ಬಡ ಸದಸ್ಯೆಗೆ ಹೊಸ ಮನೆ-ಬದುಕು ಕಟ್ಟಿಕೊಟ್ಟ ಧರ್ಮಸ್ಥಳ ಪ್ರಾ.ಕೃ.ಪ.ಸಹಕಾರಿ ಸಂಘ: ಸಂಘದ ಅನುಕರಣೀಯ ಕಾರ್ಯಕ್ರಮ

0

ಧರ್ಮಸ್ಥಳ: ಮನೆಗೆ ಆಧಾರವಾಗಬೇಕಿದ್ದ ಯಜಮಾನ ಆರು ವರ್ಷಗಳ ಹಿಂದೆ ವಿಧಿವಶರಾಗಿದ್ದಾರೆ. ಮನೆಯ ಆಧಾರ ಸ್ತಂಭ ಕುಸಿದ ನಂತರ ಮೂವರು ಹೆಣ್ಣುಮಕ್ಕಳನ್ನು ಸಾಕುವ ಜವಾಬ್ದಾರಿ ಬಿದ್ದಿದ್ದು ಕುಸುಮಾವತಿಯವರ ಮೇಲೆ. ಬಡತನದ ಬೇಗೆ ಒಂದು ಕಡೆ, ಮೂವರು ಹೆಣ್ಣು ಮಕ್ಕಳನ್ನು ಸಾಕಿ-ಸಲಹುವ ಸವಾಲು ಮತ್ತೊಂದೆಡೆ. ಕೆಲಸ ಮಾಡುತ್ತಾ ಮಕ್ಕಳನ್ನು ಸಾಕುತ್ತಿದ್ದ ಕುಸುಮಾವತಿಯವರಿಗೆ ಹೊರೆ ಜಾಸ್ತಿಯಾಗುತ್ತಾ ಹೋಯಿತು. ಮನೆಯ ಪರಿಸ್ಥಿತಿ ಹದಗೆಡುತ್ತಾ ಹೋಯಿತು.

ಮಕ್ಕಳ ಓದಿಗೆ ಹೆಚ್ಚಿನ ಒತ್ತು: ಕುಸುಮಾವತಿಯವರು ಮನೆಯ ಪರಿಸ್ಥಿತಿಯ ಬಗ್ಗೆ ಗಮನ ಹರಿಸದೇ, ಮಕ್ಕಳನ್ನು ಓದಿಸುವತ್ತ ಚಿತ್ತ ಹರಿಸಿದರು. ಮಕ್ಕಳು ವಿದ್ಯೆ ಕಲಿಯಬೇಕು. ತನ್ನ ಪರಿಸ್ಥಿತಿ ಅವರಿಗೆ ಬರಬಾರದೆಂಬುದು ಕುಸುಮಾವತಿ ಕಾಳಜಿ. ಆದರೆ, ಪ್ರಪಾತದಲ್ಲಿದ್ದ ಮನೆ, ಅದಕ್ಕಾಗಿ ದುರ್ಗಮ ಹಾದಿ, ಮನೆಯ ಮುಂದೆಯೇ ಹರಿಯುವ ಕಾಡಿನ ತೊರೆ, ಮಳೆಗಾಲದಲ್ಲಂತೂ ಇಲ್ಲಿ ಜೀವಿಸುವುದೇ ಅಪಾಯ ಎನ್ನುವಷ್ಟರ ಮಟ್ಟಿಗೆ ದುಸ್ಥಿತಿ. ಮನೆ ಬದಲಾವಣೆ ಅಥವಾ ಹೊಸಮನೆ ಕಟ್ಟುವುದಕ್ಕೆ ಅವರ ಕಷ್ಟದ ಪರಿಸ್ಥಿತಿಯಿಂದ ಸಾಧ್ಯವಾಗಿಲ್ಲ.

ಕುಸುಮಾವತಿಯವರ ಕಷ್ಟ ದೂರಮಾಡಲು ಮುಂದಾಗಿದ್ದು ಧರ್ಮಸ್ಥಳ ಸೊಸೈಟಿ. ಧರ್ಮಸ್ಥಳ ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯೆಯಾಗಿದ್ದ ಕುಸುಮಾವತಿಯವರ ಪರಿಸ್ಥಿತಿಯನ್ನು ಗಮನಿಸಿದ ಅಧ್ಯಕ್ಷ ಪ್ರೀತಮ್ ನೇತೃತ್ವದ ಆಡಳಿತ ಮಂಡಳಿ, ಅವರಿಗೆ ಮನೆ ಕಟ್ಟಿಕೊಡಲು ನಿರ್ಧರಿಸಿತು. ಇದಕ್ಕಾಗಿ ಸಂಘದ ಸದಸ್ಯರನ್ನು ಸಂಪರ್ಕಿಸಲಾಯಿತು. ತಮ್ಮ ತಮ್ಮ ಶಕ್ತ್ಯಾನುಸಾರ ಸಹಕಾರವನ್ನು ಪಡೆದು ಸದಸ್ಯರಿಂದಲೇ ಸಂಘದ ಸದಸ್ಯೆಗೆ ಮನೆ ಕಟ್ಟಿಕೊಡಲು ನಿರ್ಧರಿಸಿದರು.

30ರಂದು ಗೃಹಪ್ರವೇಶ: ಪುದುವೆಟ್ಟುವಿನ ಬಾಯಿತ್ಯಾರುವಿನಲ್ಲಿ ಕುಸಮಾವತಿಯವರ ತಂದೆಯವರು ಮಗಳಿಗೆ ಜಾಗವನ್ನು ನೀಡಿದರು. ಈ ಜಾಗದಲ್ಲಿ ರೂ. ೧೦ ಲಕ್ಷ ವೆಚ್ಚದಲ್ಲಿ ಉನ್ನತಿ ಹೆಸರಿನ ಮನೆ ನಿರ್ಮಾಣ ಮಾಡಲಾಯಿತು. ಈ ಮೂಲಕ ತಮ್ಮ ಸದಸ್ಯೆಗೆ ಮನೆ ನಿರ್ಮಾಣ ಮಾಡಿಕೊಟ್ಟ ಕೀರ್ತಿ ಧರ್ಮಸ್ಥಳ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಸಲ್ಲುತ್ತದೆ. ಮೇ ೩೦ರಂದು ಮನೆಯ ಉದ್ಘಾಟನಾ ಕಾರ್ಯಕ್ರಮ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರ ಉಪಸ್ಥಿತಿಯಲ್ಲಿ ನೆರವೇರಲಿದೆ.

ಮಹಾ ಕಾರ್ಯಕ್ಕೆ ಹಲವರ ಸಹಕಾರವಿದೆ: ಪ್ರಾ.ಕೃ.ಪ.ಸ.ಸಂ.ಧರ್ಮಸ್ಥಳ ಅಧ್ಯಕ್ಷ ಪ್ರೀತಮ್ ಡಿ.ಯವರು ನಮ್ಮ ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯರೇ ಸೇರಿ ಇಂತಹದ್ದೊಂದು ಕಾರ್ಯ ಮಾಡಿದ್ದಾರೆ. ಇದಕ್ಕಾಗಿ ಸಂಘದ ಅಧ್ಯಕ್ಷನಾಗಿದ್ದುಕೊಂಡು ಎಲ್ಲ ಸದಸ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಮ್ಮ ಶಾಸಕ ಹರೀಶ್ ಪೂಂಜರವರ ಪ್ರೋತ್ಸಾಹ ಮಾರ್ಗದರ್ಶನದಿಂದ ಈ ಕಾರ್ಯ ನಡೆಯುತ್ತಿದೆ. ಇದಕ್ಕೆ ಧರ್ಮಸ್ಥಳ, ಪುದುವೆಟ್ಟು ಗ್ರಾಮದ ಸದಸ್ಯರು, ಗ್ರಾಮ ಪಂಚಾಯತ್, ನಮ್ಮ ಸಂಘದ ನಿರ್ದೇಶಕರು, ಸದಸ್ಯರು, ಸಿಬ್ಬಂದಿ ಕೂಡ ಸಾಥ್ ನೀಡಿದ್ದಾರೆ. ಮುಂದಿನ ವರ್ಷದಿಂದ ಮನೆಯ ಅಗತ್ಯವಿರುವ ಎರಡು ಕುಟುಂಬಗಳನ್ನು ಗುರುತಿಸಿ ಮನೆ ಕಟ್ಟಿಕೊಡಬೇಕೆಂಬ ಬಗ್ಗೆ ಚಿಂತಿಸಿದ್ದೇವೆ. ನಮ್ಮ ಸದಸ್ಯರ ಈ ಕಾರ್ಯ ಎಲ್ಲರಿಗೂ ಸ್ಫೂರ್ತಿಯಾಗಲಿ, ಇಂತಹ ಮಹಾನ್ ಕೆಲಸ ಎಲ್ಲಾ ಸಂಘ ಸಂಸ್ಥೆಗಳಿಂದ ಆಗಲಿ ಅನ್ನುವುದು ನಮ್ಮ ಆಶಯ ಎಂದರು.

ಕುಸುಮಾವತಿ, (ಫಲಾನುಭವಿಯವರು) “ನಮ್ಮ ಮನೆಯ ಪರಿಸ್ಥಿತಿ ನೋಡಿ ತಂದೆ ನೀಡಿದ ಜಾಗದಲ್ಲಿ ನಮಗೆ ಧರ್ಮಸ್ಥಳ ಸೊಸೈಟಿಯವರು ಮನೆ ನಿರ್ಮಿಸಿ ಕೊಟ್ಟಿದ್ದಾರೆ. ನನ್ನನ್ನು ಮತ್ತು ಮಕ್ಕಳನ್ನು ಪಾಳು ಮನೆಯಿಂದ ಪಾರು ಮಾಡಿ, ಹೊಸ ಮನೆಗೆ ಶಿಫ್ಟ್ ಮಾಡುತ್ತಿದ್ದಾರೆ. ಇದು ತುಂಬಾ ಸಂತೋಷ ನೀಡಿದೆ. ಧರ್ಮಸ್ಥಳ ಸೊಸೈಟಿಯವರ ಈ ಕಾರ್ಯವನ್ನು ಯಾವತ್ತೂ ಕೂಡ ಮರೆಯುವುದಿಲ್ಲ. ಸಹಕರಿಸಿದ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ” ಎಂದರು.

ವರದಿ: ದಾಮೋದರ್ ದೊಂಡೋಲೆ

LEAVE A REPLY

Please enter your comment!
Please enter your name here