ಬೆಳ್ತಂಗಡಿ: ನಗರದ ಬಸ್ ನಿಲ್ದಾಣದಲ್ಲಿ ಕೆಲ ದಿನಗಳಿಂದ ಮೊಬೈಲ್ ಕಳ್ಳರ ಹಾವಳಿ ಹೆಚ್ಚಾಗುತ್ತಿದ್ದು, ಪಿಕ್ ಪಾಕೆಟ್ ಹಾಗೂ ಮೊಬೈಲ್ ಕಳ್ಳತನ ಮಾಡಿರುವ ಘಟನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಬಸ್ ನಿಲ್ದಾಣದ ಬಳಿ ಬಸ್ಸಿಗಾಗಿ ಕಾಯುವ ಪ್ರಯಾಣಿಕರು ಹಾಗೂ ಪ್ರಯಾಣಿಸುವವರು ಆತಂಕ ಪಡಬೇಕಾದ ಪರಿಸ್ಥಿತಿ ಎದುರಾಗಿದೆ. ಮೇ. 29ರಂದು ಬಸ್ ನಿಲ್ದಾಣದಲ್ಲಿ ಮೊಬೈಲ್ ಕಳೆದುಕೊಂಡವರು ನೀಡಿದ ಮಾಹಿತಿಯನ್ನು ಆಧಾರಿಸಿ ಸುತ್ತಮುತ್ತಲಿನ ಅಂಗಡಿ-ಹೋಟೇಲ್ ಗಳಲ್ಲಿ ವಿಚಾರಿಸಿದಾಗ 10ಕ್ಕೂ ಅಧಿಕ ಮಂದಿಯ ವಿದ್ಯಾರ್ಥಿಗಳ ಹಾಗೂ ಪ್ರಯಾಣಿಕರ ಮೊಬೈಲ್ ಕಳ್ಳತನದ ಬಗ್ಗೆ ಮಾಹಿತಿ ದೊರಕಿದ್ದು, ಈ ಬಗ್ಗೆ ಬಸ್ನಲ್ಲಿ ರಷ್ ಇರುವ ಸಮಯ ನೋಡಿಕೊಂಡು ಕ್ಷಣ ಮಾತ್ರದಲ್ಲಿ ಮೊಬೈಲ್ ಎಗರಿಸಿ ಪ್ರಯಾಣಿಕರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿರುವ ಮೊಬೈಲ್ ಕಳ್ಳರಿಗೆ ಕಡಿವಾಣ ಹಾಕಲು ಸಂತ್ರಸ್ತ ಪ್ರಯಾಣಿಕರು ಸಾರಿಗೆ ಹಾಗೂ ಪೊಲೀಸ್ ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ.