ಕರ್ನಾಟಕ ಕೇಂದ್ರೀಯ ವಿ.ವಿ. ಸಂಶೋಧನಾ ಯೋಜನೆ ಅನುದಾನಕ್ಕೆ ಆಯ್ಕೆ

0

ಬೆಳ್ತಂಗಡಿ: ದಕ್ಷಿಣ ಭಾರತದ ಬುಡಕಟ್ಟು ಸಮುದಾಯಗಳ ಸಬಲೀಕರಣ ಹಾಗೂ ವಿಕಸಿತ ಭಾರತದಲ್ಲಿ ಇವರ ಪಾತ್ರದ ಕುರಿತು ಸಂಶೋಧನೆ ನಡೆಸಲು ಕರ್ನಾಟಕ ಕೇಂದ್ರೀಯ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕರ ತಂಡ ಭಾರತದ ಪ್ರತಿಷ್ಠಿತ ಇಂಡಿಯನ್ ಕೌನ್ಸಿಲ್ ಫಾರ್ ಸೋಷಿಯಲ್ ಸೈನ್ಸ್ ರೀಸರ್ಚ್‌ಗೆ ಸಲ್ಲಿಸಲಾದ ಪ್ರಸ್ತಾವನೆ ಸಂಶೋಧನಾ ಅನುದಾನಕ್ಕೆ ಆಯ್ಕೆ ಆಗಿದೆ. ಈ ಪ್ರಾಧ್ಯಾಪಕರ ತಂಡದಲ್ಲಿ ಶಿರ್ಲಾಲು ನಿವಾಸಿ ಡಾ.ರೋಹಿಣಾಕ್ಷ ಅವರು ಒಳಗೊಂಡಿದ್ದಾರೆ. ಈ ಸಂಶೋಧನೆಯು ಬುಡಕಟ್ಟು ಜನ ಸಮುದಾಯದಲ್ಲಿನ ಪ್ರಾಚೀನ ಸಾಂಪ್ರದಾಯಿಕ ಜ್ಞಾನ ಕೌಶಲ್ಯ, ಸಂಸ್ಕೃತಿ ಹಾಗೂ ಬುಡಕಟ್ಟು ಜನರ ಉದ್ಯಮಶೀಲ ಸಾಮರ್ಥ್ಯಗಳ ಬಗ್ಗೆ ಆಳವಾದ ಅಧ್ಯಯನ ನಡೆಸಲಿದೆ.

ಈ ಸಂಶೋಧನಾ ಅಧ್ಯಯನದಿಂದ ಬುಡಕಟ್ಟು ಕಲ್ಯಾಣಕ್ಕಾಗಿ ಮುಂದಿನ ಕಾರ್ಯ ಯೋಜನೆಗಳನ್ನು ರೂಪಿಸಲು, ಸಾಂಪ್ರದಾಯಿಕ ಜ್ಞಾನದ ಸಂರಕ್ಷಣೆ ಹಾಗೂ ಪ್ರಸರಣದ ಕಾರ್ಯದಲ್ಲಿ ಹೆಚ್ಚಿನ ಸಹಾಯ ಆಗಲಿದೆ. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವ್ಯವಹಾರ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಶಿವಕುಮಾರ ಎಂ.ಬೆಳ್ಳಿ, ಜಾನಪದ ಶಾಸ್ತ್ರ ಮತ್ತು ಬುಡಕಟ್ಟು ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ರೋಹಿಣಾಕ್ಷ, ಸಮಾಜಕಾರ್ಯ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಪವಿತ್ರ ಆಲೂರು, ಕಾನೂನು ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಬಸವರಾಜ ಕುಬಕಡ್ಡಿ ಅವರಗಳ ಸಂಶೋಧಕರ ತಂಡ ಈ ಸಂಶೋಧನಾ ಕಾರ್ಯಯೋಜನೆಯಲ್ಲಿ ಭಾಗಿಯಾಗಿದ್ದಾರೆ. ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕೇರಳ ರಾಜ್ಯಗಳಲ್ಲಿರುವ ವಿವಿಧ ಬುಡಕಟ್ಟು ಸಮುದಾಯಗಳ ಪಾರಂಪರಿಕ ಜ್ಞಾನವನ್ನು ಉದ್ಯಮಶೀಲತೆಯಲ್ಲಿ ಬಳಸಿಕೊಂಡು ಸಮುದಾಯಗಳ ಸಬಲೀಕರಣಗೊಳಿಸಿ ಪ್ರಧಾನಮಂತ್ರಿಗಳ ಕನಸಿನ ವಿಕಸಿತ ಭಾರತವನ್ನು ಸಾಧಿಸುವಲ್ಲಿ ಹೇಗೆ ಬಳಸಿಕೊಳ್ಳಬಹುದು ಎನ್ನುವ ಸಂಶೋಧನೆ ಇದಾಗಲಿದೆ ಎಂದು ತಿಳಿಸಿದ್ದಾರೆ.

ಕಲ್ಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವ ವಿದ್ಯಾಲಯದ ಜಾನಪದ ಶಾಸ್ತ್ರ ಮತ್ತು ಬುಡಕಟ್ಟು ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ. ರೋಹಿಣಾಕ್ಷ ಶಿರ್ಲಾಲುರವರು ಅಂಕಣಗಾರರೂ, ಭಾಷಣಗಾರರೂ ಆಗಿದ್ದು ಈ ಹಿಂದೆ ಪುತ್ತೂರಿನ ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದರು.

LEAVE A REPLY

Please enter your comment!
Please enter your name here