ಧರ್ಮಸ್ಥಳ: ಪಂಚೇoದ್ರಿಯಗಳ ನಿಯಂತ್ರಣದೊoದಿಗೆ ಪರಿಶುದ್ಧ ದೇಹ ಮತ್ತು ಮನಸಿನಿಂದ ರಾಗ, ತಾಳ, ಲಯಬದ್ಧವಾಗಿ ಭಜನೆ ಮಾಡುವುದರಿಂದ ಉತ್ತಮ ಸಂಸ್ಕಾರಯುತ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಮೂಡಬಿದ್ರೆಯ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು.

ಅವರು ಧರ್ಮಸ್ಥಳದಲ್ಲಿ ಮಹೋತ್ಸವ ಸಭಾಭವನದಲ್ಲಿ 27ನೇ ವರ್ಷದ ಭಜನಾ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿದರು.
ಭಜನೆಯಿಂದ ಸುಲಭದಲ್ಲಿ ದೇವರ ಅನುಗ್ರಹಕ್ಕೆ ಪಾತ್ರರಾಗಬಹುದು, ಭಜನೆಯಿಂದ ಜನಜಾಗೃತಿ ಉಂಟಾಗಿ ಎಲ್ಲರೂ ಸಮಾನರಾಗಿ, ಗುರು-ಹಿರಿಯರಿಂದ ಮಾರ್ಗದರ್ಶನ, ಪ್ರೇರಣೆ ಪಡೆದು ದೃಢಭಕ್ತಿ ಮತ್ತು ಪರಿಶುದ್ಧ ಮನಸಿನಿಂದ ಭಜನೆ ಮಾಡಿದಾಗ ಮಾನಸಿಕ ಶಾಂತಿ, ನೆಮ್ಮದಿ ಸಿಗುತ್ತದೆ. ದಾಸರ ಪದಗಳು, ಭಾಗ್ಯದ ಲಕ್ಷ್ಮಿ ಬಾರಮ್ಮ ಮೊದಲಾದ ಭಜನೆಗಳು ನಮಗೆ ಸಾರ್ಥಕ ಜೀವನದ ಪಾಠವನ್ನು ಕಲಿಸುತ್ತವೆ ಎಂದು ಡಾ. ಮೋಹನ ಆಳ್ವ ಹೇಳಿದರು.

ಮಾಣಿಲದ ಮೋಹನದಾಸ ಸ್ವಾಮೀಜಿ ಶುಭಶಂಸನೆ ಮಾಡಿ, ಭಜನಾ ತರಬೇತಿ ಪಡೆದವರು ತಮ್ಮ ಮಕ್ಕಳಿಗೂ ಭಜನೆಯ ಮೂಲಕ ಉತ್ತಮ ಸಂಸ್ಕಾರ ನೀಡಬೇಕು. ಭಜನೆ ಮಾಡುವಾಗ ನಿತ್ಯವೂ ಶಿವಪಂಚಾಕ್ಷರಿ ಪಠಣ ಮಾಡಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಭಜನಾ ತರಬೇತಿ ಪಡೆದವರು ಶಿಸ್ತು, ಸಮಯಪಾಲನೆ, ಸ್ವಚ್ಛತೆಯೊಂದಿಗೆ ನಾಯಕತ್ವಗುಣವನ್ನೂ ಬೆಳೆಸಿಕೊಂಡು ಪ್ರಗತಿಯ ರೂವಾರಿಗಳಾಗಬೇಕು. ಸಂಸ್ಕೃತಿ ಪ್ರಸಾರದ ರಾಯಭಾರಿಗಳಾಗಿ ಎಲ್ಲರನ್ನೂ ನಮ್ಮವರೇ ಎಂದು ಭಾವಿಸಿ ವಿಶ್ವಮಾನವರಾಗಿ ಸಮಾಜಸೇವೆ ಮಾಡಬೇಕು. ನೃತ್ಯ ಭಜನೆಗೂ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಹೇಮಾವತಿ ವೀ. ಹೆಗ್ಗಡೆ ಮತ್ತು ಡಿ. ಹಷೇಂದ್ರ ಕುಮಾರ್ ಉಪಸ್ಥಿತರಿದ್ದರು. ಭಜನಾ ಕಮ್ಮಟದ ಕಾಯದರ್ಶಿ ಎ.ವಿ. ಶೆಟ್ಟಿ ವರದಿ ಸಾದರ ಪಡಿಸಿದರು.

111 ಪುರುಷರು ಹಾಗೂ 71 ಮಹಿಳೆಯರು ಸೇರಿದಂತೆ ಒಟ್ಟು 182 ಶಿಬಿರಾರ್ಥಿಗಳು ಕಮ್ಮಟದಲ್ಲಿ ಭಾಗವಹಿಸುತ್ತಿದ್ದಾರೆ.

ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯಪ್ರಸಾದ್ ಪ್ರಾಸ್ತಾವಿಕವಾಗಿ ಮಾತುಗಳೊಂದಿಗೆ ಸ್ವಾಗತಿಸಿದರು. ಧರ್ಮಸ್ಥಳದ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಪದ್ಮಶ್ರೀ ಕಾರ್ಯಕ್ರಮ ನಿರ್ವಹಿಸಿದರು. ನಿವೃತ್ತ ಮುಖ್ಯ ಶಿಕ್ಷಕ ಪದ್ಮರಾಜ್ ಧನ್ಯವಾದವಿತ್ತರು.