
ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ೧೭ನೇ ಶಾಖೆ ಅಳದಂಗಡಿಯ ಗುರುದೇವ ಸಂಕೀರ್ಣದಲ್ಲಿ ಜೂ.೧೫ರಂದು ಭಾನುವಾರ ಬೆಳಿಗ್ಗೆ ಗಂಟೆ 10.30ಕ್ಕೆ ಶುಭಾರಂಭಗೊಳ್ಳಲಿದೆ.
17ನೇ ಶಾಖೆಯನ್ನು ಮಾಜಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಲಿದ್ದಾರೆ. ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ಭದ್ರತಾ ಕೋಶವನ್ನು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಅಳದಂಗಡಿ ಗ್ರಾ.ಪಂ. ಅಧ್ಯಕ್ಷೆ ಸರಸ್ವತಿ, ಅಳದಂಗಡಿ ಚರ್ಚ್ನ ಧರ್ಮಗುರು ವಂ.ಫಾ. ಎಲಿಯಾಸ್ ಡಿಸೋಜಾ, ನೂರುಲ್ ಇಸ್ಲಾಂ ಜುಮ್ಮಾ ಮಸೀದಿ ಖತೀಬ್ ಬಹು| ಮಹಮ್ಮದ್ ಮುಸ್ತಾಫಾ ಹಿಮಮಿ, ಶ್ರೀ ಕ್ಲಿನಿಕ್ನ ವೈದ್ಯ ಡಾ. ಎನ್.ಎಂ. ತುಳಪುಳೆ, ಕಟ್ಟಡ ಮಾಲಕ ಸಂಜೀವ ಪೂಜಾರಿ ಕೊಡಂಗೆ, ಅಳದಂಗಡಿ ಅರಮನೆಯ ಶಿವಪಸಾದ್ ಅಜಿಲರು, ಪ್ರಗತಿಪರ ಕೃಷಿಕ ಗಂಗಾಧರ ಮಿತ್ತಮಾರ್, ಅಳದಂಗಡಿ ಕೃಷಿಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಸುಭಾಷ್ ಚಂದ್ರ ರೈ, ಅಳದಂಗಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ಕೃಷಿ ಪತ್ತಿನ ಸಹಕಾರಿ ಸಂಘ ಸುಲ್ಕೇರಿಮೊಗ್ರು ಇದರ ಅಧ್ಯಕ್ಷ ಸುಧೀರ್ ಸುವರ್ಣ, ಕೃಷಿ ಪತ್ತಿನ ಸಹಕಾರಿ ಸಂಘ ಅಳದಂಗಡಿ ಇದರ ಅಧ್ಯಕ್ಷ ರಾಕೇಶ್ ಹೆಗ್ಡೆ ಬಳಂಜ ಭಾಗವಹಿಸಲಿದ್ದಾರೆ.
ಸಂಘದ ಪ್ರಗತಿಯ ಹೆಜ್ಜೆ: ಮೂರ್ತೆದಾರಿಕೆ ಮಾಡುವ ಕುಲ ಕಸುಬುದಾರರ ಶ್ರೇಯೋಭಿವೃದ್ಧಿ ಹಾಗೂ ಅವರ ಆರ್ಥಿಕ ಜೀವನ ಮಟ್ಟ ಸುಧಾರಿಸುವ ಸದುದ್ದೇಶದೊಂದಿಗೆ 1991ರಲ್ಲಿ ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಸುಭಾಷ್ನಗರದ ಬ್ರಹ್ಮಶ್ರೀ ನಾರಾಯಣ ಗುರುಮಂದಿರದಲ್ಲಿ ಪ್ರಾರಂಭಗೊಂಡ ಬ್ಯಾಂಕ್, 2005 ನವೆಂಬರ್ ೧೮ರಂದು ಬೊಳ್ಳಾಯಿಯಲ್ಲಿ ಬ್ಯಾಂಕಿಂಗ್ ವ್ಯವಹಾರವನ್ನು ಆರಂಭಿಸಿತು. ಬಂಟ್ವಾಳ ತಾಲೂಕಿನ ಎಲ್ಲಾ ಭಾಗಗಳಲ್ಲಿರುವ ಮೂರ್ತೆದಾರರಿಗೆ ಅನುಕೂಲವಾಗಬೇಕು ಎನ್ನುವ ಉದ್ದೇಶದಿಂದ ಹಂತ ಹಂತವಾಗಿ ಬೋಳಂತೂರು, ಚೇಳೂರು, ಫಜೀರು, ವಾಮದಪದವು, ಸಿದ್ದಕಟ್ಟೆ, ಅಣ್ಣಳಿಕೆ, ಮಾರ್ನಬೈಲು, ಮಣಿಹಳ್ಳ ಕಾವಳ ಮೂಡೂರು ಎನ್.ಸಿ. ರೋಡು, ಸಾಲೆತ್ತೂರು, ಕಂಬಳಬೆಟ್ಟು, ಪುಣಚ, ಬಿ.ಸಿ.ರೋಡು, ವೇಣೂರು, ವಾಮಂಜೂರು ಶಾಖೆಗಳನ್ನು ತೆರೆದು ಬ್ಯಾಂಕಿಂಗ್ ಸೇವೆಗಳನ್ನು ನೀಡುತ್ತಿದೆ. ಗ್ರಾಹಕರಿಗೆ ಕಡಿಮೆ ಬಡ್ಡಿದರದಲ್ಲಿ ಆಭರಣ ಸಾಲ, ಅಡಮಾನ ಸಾಲ, ವಾಹನ ಸಾಲ, ಮೂರ್ತೆದಾರಿಕೆ ಸಾಲ, ವ್ಯಾಪಾರ ಸಾಲ, ವೈಯಕ್ತಿಕ ಸಾಲ, ಠೇವಣಾತಿ ಸಾಲ, ಸ್ವಸಹಾಯ ಸಾಲ, ಮಹಿಳೆಯರಿಗೆ ತ್ವರಿತ ಸಾಲ, ನೀಡಲಾಗುತ್ತಿದೆ. ಹಿರಿಯ ನಾಗರಿಕರಿಗೆ ಮತ್ತು ಸಂಘ ಸಂಸ್ಥೆಗಳ ಠೇವಣಿಗೆ 0.5% ಹೆಚ್ಚುವರಿ ಬಡ್ಡಿ ನೀಡಲಾಗುತ್ತಿದೆ, ಸಿದ್ದಕಟ್ಟೆ, ಪುಣಚ, ಬಿ.ಸಿ. ರೋಡು ಶಾಖೆಯಲ್ಲಿ ಹಾಗೂ ವೇಣೂರು ಶಾಖೆಗಳಲ್ಲಿ ಇ- ಸ್ಟ್ಯಾಂಪಿಂಗ್ ಸೌಲಭ್ಯವನ್ನು ಗ್ರಾಹಕರಿಗೆ ನೀಡುತ್ತಿದೆ.
25 ಲಕ್ಷ ರೂ. ನಿವ್ವಳ ಲಾಭ: ಸಂಘವು ಗುರುಶ್ರೀ ಎಂಬ ಹೆಸರಿನಲ್ಲಿ ಸ್ವಸಹಾಯ ಗುಂಪುಗಳನ್ನು ರಚಿಸಿದ್ದು ಸ್ವಸಹಾಯ ಸಂಘದ ಸದಸ್ಯರಿಗೆ ಅತೀ ಕಡಿಮೆ ಅವಧಿಯಲ್ಲಿ ಬ್ಯಾಂಕ್ ಸಾಲವನ್ನು ನೀಡುವ ಯೋಜನೆಯನ್ನು ಹೊಂದಿದೆ. ಸೇವಾ ಕಾರ್ಯವಾಗಿ ಸಂಘದ ಸದಸ್ಯರಿಗೆ ವಿದ್ಯಾರ್ಥಿ ವೇತನ, ಕಡುಬಡತನದಲ್ಲಿರುವ ಅನಾರೋಗ್ಯ ಪೀಡಿತ ಮೂರ್ತೆದಾರರಿಗೆ ಸಹಾಯಧನ ನೀಡಲಾಗುತ್ತಿದೆ. ಪ್ರತೀವರ್ಷ ಹಿರಿಯ ಮೂರ್ತೆದಾರರನ್ನು ಗುರುತಿಸಿ ಗೌರವಿಸಲಾಗುತ್ತಿದೆ.
ಪ್ರಸ್ತುತ ಒಟ್ಟು 16548 ಸದಸ್ಯರನ್ನು ಹೊಂದಿ ಷೇರು ಮೊತ್ತ 64,19,475 ರೂಪಾಯಿ, 48,94,76,396 ರೂಪಾಯಿ ಠೇವಣಿ ಇದೆ. 42,12,58,138 ರೂಪಾಯಿ ಸಾಲ ನೀಡಿದ್ದು. ರೂ.25 ಲಕ್ಷ ರೂಪಾಯಿ ಲಾಭ ಗಳಿಸಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ಶಾಖೆಗಳನ್ನು ಕಾರ್ಯವ್ಯಾಪ್ತಿಯಲ್ಲಿ ತೆರೆಯುವ ಯೋಜನೆಯನ್ನು ಸಂಘ ಹೊಂದಿದೆ.
ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಿಂದ ಮೊದಲ್ಗೊಂಡು ಎಲ್ಲಾ ಸಿಬ್ಬಂದಿಗಳು ಮಹಿಳೆಯರೇ ಆಗಿದ್ದು ಮಹಿಳೆಯರ ಉದ್ಯೋಗ ಹಾಗೂ ಸ್ವಾವಲಂಬಿ ಬದುಕಿಗೆ ನಮ್ಮ ಸಂಘ ಅವಕಾಶ ನೀಡಿದೆ. ಹಾಗೂ ಇನ್ನಷ್ಟು ಶಾಖೆಗಳನ್ನು ಆರಂಭಿಸಿ ಹೆಚ್ಚಿನ ಮಹಿಳೆಯರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಂಘದ ಸಾಧನೆಗೆ ಹಲವಾರು ಪ್ರಶಸ್ತಿಗಳು ಅರಸಿ ಬಂದಿಸರುವುದು ಸಾಧನೆಯ ಮುಕುಟಕ್ಕಿಟ್ಟ ಗರಿಯಾಗಿದೆ.
ಅಧ್ಯಕ್ಷರಾಗಿ ಕೆ. ಸಂಜೀವ ಪೂಜಾರಿ, ಉಪಾಧ್ಯಕ್ಷರಾಗಿ ವಿಠಲ ಬೆಳ್ಚಾಡ ಚೇಳೂರು, ನಿರ್ದೇಶಕರಾಗಿ ಸುಂದರ ಪೂಜಾರಿ ಬೀಡಿನಪಾಲು, ರಮೇಶ್ ಅನ್ನಪ್ಪಾಡಿ, ಗಿರೀಶ್ ಕುಮಾರ್ ಪೆರ್ವ, ಜಯಶಂಕರ್ ಕಾನ್ಸಾಲೆ, ಕೆ. ಸುಜಾತ ಎಂ., ವಾಣಿವಸಂತ, ಅರುಣ್ ಕುಮಾರ್ ಎಂ. ಆಶಿಶ್ ಪೂಜಾರಿ, ಚಿದಾನಂದ ಎಂ. ಕಡೇಶ್ವಾಲ್ಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ ಮಮತಾ ಜಿ. ಸಂಘವನ್ನು ಮುನ್ನಡೆಸುತ್ತಿದ್ದಾರೆ.