

ಬೆಳ್ತಂಗಡಿ: ಭಗವಂತನನ್ನು ಒಲಿಸಲು ನಾಮಸಂಕೀರ್ತನೆ ಸುಲಭದ ದಾರಿ. ವಿಷ್ಣು ಸಹಸ್ರನಾಮವನ್ನು ಪಠಿಸುವುದರಿಂದ ಸಕಲ ದುರಿತಗಳು ನಿವಾರಣೆಯಾಗಿ ಶ್ರೇಯಸ್ಸನ್ನು ಸಂಪಾದಿಸಬಹುದೆಂದು ಬ್ರಹ್ಮಶ್ರೀ ಕೆಮ್ಮಿoಜೆ ಕಾರ್ತಿಕ ತಂತ್ರಿಗಳು ತಿಳಿಸಿದರು. ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಲೋಕಕಲ್ಯಾಣರ್ಥವಾಗಿ ಜರಗಿದ ಶ್ರೀ ಮಹಾವಿಷ್ಣುಯಾಗದ ಧಾರ್ಮಿಕ ಸಭೆಯಲ್ಲಿ ಯಾಗದ ಫಲಶ್ರುತಿಯ ಬಗ್ಗೆ ತಿಳಿಸಿದರು.
ಮುಖ್ಯ ಅತಿಥಿಗಳಾಗಿದ್ದ ಪುತ್ತೂರಿನ ದ್ವಾರಕಾ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಗೋಪಾಲಕೃಷ್ಣ ಭಟ್ ಆಡಳಿತ ಟ್ರಸ್ಟ್ ಮತ್ತು ಭಕ್ತಾಭಿಮಾನಿಗಳು ದೇವಸ್ಥಾನಕ್ಕೆ ಕೊಡುಗೆಯಾಗಿ ನೀಡಿದ ಸಿಸಿಟಿವಿಯನ್ನು ಉದ್ಘಾಟಿಸಿ ಶುಭ ಹಾರೈಸಿದರು.
ನಳೀಲು ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಸಂತೋಷ್ ಕುಮಾರ್ ರೈ ದೇವಳಕ್ಕೆ ಭದ್ರತಾ ಕೋಶವನ್ನು ಸಮರ್ಪಿಸಿದ ಬಗ್ಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು.

ಪೊಲೀಸ್ ಧ್ವಜ ದಿನಾಚರಣೆಯ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕ ಪುರಸ್ಕೃತರಾದ ಮಂಗಳೂರಿನ ಸೈಬರ್ ಕ್ರೈಂ ಠಾಣೆಯ ಹೆಡ್ ಕಾನ್ಸ್ ಸ್ಟೇಬಲ್ ಬಾರ್ಯ ಗ್ರಾಮದ ಪ್ರವೀಣ ಯಂ ಇವರನ್ನು ದೇವಳದ ವತಿಯಿಂದ ಸನ್ಮಾನಿಸಲಾಯಿತು. ದೇವಳದ ಟ್ರಸ್ಟಿಯೂ ಆಗಿರುವ ಅವರು ಸನ್ಮಾನಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು.
ಸಭಾ ಅಧ್ಯಕ್ಷತೆ ವಹಿಸಿದ್ದ ಆಡಳಿತ ಟ್ರಸ್ಟ್ ಅಧ್ಯಕ್ಷ ಭಾಸ್ಕರ ಬಾರ್ಯ ದೇವಳದ ಅಭಿವೃದ್ಧಿಯಲ್ಲಿ ಭಕ್ತರ ಸಹಕಾರವನ್ನು ಕೃತಜ್ಞತೆಯಿಂದ ಸ್ಮರಿಸಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುವಂತೆ ಶ್ರೀ ವಿಷ್ಣುಮೂರ್ತಿಯ ಅನುಗ್ರಹ ಎಲ್ಲರಿಗೂ ಪ್ರಾಪ್ತವಾಗಲಿಯೆಂದು ತಿಳಿಸಿದರು.
ವೇದಿಕೆಯಲ್ಲಿ ಅದಮಗುತ್ತು ಬಟ್ಯಪ್ಪ ಪೂಜಾರಿ ಮತ್ತು ಬಾರ್ಯಗುತ್ತು ಶೇಷಪ್ಪ ಸಾಲಿಯಾನ್ ಉಪಸ್ಥಿತರಿದ್ದರು. ದೇವಳದ ಟ್ರಸ್ಟಿಗಳಾದ ಇಂದಿರಾ ಮತ್ತು ಸುದರ್ಶನ ಕೆ. ಸನ್ಮಾನ ಪತ್ರ ವಾಚಿಸಿದರು.
ಬಾರ್ಯ ಸಿ.ಎ ಬ್ಯಾಂಕಿನ ನಿರ್ದೇಶಕ ರಾಜೇಶ್ ರೈ ಸ್ವಾಗತಿಸಿದರು. ದಿವಾಕರ ಆಚಾರ್ಯ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟಿಗಳಾದ ಬಿ.ಎನ್ ರಾಜೇಶ್ ರಾವ್ ಮತ್ತು ಪ್ರಶಾಂತ ಪೈ ಸಹಕರಿಸಿದರು.
ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಜರಗಿದ ಮಹಾವಿಷ್ಣುಯಾಗದಲ್ಲಿ ಪವಿತ್ರ ಪಾಣಿ ಸೂರ್ಯನಾರಾಯಣ ಕುದ್ದಣ್ಣಾಯ, ಅರ್ಚಕರಾದ ಗುರುಪ್ರಸಾದ್ ನೂರಿತ್ತಾಯ ಮತ್ತು ದೇವಳದ ಟ್ರಸ್ಟಿಗಳು, ಭಕ್ತಾದಿಗಳು ಭಾಗವಹಿಸಿದ್ದರು. ಪ್ರಸಾದ ವಿತರಣೆಯೊಂದಿಗೆ ಅನ್ನ ಸಂತರ್ಪಣೆಯು ಜರಗಿತು. ದೇವಳದ ಟ್ರಸ್ಟಿ ಶಿವರಾಮ ನಾಯ್ಕ್ ವಂದಿಸಿದರು.