
ಸೋಣಂದೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಜೂ.02ರಂದು ಅದ್ದೂರಿಯಾಗಿ ನಡೆಯಿತು.
ಶಾಲಾ ವಿದ್ಯಾರ್ಥಿಗಳಿಗೆ ಆರತಿ ಬೆಳಗಿ ಪನ್ನೀರ ಸಿಂಚನದೊಂದಿಗೆ ಶಾಲಾ ದ್ವಾರದಲ್ಲಿ ಸ್ವಾಗತ ಕೋರಲಾಯಿತು. ಎಲ್ಲಾ ವಿದ್ಯಾರ್ಥಿಗಳು ಬಣ್ಣಬಣ್ಣದ ಬಲೂನಿನೊಂದಿಗೆ ಮೆರವಣಿಗೆಯಲ್ಲಿ ಸಾಲಾಗಿ ಬಂದು ಹಣತೆ ದೀಪವನ್ನು ಬೆಳಗಿಸಿದರು. ತಮ್ಮ ಜೀವನದ ಕತ್ತಲೆಯನ್ನು ಹೊಡೆದೋಡಿಸಿ ಜ್ಞಾನದ ಬೆಳಕು ಎಲ್ಲೆಡೆ ಹರಡುವ ಸಂಕೇತವಾಗಿ ಪುಟಾಣಿಗಳು ದೀಪ ಬೆಳಗಿಸಿದರು.

ಈ ಕಾರ್ಯಕ್ರಮವನ್ನು ಮಾಲಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸೆಲೆಸ್ತಿನ್ ಡಿಸೋಜರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು ಹಾಗೂ ಇಲಾಖೆಯಿಂದ ನೀಡಿದ ಪಠ್ಯಪುಸ್ತಕವನ್ನು ವಿತರಿಸಿದರು.
ಶಾಲಾ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಉಚಿತ ನೋಟ್ ಪುಸ್ತಕ, ಪೆನು, ಪೆನ್ಸಿಲ್, ಮಗ್ಗಿ ಪುಸ್ತಕ, ಕೊಡೆ ವಿತರಣೆ ಕಾರ್ಯಕ್ರಮ ನೆರವೇರಿತು. ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇಲಾಖಾ ಚಟುವಟಿಕೆಗಳ ಬಗ್ಗೆ ಹಾಗೂ ಶಾಲಾ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಶಾಲಾ ಮುಖ್ಯ ಶಿಕ್ಷಕಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಿ ಆರ್ ಪಿ ಯವರಾದ ಚೇತನರವರು ಮಕ್ಕಳ ಸುರಕ್ಷತೆ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಿದರು.
ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ನಾಗೇಶ್ ಅಧ್ಯಕ್ಷೀಯ ಮಾತುಗಳನ್ನಾಡಿದರು. ಸಹ ಶಿಕ್ಷಕಿಯಾದ ರಕ್ಷಾ ಕಾರ್ಯಕ್ರಮ ನಿರೂಪಿಸಿದರು. ರಶ್ಮಿ ಸ್ವಾಗತಿಸಿ, ಸಹ ಶಿಕ್ಷಕಿ ಸವಿತಾ ವಂದಿಸಿದರು.