ಬೆಳ್ತಂಗಡಿ: ಸ್ಪಂದನ ಚಾರಿಟೇಬಲ್ ಟ್ರಸ್ಟಿನ ಮಹತ್ವದ 16ನೇ ಯೋಜನೆಯಾದ “ಸ್ಪಂದನ ವಿದ್ಯಾನಿಧಿ ಯೋಜನೆ” ಮತ್ತು ಪರಿಸರ ಸಂರಕ್ಷಣೆ ಸಲುವಾಗಿ “ಸಸಿ ನೆಡುವ” ಕಾರ್ಯಕ್ರಮ ಜೂ.9ರಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರಕಾರಿ ಪ್ರಾಥಮಿಕ ಶಾಲೆ ಅಡೆಂಜ, ನೂಜಿಬಾಳ್ತಿಲ ಗ್ರಾಮ ಕಡಬ ತಾಲೂಕಿನಲ್ಲಿ ವಿಜೃಂಭಣೆಯಿಂದ ನೆರವೇರಿತು.
ಟ್ರಸ್ಟಿನ ಅಧ್ಯಕ್ಷ ಚಿದಾನಂದರವರ ಅಧ್ಯಕ್ಷತೆಯಲ್ಲಿ, ಜಗದೀಶ್ ಬಾರಿಕೆ ಇವರ ನಿರೂಪಣೆಯೊಂದಿಗೆ, ಶಾಲಾ ವಿದ್ಯಾರ್ಥಿನೀಯರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಕಾರ್ಯಕ್ರಮವನ್ನು ಟ್ರಸ್ಟಿನ ಸ್ಥಾಪಕ ಅಧ್ಯಕ್ಷ ಸುನೀಲ್ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಶಾಲಾ ಮುಖ್ಯೋಪಾಧ್ಯಾಯ ರೇಖಾ, ಎಸ್.ಡಿ.ಎಮ್.ಸಿ ಅಧ್ಯಕ್ಷ ನಿತ್ಯಾನಂದ ಬಲಕ್ಕ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅನಿಲ್ ಕೇರ್ನಡ್ಕ ತಮ್ಮ ಪ್ರಾಸ್ತವಿಕ ಭಾಷಣದಲ್ಲಿ ಟ್ರಸ್ಟಿನ ಸಾಮಾಜಿಕ ಕಳಕಳಿ, ಕಾರ್ಯವೈಖರಿಯನ್ನು ಶ್ಲಾಘಿಸಿದರು. ಮತ್ತು ಗೌರವ ಸ್ಮರಣಿಕೆ ನೀಡಿ ಗೌರವಿಸಿದರು.
ವಾಗ್ಮಿಗಳಾದ ಸರ್ಕಾರಿ ಪದವಿ ಪೂರ್ವ ಕಾಲೇಜು ಕಾಣಿಯೂರಿನ ಕನ್ನಡ ಉಪನ್ಯಾಸಕ ಜಗದೀಶ್ ಬಾರಿಕೆಯವರು “ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳಿಗಾಗುವ ದುಷ್ಪರಿಣಾಮಗಳ” ಬಗ್ಗೆ ವಿಶೇಷ ಮಾಹಿತಿಯನ್ನು ನೀಡಿದರು.
ಶಾಲಾ ವಿದ್ಯಾರ್ಥಿ/ನಿಯರಿಗೆ ಉಚಿತ ಶಾಲಾ ಬ್ಯಾಗ್, ಪುಸ್ತಕ ಮತ್ತು ಛತ್ರಿಯನ್ನು ನೀಡಲಾಯಿತು. ಮತ್ತು ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಶಾಲಾ ವಠಾರದಲ್ಲಿ ಸಸಿ ನೆಡಲಾಯಿತು. ಟ್ರಸ್ಟಿನ ಸದಸ್ಯರು, ಶಿಕ್ಷಕ ವೃಂದ ಮತ್ತು ಪೋಷಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರಾಷ್ಟಗೀತೆಯೊಂದಿಗೆ ಕೊನೆಗೊಳಿಸಲಾಯಿತು. ಟ್ರಸ್ಟಿನ ಸದಸ್ಯ ಶರತ್ ವಂದಿಸಿದರು.