ಸಹಾಯಕ ಪ್ರಕಾಶ್ ಬಿ.ಆರ್. ನಿರೂಪಿಸಿ, ಧನ್ಯವಾದವಿತ್ತರು.