ಪ್ರೇರಣಾ ಸಂಜೀವಿನಿ ಮಹಿಳಾ ಒಕ್ಕೂಟದ ಮಹಾಸಭೆ

0

ಉಜಿರೆ: ಮಾ. 18ರಂದು ಉಜಿರೆ ಗ್ರಾಮ ಪಂಚಾಯತ್ ನಲ್ಲಿ ಪ್ರೇರಣಾ ಸಂಜೀವಿನಿ ಮಹಿಳಾ ಒಕ್ಕೂಟ ಇದರ ಮಹಾಸಭೆಯು ಅಧ್ಯಕ್ಷೆ ಶೀಲಾವತಿ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಪಂಚಾಯತ್ ಅಧ್ಯಕ್ಷೆ ಉಷಾ ಕಿರಣ್ ಕಾರಂತ್ ನೆರವೇರಿಸಿ, ಸಂಜೀವಿನಿ ಮಹಿಳೆಯರು ಸರಕಾರದ ಸೌಲಭ್ಯಗಳನ್ನು ಬಳಸಿಕೊಂಡು ಸಶಕ್ತರಾಗಿ ಸಮಾಜಕ್ಕೆ ಮಾದರಿಯಾಗಬೇಕು ಎಂದು ಶುಭ ಹಾರೈಸಿದರು.

ಮಹಿಳಾ ದಿನಾಚರಣೆಯ ಸಲುವಾಗಿ ಒಕ್ಕೂಟದ ಸದಸ್ಯರಿಗೆ ವಿವಿಧ ಸ್ಪರ್ಧೆ ಏರ್ಪಡಿಸಲಾಯಿತು. ಸ್ಪರ್ಧೆಯ ಬಹುಮಾನವನ್ನು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ನೀಡಿ ಸಂಜೀವಿನಿ ಒಕ್ಕೂಟದ ಕಾರ್ಯ ಚಟುವಟಿಕೆಗಳಿಗೆ ಪಂಚಾಯತ್ ನ ಬೆಂಬಲವನ್ನು ವ್ಯಕ್ತಪಡಿಸಿದರು.

ನಂತರ ನೂತನ ಪದಾಧಿಕಾರಿಗಳ ಆಯ್ಕೆ ನಡೆದು, ಒಕ್ಕೂಟದ ನೂತನ ಅಧ್ಯಕ್ಷರಾಗಿ ವಿನುತ ರಜತ್ ಗೌಡ, ಉಪಾಧ್ಯಕ್ಷೆಯಾಗಿ ಲೀಲಾ ಶೆಟ್ಟಿ, ಕಾರ್ಯದರ್ಶಿಯಾಗಿ ದೀಪಾ, ಜತೆ ಕಾರ್ಯದರ್ಶಿಯಾಗಿ ಅಶ್ವಿನಿ, ಕೋಶಧಿಕಾರಿಯಾಗಿ ಶಾಂಭವಿ ಸರ್ವಾನುಮತದಿಂದ ಆಯ್ಕೆಯಾದರು.

ಒಕ್ಕೂಟದ ಧ್ಯೇಯೋದ್ದೇಶ ಮತ್ತು ಕಾರ್ಯಚಟುವಟಿಕೆಗಳ ಬಗ್ಗೆ ಒಕ್ಕೂಟದ ವಲಯ ಮೇಲ್ವಿಚಾರಕ ಜಯಾನಂದ ಸಮಗ್ರ ಮಾಹಿತಿ ನೀಡಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರವಿ ಕುಮಾರ್, ಕಾರ್ಯದರ್ಶಿ ಶ್ರವಣ್ ಹಾಗೂ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಜಯಾನಂದ ಹಾಗೂ ಅಧ್ಯಕ್ಷೆ ಶೀಲಾ ಇವರನ್ನು ಸನ್ಮಾನಿಸಲಾಯಿತು.

ಸುಮಿತ್ರ ಪ್ರಾರ್ಥಿಸಿ, ಕೃಷಿ ಸಖಿ ಭಾಗೀರಥಿ ಸ್ವಾಗತಿಸಿದರು. ಒಕ್ಕೂಟದ ಎಮ್.ಬಿ. ಕೆ ಸುಜಾತ ವರದಿ ಮಂಡಿಸಿದರು. ಒಕ್ಕೂಟ ಕಾರ್ಯದರ್ಶಿ ರೇವತಿ ಕಾರ್ಯಕ್ರಮ ನಿರೂಪಿಸಿ, ಎಲ್.ಸಿ.ಆರ್.ಪಿ. ಚಿತ್ರಾ ವಂದಿಸಿದರು.

LEAVE A REPLY

Please enter your comment!
Please enter your name here