ಗೇರುಕಟ್ಟೆ: ಎಟಿಎಂ ಕೇಂದ್ರದಲ್ಲಿ ಅಪರಿಚಿತರಿಂದ ಹಣ ವಂಚನೆ

0

ಬೆಳ್ತಂಗಡಿ: ಗೇರುಕಟ್ಟೆಯಲ್ಲಿ ಎಟಿಎಂ ಕೇಂದ್ರದಲ್ಲಿ ಹಣ ತೆಗೆಯುತ್ತಿದ್ದ ವೃದ್ಧನ ಕೈಯಿಂದ ಎಟಿಎಂ ಕಾರ್ಡ್ ಅನ್ನು ಕಸಿದುಕೊಂಡ ಘಟನೆ ಸಂಭವಿಸಿದ್ದು ಈ ಬಗ್ಗೆ ಬೆಳ್ತಂಗಡಿ ಠಾಣೆಗೆ ದೂರು ನೀಡಲಾಗಿದ್ದು ಪ್ರಕರಣ ದಾಖಲಿಸಲಾಗಿದೆ.

ಗೇರುಕಟ್ಟೆ ನಿವಾಸಿ ಅಬೂಬಕ್ಕರ್ (71) ಎಂಬವರೇ ಹಣ ಕಳೆದುಕೊಂಡ ವ್ಯಕ್ತಿಯಾಗಿದ್ದಾರೆ.

ಇವರು ಗೇರುಕಟ್ಟೆ ಕೆನರಾ ಬ್ಯಾಂಕಿನ ಎ.ಟಿ.ಎಂ ನಲ್ಲಿ ಅ.2ರಂದು ಹಣ ತೆಗೆಯಲೆಂದು ಹೋಗಿದ್ದು ಈ ಸಂದರ್ಭದಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಎ.ಟಿ.ಎಂ ಒಳಗೆ ಬಂದಿದ್ದು ಅವರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಹಿಂದಿಯಲ್ಲಿ ಮಾತನಾಡುತ್ತಿದ್ದ ಇವರಿಗೆ ಸಹಾಯ ಅಗತ್ಯವಿಲ್ಲ ಎಂದು ಹೇಳಿದರೂ ಅಪರಿಚಿತರು ಅಲ್ಲಿ ಅವರೊಂದಿಗೆ ಇದ್ದು ಹಣ ತೆಗೆದ ಬಳಿಕ ಅವರು ಅಂದು ಹಿಂತಿರುಗಿದ್ದರು. ಇದಾದ ಎರಡು ದಿನಗಳ ಬಳಿಕ ಮತ್ತೆ ಎಟಿಎಂಗೆ ಹೋದಾಗ ಎ‌ಟಿಎಂ‌ ಕಾರ್ಡ್ ಕೆಲಸ ಮಾಡದಿರುವುದು ಕಂಡು ಬಂದಿದೆ.

ಬ್ಯಾಂಕಿನಲ್ಲಿ ವಿಚಾರಿಸಿದಾಗ ಖಾತೆಯಲ್ಲಿದ್ದ 49,200ರೂ. ನಗದನ್ನು ಎ‌ಟಿಎಂ ಕಾರ್ಡ್ ಬಳಸಿ ತೆಗೆದಿರುವುದು ಕಂಡು ಬಂದಿದೆ. ಅಪರಿಚಿತ ವ್ಯಕ್ತಿಗಳು ಅ‌.2ರಂದು ಎಟಿಎಂ ಕೇಂದ್ರದಿಂದ ಅಬೂಬಕ್ಕರ್ ಅವರಿಂದ ಎಟಿಎಂ ಕಾರ್ಡನ್ನು ಅಪಹರಿಸಿದ್ದು ಯಾವುದೋ ಹಳೆಯ ಕಾರ್ಡನ್ನು ಅವರಿಗೆ ನೀಡಿದ್ದರು. ಬಳಿಕ ಕಾರ್ಡನ್ನು ಉಪಯೋಗಿಸಿ ಹಣ ಕಬಳಿಸಿದ್ದರು. ಇದೀಗ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here