ಗುರಿಪಳ್ಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಒಕ್ಕೂಟದ ಪದಗ್ರಹಣ- ಪ್ರತಿಯೊಬ್ಬರ ಅಭಿವೃದ್ಧಿಗೆ ಯೋಜನೆಯ ಸೇವೆ ಅನನ್ಯ: ನಾಮ್ ದೇವ್ ರಾವ್

0

ಗುರಿಪಳ್ಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್, ಪ್ರಗತಿ ಬಂದು ಸ್ವ-ಸಹಾಯ ಸಂಘಗಳ ಒಕ್ಕೂಟ ಗುರಿಪಳ್ಳ ಹಾಗೂ ಶ್ರೀ ಗುರುರಾಘವೇಂದ್ರ ಭಜನಾ ಮಂಡಳಿ ಜಯನಗರ, ಗುರಿಪಳ್ಳ ಇದರ ಸಂಯುಕ್ತ ಆಶ್ರಯದಲ್ಲಿ 21ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಭಜನಾ ಮಂಡಳಿಯ ವಾರ್ಷಿಕೋತ್ಸವ ಹಾಗೂ ಒಕ್ಕೂಟದ ಪದಗ್ರಹಣ ಕಾರ್ಯಕ್ರಮವು ಶ್ರೀ ಗುರುರಾಘವೇಂದ್ರ ಭಜನಾ ಮಂದಿರದ ವಠಾರದಲ್ಲಿ ನಡೆಯಿತು.

ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆಯು ನೆರವೇರಿತು, ಸಾಮೂಹಿಕವಾಗಿ ವೃತದಾರಿಗಳು ಪೂಜೆಯಲ್ಲಿ ಭಾಗವಹಿಸಿದರು.ಶ್ರೀ ಗುರು ರಾಘವೇಂದ್ರ ಭಜನಾ ಮಂಡಳಿ ಗುರಿಪಳ್ಳದ ಭಜಕರು ಕುಣಿತ ಭಜನಾ ಕಾರ್ಯಕ್ರಮವನ್ನು ನೆರವೇರಿಸಿದರು.

ದೀಪ ಬೆಳಗಿಸುವ ಮೂಲಕ ಪದಗ್ರಹಣದ ಉದ್ಘಾಟನೆಯನ್ನು ಮಾಡಿದ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘ ಮುಂಡಾಜೆಯ ಸಂಚಾಲಕ ನಾಮ್ ದೇವ್ ರಾವ್ ರವರು 1982ರಲ್ಲಿ ಹುಟ್ಟಿಕೊಂಡ ಯೋಜನೆಯು ಪ್ರತಿಯೊಬ್ಬರ ಬದುಕಿನಲ್ಲಿ ತನ್ನ ಕೃಷಿಯಿಂದ ಹಿಡಿದು ಮಕ್ಕಳ ಉನ್ನತ ಶಿಕ್ಷಣ ತನ್ನ ಮನೆಯ ಅಭಿವೃದ್ಧಿ ಹಾಗೂ ದುಶ್ಚಟ ಮುಕ್ತ ಸಮಾಜವನ್ನು ನಿರ್ಮಿಸುವ ಕ್ರಾಂತಿಯೊಂದಿಗೆ ಡಾ.ಡಿ.ವೀರೇಂದ್ರ ಹೆಗ್ಗಡೆ ಯವರ ಕನಸು ಗ್ರಾಮೀಣ ಜನರ ಅಭಿವೃದ್ಧಿಯ ಮೂಲಕವಾಗಿ ನನಸಾಗಿದೆ ಇದರ ಮೂಲಕ ಯೋಜನೆಯ ರಾಜ್ಯವನ್ನು ಹೊರತುಪಡಿಸಿ ದೇಶದ ಇತಿಹಾಸದಲ್ಲಿಯೇ ಒಂದು ಹೊಸ ಬಾಷ್ಯವನ್ನು ಬರೆದಿದೆ ಎಂದು ತಿಳಿಸಿದರು.21 ವರುಷಗಳಿಂದ ಶ್ರೀ ಗುರು ರಾಘವೇಂದ್ರ ಭಜನ ಮಂಡಳಿ ನಿರಂತರವಾದ ಪೂಜೆ ಸಂಸ್ಕಾರ ಹಿತ ಬದುಕಿಗೆ ಈ ಭಜನಾ ಮಂಡಳಿಯು ಊರಿಗೆ ಆದಾರವಾಗಿದ್ದು, ಇಲ್ಲಿಯ ಕುಣಿಕ ಭಜನಾ ತಂಡವು ಇದೀಗ ಜಿಲ್ಲೆಗೆ ಅತ್ಯುತ್ತಮ ಭಜನಾ ತಂಡದಲ್ಲಿ ಒಂದಾಗಿದೆ ಎಂದು ತಿಳಿಸಿದರು.

ಬೆಳ್ತಂಗಡಿ ತಾಲೂಕಿನ ಯೋಜನಾಧಿಕಾರಿ ಸುರೇಂದ್ರ ಕುಮಾರ್ ರವರು ಯೋಜನೆಯ ಕಾರ್ಯಕ್ರಮಗಳು ಗ್ರಾಮೀಣ ಮಟ್ಟದಲ್ಲಿ ಅತ್ಯುತ್ತಮವಾಗಿ ಅನುಷ್ಠಾನಿಸಲು ಪ್ರತಿಯೊಬ್ಬರ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ತಿಳಿಸುತ್ತಾ ಯೋಜನೆಗೆ ಎಲ್ಲ ಪಾಲುದಾರ ಸದಸ್ಯರು ಊರಿನವರು ಉತ್ತಮವಾದ ಸಹಕಾರವನ್ನು ನೀಡುತ್ತಿದ್ದು ಇನ್ನು ಮುಂದಕ್ಕೂ ಕೂಡ ಇನ್ನೂ ಹೆಚ್ಚಿನ ಸಹಕಾರವನ್ನು ನೀಡಿದಾಗ ಇನ್ನು ಹೆಚ್ಚಿನ ಅಭಿವೃದ್ಧಿ ಸಾಧ್ಯ ಎಂದರು.

ಹೆಬ್ರಿ ತಾಲೂಕಿನ ಯೋಜನಾಧಿಕಾರಿಗಳಾದ ಲೀಲಾವತಿಯವರು ಪ್ರಥಮದಲ್ಲಿ ನಾನು ಇದೇ ಗ್ರಾಮದಲ್ಲಿ ಸೇವಾ ನಿರತನಾಗಿ ಸೇರ್ಪಡೆಗೊಂಡು ಯೋಜನೆಯ ಮೂಲಕವಾಗಿ ಸೇವೆಯನ್ನು ನೀಡಲು ನನಗೆ ತಾಯಿಯಂತೆ ಪ್ರೋತ್ಸಾಹಿಸಿದ ಊರು ಇದು, ಯೋಜನೆಯಲ್ಲಿ ದೂರದ ಊರಿನಲ್ಲಿಯೂ ಕೂಡ ನನಗೆ ಕೆಲಸವನ್ನು ಮಾಡಲು ನೀವು ಪ್ರಥಮದಲ್ಲಿ ಪ್ರೋತ್ಸಾಹಿಸಿದ ಪ್ರೋತ್ಸಾಹವೇ ಕಾರಣವಾಗಿದೆ ಎಂದು ತಿಳಿಸಿದರು.

ಭಜನಾ ಮಂದಿರದ ಅಧ್ಯಕ್ಷರಾಗಿ ಅದ್ಭುತವಾದ ಕುಣಿತ ಭಜನಾ ತಂಡವನ್ನು ರಚಿಸಿ ಹಾಗೂ ಭಜನಾ ಮಂಡಳಿಯ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿರುವ ಭಜನಾ ಮಂಡಳಿಯ ಅಧ್ಯಕ್ಷೆ ಬೇಬಿ ಉಮೇಶ್ ಹಾಗೂ ಯೋಜನೆಯ ಸೇವಾಪ್ರತಿನಿಧಿಯಾಗಿ 5 ವರ್ಷ ಗುರಿಪಲ್ಲದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದ ಸುಮಾ ಸಂದೀಪ್ ಇವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಪ್ರಸಾದ್ ಕುಮಾರ್ ರವರು ನೂತನ ಅಧ್ಯಕ್ಷರಿಗೆ ಎಲೆ ಅಡಿಕೆ ಹಸ್ತಾಂತರಿಸುವ ಮೂಲಕ ಪದಗ್ರಹಣ ನೆರವೇರಿಸಿ ಮಾತನಾಡಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.ನೂತನ ಅಧ್ಯಕ್ಷರಾದ ಗುರುರಾಜ್ ರವರು ಎಲ್ಲರ ಸಹಕಾರ ಕೋರಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಬೇಬಿ ಉಮೇಶ್ ರವರು ಮಾತನಾಡಿ ಭಜನಾ ಮಂಡಳಿಯ ಸಾಧನೆಯಲ್ಲಿ ನನಗೆ ಸಹಕಾರ ನೀಡಿದ ಎಲ್ಲರನ್ನೂ ಸ್ಮರಿಸಿ ಭಜನಾಮಂದಿರದ ಅಭಿವೃದ್ಧಿಗೆ ಊರವರು ಇನ್ನಷ್ಟು ಸಹಕಾರ ನೀಡಬೇಕು ಎಂದರು.ವೇದಿಕೆಯಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ಗೀತಾ, ಮಮತಾ, ಸುಮಿತಾ, ಸುಧಾ, ಬಾಬು ಬಂಗೇರ, ಚಂದ್ರಕಲಾ, ಚಿತ್ರ, ನಾರಾಯಣ ಗೌಡ ಉಪಸ್ಥಿತರಿದ್ದರು.

ಭಜನಾ ತಂಡದ ಮಕ್ಕಳು ಪ್ರಾರ್ಥನೆ ನೆರವೇರಿಸಿ, ಒಕ್ಕೂಟದ ಮಾಜಿ ಅಧ್ಯಕ್ಷರ ಯಶೋಧರ ಗೌಡ ಸ್ವಾಗತಿಸಿ, ಒಕ್ಕೂಟದ ಕಾರ್ಯದರ್ಶಿ ಚಂದ್ರಕಲಾ ಧನ್ಯವಾದಗೈದು, ಕಾರ್ಯಕ್ರಮವನ್ನು ಯೋಜನೆಯ ಕೃಷಿ ಅಧಿಕಾರಿ ರಾಮ್ ಕುಮಾರ್ ನಿರೂಪಿಸಿ ಹಾಗೂ ಮೇಲ್ವಿಚಾರಕಿ ಉಷಾ ರವರು ಒಕ್ಕೂಟದ ಯೋಜನೆಯ ಕಾರ್ಯಕ್ರಮದ ಸಾಧನೆಯ ವರದಿಯನ್ನು ಮಂಡಿಸಿದರು, ಕಾರ್ಯಕ್ರಮದ ನಂತರ ಮಹಾಪೂಜೆ ನಡೆದು ಅನ್ನಸಂತರ್ಪಣೆ ನಡೆಸಲಾಯಿತು.

ಹರೀಶ್ ಗೌಡ, ರಘುನಾಥ ಪೂಜಾರಿ, ಕಲಾವತಿ ಶೆಟ್ಟಿಗಾರ್, ರಾಮಣ್ಣ ಪೂಜಾರಿ, ಅನಿತಾ ಕೊಡೆಕಲ್, ಗೀತಾ ವಿ ನಾಯ್ಕ್, ಸುಭಾಷ್ ಜಯನಗರ, ಕುಶಾಲಪ್ಪ ಗೌಡ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here