

ಬೆಳ್ತಂಗಡಿ: ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ, ತಾಲೂಕು ಯುವ ಬಂಟರ ಹಾಗೂ ಮಹಿಳಾ ಬಂಟರ ವಿಭಾಗದ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾಟ ಏರ್ಪಡಿಸಲಾಗಿದೆ.
ಪಂದ್ಯಾಟಕ್ಕೆ ದೇವು ಪೂಂಜ ಟ್ರೋಫಿ -2025 ಎಂದು ಹೆಸರಿಡಲಾಗಿದ್ದು, ಏ. 20ರಂದು ಬೆಳಗ್ಗೆ 9ರಿಂದ ಶಕ್ತಿನಗರ ಗುರುವಾಯನಕೆರೆಯ ನವಶಕ್ತಿ ಕ್ರೀಡಾಂಗಣದಲ್ಲಿ ಜರುಗಲಿದೆ.
ಬೆಳ್ತಂಗಡಿ ತಾಲೂಕಿನ ಬಂಟ ಬಾಂಧವರಿಗೆ ಮಾತ್ರ ಅವಕಾಶ ಇರಲಿದ್ದು, ವಿಜೇತರಿಗೆ ದೇವು ಪೂಂಜ ಟ್ರೋಫಿ ಜೊತೆ ಪ್ರಥಮ ಬಹುಮಾನ 10 ಸಾವಿರ ರೂ., ದ್ವಿತೀಯ ಬಹುಮಾನ 5 ಸಾವಿರ ರೂ. ಸಿಗಲಿದೆ.
ತಂಡಗಳ ತಳುಕು ಪ್ರಕ್ರಿಯೆಯನ್ನು ಏ. 18ರಂದು, ಸಂಜೆ 5.00 ಗಂಟೆಗೆ ಬಂಟರ ಭವನ ಗುರುವಾಯನಕೆರೆಯಲ್ಲಿ ನಡೆಸಲಾಗುವುದು.
ಪಂದ್ಯಾಟದ ಸಂದರ್ಭದಲ್ಲಿ ಪ್ರತೀ ವಲಯದ ತಂಡದ ಒಬ್ಬ ಸದಸ್ಯ ಕಡ್ಡಾಯವಾಗಿ ಹಾಜರಿರಬೇಕು. ಕ್ರೀಡಾಳುಗಳು ಆಧಾರ್ ಕಾರ್ಡ್ ಜೊತೆಗೆ ತಮ್ಮ ವಲಯದ ಅಧ್ಯಕ್ಷರ/ವಲಯ ಸಂಚಾಲಕರ/ತಾಲೂಕು ಕಾರ್ಯಕಾರಿ ಸಮಿತಿ ಸದಸ್ಯರ ಅನುಮತಿಯನ್ನು ಪಡೆದಿರಬೇಕು, ತಂಡಗಳ ಹೆಸರು ನೊಂದಾಯಿಸಿ ಒಂದು ತಂಡ ಮಾತ್ರ ಭಾಗವಹಿಸಿದಲ್ಲಿ ಅಂತಹ ತಂಡಗಳನ್ನು ಅನರ್ಹಗೊಳಿಸಲಾಗುವುದು.
ಈ ಪಂದ್ಯಾಟವು 11 ಜನರ ಅಂಡರ್ ಅರ್ಮ್ ಮಾದರಿಯಾಗಿದ್ದು 4 ಓವರ್ಗಳಿಗೆ ಸೀಮಿತವಾಗಿದೆ. ಪ್ರಥಮ ಓವರ್ ಪವರ್ ಪ್ಲೇ ಆಗಿರುತ್ತದೆ. ಭಾಗವಹಿಸುವ ಪ್ರತೀ ತಂಡಗಳು ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಕಡ್ಡಾಯವಾಗಿ ಹಾಜರಿರತಕ್ಕದ್ದು.
ತೀರ್ಪುಗಾರರು ಮತ್ತು ಸಂಘಟಕರ ತೀರ್ಮಾನವೇ ಅಂತಿಮ. ಯಾವುದೇ ಗೊಂದಲಗಳಿಗೆ ಅವಕಾಶವಿರುವುದಿಲ್ಲ ಎಂಬುದಾಗಿ ನಿಯಮಗಳನ್ನು ಹೇರಲಾಗಿದೆ.