ಬೆಳ್ತಂಗಡಿ: 18 ವರ್ಷಗಳ ನಂತರ ಚೊಚ್ಚಲ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಭ್ರಮಾಚರಣೆ ವೇಳೆ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ 11 ಮಂದಿ ಮೃತಪಟ್ಟಿದ್ದು ಇವರಲ್ಲಿ ಉಪ್ಪಿನಂಗಡಿ ಇಳಂತಿಲ ಮೂಲದ ಓರ್ವ ಯುವತಿಯೂ ಸೇರಿದ್ದಾರೆ.33 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಇಳಂತಿಲ ಅಂಡೆತ್ತಡ್ಕ ಮೂಲದ ಕರುಣಾಕರ ಶೆಟ್ಟಿ ಮತ್ತು ಕಾರ್ಕಳ ಹೆಬ್ರಿಯ ಪೂಜಾ ಶೆಟ್ಟಿಯವರ ಪುತ್ರಿ ಚಿನ್ಮಯಿ ಶೆಟ್ಟಿ(20ವ.) ಕಾಲ್ತುಳಿತದಿಂದ ಸಾವಿಗೀಡಾಗಿದವರು ಎಂದು ತಿಳಿದು ಬಂದಿದೆ. 18 ವರ್ಷದ ಕಾಯುವಿಕೆಯ ನಂತರ ಐಪಿಎಲ್ ಟ್ರೋಫಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಬೆಂಗಳೂರಿನಲ್ಲಿ ಅಭಿಮಾನಿಗಳು ಬರಮಾಡಿಕೊಂಡಾಗ, ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ ಹಿನ್ನೆಲೆಯಲ್ಲಿ ನೂಕುನುಗ್ಗಲು ಹಾಗೂ ಕಾಲ್ತುಳಿತ ಸಂಭವಿಸಿ 11 ಜನ ಸಾವನ್ನಪ್ಪಿ, 33 ಮಂದಿ ಗಾಯಗೊಂಡಿದ್ದರು.
ಇಂಜಿನಿಯರಿಂಗ್ ವಿದ್ಯಾರ್ಥಿ ಚಿನ್ಮಯಿ: ಕಾಲ್ತುಳಿತದಲ್ಲಿ ಗಂಭೀರ ಗಾಯಗೊಂಡಿದ್ದ ಚಿನ್ಮಯಿ ಶೆಟ್ಟಿಯವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಸಾವನಪ್ಪಿದ್ದಾರೆ. ಬೆಂಗಳೂರಿನ ಕನಕಪುರ ರಸ್ತೆಯ ಜ್ಯೋತಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎರಡನೇ ವರ್ಷದ ಬಿಇ ವ್ಯಾಸಂಗ ಮಾಡುತ್ತಿದ್ದ ಚಿನ್ಮಯಿ ಶೆಟ್ಟಿ ಅವರು ಅತ್ಯುತ್ತಮ ಯಕ್ಷಗಾನ ಕಲಾವಿದೆಯೂ ಆಗಿದ್ದರು. ಇವರು ಬೆಂಗಳೂರಿನ ಯಕ್ಷತರಂಗ ತಂಡದ ವಿದ್ಯಾರ್ಥಿನಿಯಾಗಿದ್ದರು.ಚಿನ್ಮಯಿ ಶೆಟ್ಟಿಯವರ ತಂದೆ ಕರುಣಾಕರ ಶೆಟ್ಟಿಯವರು ಮೂಲತ: ಸೋಮವಾರಪೇಟೆ ನಿವಾಸಿಯಾಗಿದ್ದು ಕೆಲವರ್ಷಗಳ ಹಿಂದೆ ಇಳಂತಿಲದಲ್ಲಿ ಜಾಗ ಖರೀದಿಸಿ ಮನೆ ಮಾಡಿದ್ದರು. ಬೆಂಗಳೂರುನಲ್ಲಿ ಉದ್ಯಮಿಯಾಗಿರುವ ಕರುಣಾಕರ ಶೆಟ್ಟಿಯವರು ಕುಟುಂಬದೊಂದಿಗೆ ಬೆಂಗಳೂರುನಲ್ಲಿಯೇ ವಾಸ್ತವ್ಯವಿದ್ದು ಅಂಡೆತ್ತಡ್ಕದಲ್ಲಿ ಅವರ ತಾಯಿ ಮತ್ತು ಮಗಳ ಮಗ ವಾಸ್ತವ್ಯವಿದ್ದಾರೆ. ವಿಷಯ ತಿಳಿದು ಅವರು ಬೆಂಗಳೂರುಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.
10 ಲಕ್ಷ ರೂ.ಪರಿಹಾರ: ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಗಾಯಾಳುಗಳಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಲಾಗುವುದು. ಇದು ಸರ್ಕಾರದ ಕಾರ್ಯಕ್ರಮ ಅಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.