ಉಜಿರೆಯ ಅಚ್ಚುತ ಭಟ್ ಮನೆಯಲ್ಲಿ ನಡೆದಿದ್ದ ದರೋಡೆ ಪ್ರಕರಣ- ಮುಂಡಾಜೆಯ ರಿಯಾಝ್, ನವಾಝ್, ಬೆಂಗಳೂರಿನ ಕೃಷ್ಣನಿಗೆ ನ್ಯಾಯಾಂಗ ಬಂಧನ

0

ಬೆಳ್ತಂಗಡಿ: 2020ರ ಜೂನ್ 26ರಂದು ಉಜಿರೆಯ ಓಡಲ ನಿವಾಸಿಯಾಗಿರುವ ಅಡಿಕೆ ವ್ಯಾಪಾರಿ ಅಚ್ಚುತ ಭಟ್‌ರವರ ಮನೆಗೆ ನುಗ್ಗಿ ಮನೆಯವರ ಕೈ ಕಾಲು ಕಟ್ಟಿಹಾಕಿ ನಗ- ನಗದು ದರೋಡೆ ಮಾಡಿದ್ದ ಪ್ರಕರಣದಲ್ಲಿ ಬಂಧಿತರಾಗಿ ಪೊಲೀಸ್ ಕಸ್ಟಡಿಯಲ್ಲಿದ್ದ ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ದರೋಡೆ ಪ್ರಕರಣದಲ್ಲಿ ಬಂಧಿತರಾಗಿದ್ದು ಹೆಚ್ಚಿನ ತನಿಖೆಗೆ ಒಳಪಡಿಸಲು ಹಾಗೂ ದರೋಡೆಗೈದಿರುವ ಸೊತ್ತುಗಳನ್ನು ವಶಪಡಿಸಿಕೊಳ್ಳಲು ಪೊಲೀಸರು ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದರು. ಮಹಜರು ಇತ್ಯಾದಿ ಪ್ರಕ್ರಿಯೆಗಳು ಮುಕ್ತಾಯವಾದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಲಯ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಈ ಹಿನ್ನೆಲೆಯಲ್ಲಿ ಬಂಧಿತರಾಗಿರುವ ಮುಂಡಾಜೆ ಗ್ರಾಮದ ಕೂಳೂರು ನಿವಾಸಿ ಅಡಿಕೆ ವ್ಯಾಪಾರಿ ರಿಯಾಝ್(41 ವ), ಆತನ ಸಹೋದರ ಬೆಂಗಳೂರಿನಲ್ಲಿ ಸರ್ವಿಸ್ ಸ್ಟೇಷನ್ ನಡೆಸುತ್ತಿರುವ ನವಾಝ್(38 ವ) ಮತ್ತು ಬೆಂಗಳೂರು ನಿವಾಸಿ ಕೃಷ್ಣ (37 ವ) ಎಂಬವರನ್ನು ಇದೀಗ ಮಂಗಳೂರಿನ ಸಬ್ ಜೈಲಿಗೆ ಕಳುಹಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು ಅವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಸೂಕ್ಷ್ಮತೆಯ ದೃಷ್ಠಿಯಿಂದ ಅವರ ಹೆಸರುಗಳನ್ನು ಪೊಲೀಸ್ ಇಲಾಖೆ ಬಹಿರಂಗಪಡಿಸಿಲ್ಲ.

ದರೋಡೆ ಹೀಗೆ ನಡೆದಿತ್ತು: ಕಲ್ಮಂಜ ಗ್ರಾಮದ ಮಿಯಾ ನಿವಾಸಿ ಅಚ್ಚುತ ಭಟ್ ಎಂಬವರ ಮನೆಯಲ್ಲಿ 2020ಜೂನ್ 26ರಂದು ಮಧ್ಯರಾತ್ರಿ 2.30ರಿಂದ 3.30ರ ಮಧ್ಯೆ ದರೋಡೆ ನಡೆದಿತ್ತು. ರಾತ್ರಿ ನಾಯಿ ಬೊಗಳುವ ಶಬ್ದ ಕೇಳಿ ಅಚ್ಚುತ ಭಟ್ ಅವರು ಎಚ್ಚೆತ್ತುಕೊಂಡು ಬಾಗಿಲು ತೆಗೆದು ಹೊರಗೆ ಬಂದಾಗ ಇಬ್ಬರು ಅವರನ್ನು ಸುತ್ತುವರಿದು ಕುತ್ತಿಗೆ ಅದುಮಿ ಹಿಡಿದಿದ್ದರು. ಈ ವೇಳೆ ಅವರು ಬೊಬ್ಬೆ ಹಾಕಿದಾಗ ಮನೆಯಲ್ಲಿದ್ದ ಅವರ ಸಹೋದರನ ಪತ್ನಿ ವಿದ್ಯಾಕುಮಾರಿ ಮನೆಯ ಇನ್ನೊಂದು ಬದಿಯಲ್ಲಿದ್ದ ಬಾಗಿಲು ತೆರೆದಾಗ ಅಲ್ಲಿಂದ ಏಕಾಏಕಿ ಇಬ್ಬರು ಮನೆಯ ಒಳಕ್ಕೆ ನುಗ್ಗಿದ್ದರು. ಮನೆಯಲ್ಲಿದ್ದ ಅಚ್ಚುತ ಭಟ್ ಅವರ ತಾಯಿ ಮತ್ತು ತಮ್ಮನ ಪತ್ನಿಯನ್ನು ಎದುರಿನ ಚಾವಡಿಯಲ್ಲಿ ಕೂಡಿ ಹಾಕಿ ಬಟ್ಟೆಯಿಂದ ಕೈಕಾಲು ಕಟ್ಟಿ ತಮ್ಮನ ಪತ್ನಿಯ ಕುತ್ತಿಗೆಯಿಂದ ಒಂದು ಚಿನ್ನದ ಕರಿಮಣಿ ಸರ ಹಾಗೂ ತಾಯಿಯ ಕೈಯಲ್ಲಿದ್ದ ಎರಡು ಚಿನ್ನದ ಬಳೆಗಳನ್ನು ಕಿತ್ತುಕೊಂಡಿದ್ದರು. ಅಲ್ಲದೆ ಮನೆಯಲ್ಲಿ ಹುಡುಕಾಡಿ ಕಬ್ಬಿಣದ ಕಪಾಟನ್ನು ಬಲತ್ಕಾರವಾಗಿ ತೆರೆದು ಅದರಲ್ಲಿದ್ದ ಬೆಳ್ಳಿಯ 4 ತಂಬಿಗೆ, ಚಿನ್ನದ ಸರ ಮತ್ತು ಒಂದು ಉಂಗುರ ಹಾಗೂ ನಗದು ರೂ 25 ಸಾವಿರವನ್ನು ದೋಚಿದ್ದರು. ತಮ್ಮನ ಪತ್ನಿಯ ಬ್ಯಾಗ್‌ನಲ್ಲಿದ್ದ 3 ಸಣ್ಣ ಚೈನ್, ಒಂದು ದೊಡ್ಡ ಚೈನ್, ನೆಕ್ಲೇಸ್, 5 ಸೆಟ್ ಕಿವಿಯ ಬೆಂಡೋಲೆ, 3 ಉಂಗುರ, 4 ಬಳೆಗಳನ್ನು ದರೋಡೆಗೈದಿದ್ದರು. ಅಲ್ಲದೆ ಅಚ್ಚುತ ಭಟ್ ಅವರ ಮೊಬೈಲ್ ಫೋನ್ ಮತ್ತು ಅವರ ತಮ್ಮನ ಪತ್ನಿಯ 2 ಮೊಬೈಲ್ ಸೆಟ್‌ಗಳನ್ನು ನೆಲಕ್ಕೆ ಹೊಡೆದು ಜಖಂಗೊಳಿಸಿದ್ದರು. ಈ ಬಗ್ಗೆ ಪೊಲೀಸರಿಗೆ ತಿಳಿಸಿದರೆ ನಿಮ್ಮನ್ನು ಕೊಂದು ಮನೆಗೆ ಬೆಂಕಿ ಹಾಕುವುದಾಗಿ ಬೆದರಿಸಿ ದರೋಡೆಕೋರರು ಪರಾರಿಯಾಗಿದ್ದರು. 2020ರಲ್ಲಿ ನಡೆದ ಈ ಕಳ್ಳತನ ಪ್ರಕರಣದಲ್ಲಿ ಆರೋಪಿಗಳ ಪತ್ತೆ ಆಗದ್ದರಿಂದ ತನಿಖೆ ನಡೆಸಿದ್ದ ಪೊಲೀಸರು ಇದೊಂದು ಪತ್ತೆಯಾಗದ ಪ್ರಕರಣ ಎಂದು ನ್ಯಾಯಾಲಯಕ್ಕೆ ಸಿ ರಿಪೋರ್ಟ್ ಸಲ್ಲಿಸಿದ್ದರು. ಇದೀಗ ಆರೋಪಿಗಳು ಪತ್ತೆಯಾಗಿದ್ದು ಕಳವಾದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ನ್ಯಾಯಾಲಯದ ಆದೇಶದ ಬಳಿಕ ಆಭರಣಗಳು ಅಚ್ಚುತ ಭಟ್ ಕುಟುಂಬಕ್ಕೆ ವಾಪಸು ದೊರೆಯಲಿದೆ.

ಉಂಡ ಮನೆಗೆ ಕನ್ನ ಹಾಕಿದ್ದ ರಿಯಾಝ್: ದರೋಡೆ ಪ್ರಕರಣದ ಪ್ರಮುಖ ಆರೋಪಿ ರಿಯಾಝ್ ಇದೇ ಅಚ್ಚುತ ಭಟ್ ಅವರ ಅಡಿಕೆ ಅಂಗಡಿಯಲ್ಲಿ ಕೆಲಸಕ್ಕಿದ್ದ. ಅಲ್ಲಿಂದ ಕೆಲಸ ಬಿಟ್ಟವನೇ ಸ್ವಂತ ಅಡಿಕೆ ವ್ಯಾಪಾರ ಆರಂಭಿಸಿದ್ದ. ಮುಂಡಾಜೆ ಮತ್ತು ಉಜಿರೆಯಲ್ಲಿ ಎರಡೆರಡು ಮನೆ ಮಾಡಿಕೊಂಡಿದ್ದ. ಉಂಡ ಮನೆಗೆ ಕನ್ನ ಹಾಕಿದ ರಿಯಾಜ್ ಮನೆ ದರೋಡೆ ನಡೆಸಿದ್ದ. ಇದೀಗ ಬಂಧಿತನಾಗಿ ಜೈಲು ಸೇರಿದ್ದಾನೆ.

LEAVE A REPLY

Please enter your comment!
Please enter your name here