ಡಿ.19-20:ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ಶಾಲಾ ಶತಮಾನೋತ್ಸವ ಸಂಭ್ರಮ-ಪತ್ರಿಕಾಗೋಷ್ಠಿ

0

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಎಂದಾಗ ಎಲ್ಲರಿಗೂ ಸ್ಮೃತಿಪಟಲದಲ್ಲಿ ಮೂಡುವುದು ಶ್ರೀ ಜನಾರ್ದನ ಸ್ವಾಮಿಯ ನಾಮಧೇಯ.ಉಜಿರೆಯಲ್ಲಿ ಪ್ರಸಿದ್ಧಿಯಾಗಿರುವ ಶ್ರೀ ಜನಾರ್ದನ ಸ್ವಾಮಿಯ ದೇಗುಲಕ್ಕೂ, ಇಂದು ನಮ್ಮ ಉಜಿರೆಯ ಶ್ರೀ.ಧ.ಮಂ.ಅ.ಹಿ.ಪ್ರಾ.ಶಾಲೆಗೂ ಅವಿನಾಭಾವ ಸಂಬಂಧಗಳ ಹಿಂದೆ ಒಂದು ಹಿನ್ನಲೆಯೂ ಇದೆ, ಸಂಬಂಧವಿದೆ. ಸ್ವಾತಂತ್ರ್ಯ ಪೂರ್ವದಲ್ಲಿ 8-7-1925ರಂದು ಮಲೆನಾಡು ಪ್ರದೇಶವಾದ ಉಜಿರೆಯಲ್ಲಿ ಪ್ರತಿಷ್ಠಿತ ಪಡುವೆಟ್ಟು ಮನೆತನದ ಕೀರ್ತಿಶೇಷ ಶ್ರೀ ಕೃಷ್ಣ ಪಡ್ವೆಟ್ನಾಯರು ಊರಿನ ಜನರ ಶಿಕ್ಷಣದ ಅವಶ್ಯಕತೆಯನ್ನು ಮನಗಂಡು ತಮ್ಮ ಸ್ವಂತ ಸ್ಥಳ ಹಾಗೂ ಸ್ವಂತ ಕಟ್ಟಡದಲ್ಲಿ ಶಾಲೆಯನ್ನು ಸ್ಥಾಪಿಸಿ ಉಜಿರೆಯ ಆರಾಧ್ಯ ದೇವರಾದ ಶ್ರೀ ಜನಾರ್ದನ ಸ್ವಾಮಿ ಹೆಸರಿನಲ್ಲಿ “ಶ್ರೀ ಜನಾರ್ದನ ಸ್ವಾಮಿ ಎಲಿಮೆಂಟರಿ ಶಾಲೆ” ಎಂದು ನಾಮಕರಣ ಮಾಡಿದರು ಎಂದು ಶತಮಾನೋತ್ಸವ ಸಮಿತಿ ಅಧ್ಯಕ್ಷ ಶರತ್ ಕೃಷ್ಣ ಪಡ್ವಟ್ನಾಯ ರವರು ಹೇಳಿದರು. ಅವರು ಡಿ. 16ರಂದು ಉಜಿರೆ ಶಾಲೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಉಡುಪಿಯ ಕಾಪುವಿನ ಜೆ.ಅನಂತಯ್ಯನವರು ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಮೆನೇಜರ್ ಹುದ್ದೆಯನ್ನು ಅಲಂಕರಿಸಿ ಶಾಲೆಯನ್ನು ನಡೆಸುತ್ತಾ ಬಂದರು. ಆಗ ಈ ಶಾಲೆಯ ಹೆಸರು ಶ್ರೀ ಜನಾರ್ದನ ಕಿರಿಯ ಪ್ರಾಥಮಿಕ ಶಾಲೆ ಎಂದಾಗಿತ್ತು. 1955ರಂದು ಕೀರ್ತಿಶೇಷ ಪೂಜ್ಯ ಶ್ರೀ ಡಿ ರತ್ನವರ್ಮ ಹೆಗ್ಗಡೆಯವರು ಪಟ್ಟಾಭಿಷೇಕ ಆದ ವರ್ಷವೇ, ಈ ಶಾಲೆಯ ಆಡಳಿತವು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹಸ್ತಾಂತರಿಸಲ್ಪಟ್ಟಿತು ಎಂದರು.

1956 ರಲ್ಲಿ ಹೊಸ ಕಟ್ಟಡಗಳ ನಿರ್ಮಾಣವಾಯಿತು. ಬಳಿಕ 1986ರಲ್ಲಿ ರತ್ನಮಾನಸದ ಪಕ್ಕದಲ್ಲಿ ಷಡ್ಬುಜಾಕೃತಿಯ ನವೀನ ಮಾದರಿಯ ಶಾಲಾ ಕಟ್ಟಡದ ಹೆಚ್ಚುವರಿ ವಿಭಾಗವನ್ನು ಪೂಜ್ಯ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಒದಗಿಸಿ 12/01/1986 ರಂದು ಆಗಿನ ಶಿಕ್ಷಣ ಸಚಿವರಾದ ಕೆ.ರಘುಪತಿಯವರಿಂದ ಉದ್ಘಾಟಿಸಲ್ಪಟ್ಟಿತು.1985 ರಿಂದ ಈ ಶಾಲೆಯು ಶ್ರೀ.ಧ.ಮಂ.ಶಿಕ್ಷಣ ಸಂಸ್ಥೆ(ರಿ) ಉಜಿರೆಯ ಆಡಳಿತಕ್ಕೊಳಪಟ್ಟಿದೆ ಎಂದರು.

1992 ರಿಂದ ಶಾಲಾ ಗೇಟಿನ ರಚನೆ, ಮಕ್ಕಳಿಗೆ ಶೌಚಾಲಯ ಹಾಗೂ ಕ್ರೀಡಾಂಗಣದ ನಿರ್ಮಾಣ ಮೊದಲಾದ ಕಾಮಗಾರಿಗಳು ನಡೆದು, 2002ನೇ ಇಸವಿಯಲ್ಲಿ ವಿಸ್ತ್ರತ ಕಟ್ಟಡದ ಉದ್ಘಾಟನೆಯು ಮಾತೃಶ್ರೀ ರತ್ನಮ್ಮ ಹೆಗ್ಗಡೆಯವರಿಂದ ನೆರವೇರಿಸಲ್ಪಟ್ಟಿತು ಎಂದರು.

2007 ರಲ್ಲಿ ಶಾಲೆಯ ಅಮೃತ ಮಹೋತ್ಸವ ಸಮಾರಂಭ ಹಾಗೂ ನೂತನ ರಂಗ ಮಂದಿರದ ಉದ್ಘಾಟನಾ ಕಾರ್ಯಕ್ರಮವು ಧರ್ಮಾಣದಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ, ವಿಜಯರಾಘವ ಪಡ್ವೆಟ್ನಾಯರ ಉಪಸ್ಥಿತಿಯಲ್ಲಿ ನೆರವೇರಿತು.ಪ್ರಸ್ತುತ ಈ ವಿದ್ಯಾಮಂದಿರವು ಸುದೀರ್ಘ ಅವಧಿಯಲ್ಲಿ ಸಹಸ್ರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನವಿತ್ತು ಸಮಾಜದ ಶ್ರೇಯಸ್ಸಿಗೆ ಮೇರುಕೊಡುಗೆಯನ್ನಿತ್ತು ಶತಮಾನೋತ್ಸವ ಸಂಭ್ರಮದಲ್ಲಿದೆ ಎಂದರು.

1925 ರಿಂದ 2025ರವರೆಗೆ ಶತ ವರುಷದಲ್ಲಿ ಉಜಿರೆ ಶ್ರೀ.ಧ.ಮಂ.ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ನಡೆದು ಬಂದ ದಾರಿ ಅವಿಸ್ಮರಣೀಯವಾಗಿದೆ. ಇಲ್ಲಿ ವಿದ್ಯೆ ಪಡೆದ ಅದೆಷ್ಟೋ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಿಂಚಿದ್ದಾರೆ. ಇಂದು ಸಮಾಜದ ವಿವಿಧ ರಂಗಗಳಲ್ಲಿ ಧಾರ್ಮಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ, ರಾಜಕೀಯವಾಗಿ ಹಾಗೂ ಬೇರೆ ಬೇರೆ ಉದ್ಯೋಗ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.ಶಾಲಾ ಶತಮಾನೋತ್ಸವ ಸಮಿತಿಯ ವತಿಯಿಂದ ನೂತನವಾಗಿ ನಿರ್ಮಿಸಲಾದ ಸುಸಜ್ಜಿತವಾದ ಗ್ರಂಥಾಲಯ ಉದ್ಘಾಟನೆಗೆ ಸಿದ್ಧಗೊಂಡಿದೆ ಎಂದರು.

ಡಿ.19ರಂದು ಬೆಳಗ್ಗೆ 11 ರಿಂದ ಜನಾರ್ಧನ ಸ್ವಾಮಿ ದೇವಸ್ಥಾನ ಆಡಳಿತ ಮೊಕ್ತೇಸರರಾದ ಶರತ್‌ಕೃಷ್ಣ ಪಡ್ವೆಟ್ನಾಯರ ಅಧ್ಯಕ್ಷತೆಯಲ್ಲಿ, ಶ್ರೀ.ಧ.ಮಂ.ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಿ. ಹರ್ಷೇಂದ್ರಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿರುವರು. ವಿಶೇಷ ಅಭ್ಯಾಗತರಾಗಿ ಉಜಿರೆ ಗ್ರಾ.ಪಂ ಅಧ್ಯಕ್ಷೆ ಉಷಾಕಿರಣ್ ಕಾರಂತ್, ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ, ಬಾಗಲಕೋಟೆ ವಿಶ್ವವಿದ್ಯಾನಿಲಯ ಕುಲಸಚಿವ ಡಾ. ಔದ್ರಮ ಕೆ.ಎ.ಎಸ್., ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕ ಶೇಕ್ ಲತೀಫ್, ಕೆ.ಎ.ಎಸ್. ಅವರು ಭಾಗವಹಿಸಲಿರುವರು ಎಂದರು.

ಡಿ.20 ರಂದು ಸಂಜೆ ಸಮಯ 4.30ರಿಂದ ಧರ್ಮಾಧಿಕಾರಿ ಡಾ। ಡಿ.ವೀರೇಂದ್ರ ಹೆಗ್ಗಡೆಯವರ ಶುಭಾರ್ಶೀವಾದದೊಂದಿಗೆ ಸ್ಪೀಕರ್ ಯು.ಟಿ.ಖಾದರ್ ಫರೀದ್, ಸಚಿವರಾದ ದಿನೇಶ್ ಗುಂಡೂರಾವ್,ಮಧುಬಂಗಾರಪ್ಪ, ಶಾಸಕ ಹರೀಶ್ ಪೂಂಜ ಹಾಗೂ ಸಂಸದರು, ವಿಧಾನ ಪರಿಷತ್ ಸದಸ್ಯರು, ಉಜಿರೆ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಗಣ್ಯರ ಉಪಸ್ಥಿತಿಯಲ್ಲಿ ನಿವೃತ್ತ ಮತ್ತು ಪ್ರವೃತ್ತ ಶಿಕ್ಷಕರನ್ನು ಆಡಳಿತ ಮಂಡಳಿಯು ಗೌರವಿಸುವ ಕಾರ್ಯಕ್ರಮ ಜರಗಲಿದೆ ಎಂದರು.

ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಎಸ್.ಡಿ.ಎಂ ಕಲಾವೈಭವ, ಮಂದಾರ ಕಲಾವಿದರು ಉಜಿರೆ ಇವರಿಂದ ತುಳುನಾಟಕ ಸಂಸ್ಥೆಯ ಹಿರಿಯ ವಿದ್ಯಾರ್ಥಿ ರಜತ್ ಮ್ಯಯರವರಿಂದ ಸಂಗೀತ ಕಾರ್ಯಕ್ರಮ ನಡೆಯಲಿವೆ ಎಂದು ಶತಮಾನೋತ್ಸವ ಸಮಿತಿ ಅಧ್ಯಕ್ಷರಾದ ಶರತ್ ಕೃಷ್ಣ ಪಡ್ವೆಟ್ನಾಯರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಾ| ಸತೀಶ್ಚಂದ್ರ ಎಸ್., ಶಾಲಾ ಮುಖ್ಯೋಪಾಧ್ಯಾಯರಾದ ಬಾಲಕೃಷ್ಣ ನಾಯ್ಕ ಪಿ., ಕ್ಷೇಮಪಾಲನಾ ಅಧಿಕಾರಿ
ಧನ್ಯಕುಮಾರ್, ಶಾಲಾ ಶತಮಾನೋತ್ಸವ ಸಮಿತಿ ಕಾರ್ಯದರ್ಶಿ ಅಬೂಬಕ್ಕರ್, ಕಾರ್ಯಕ್ರಮ ಸಂಯೋಜಕ ಬಿ.ಸೋಮಶೇಖರ ಶೆಟ್ಟಿ, ಕೋಶಾಧಿಕಾರಿ ಮೋಹನ್ ಶೆಟ್ಟಿಗಾರ್ ಹಾಗೂ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಅಬೂಬಕ್ಕರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here