ಪುಂಜಾಲಕಟ್ಟೆ: ಕೆಪಿಎಸ್ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ

0

ಪುಂಜಾಲಕಟ್ಟೆ: ಈ ಶಾಲೆಯು ಜಿಲ್ಲೆಯಲ್ಲಿ ಮಾದರಿಯ ರೀತಿಯಲ್ಲಿ ಕಾರ್ಯವನ್ನು ಮಾಡುತ್ತಿದ್ದು ಇದು ನಮಗೆಲ್ಲರಿಗೂ ಹೆಮ್ಮೆಯ ವಿಚಾರವಾಗಿದೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿರುವ ಈ ಸಂಸ್ಥೆಯ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಹಾಗೂ ಇದಕ್ಕೆ ಕಾರಣೀಭೂತರಾದ ಸಂಸ್ಥೆಯ ಶಿಕ್ಷಕ ಬಳಗಕ್ಕೆ ವಿಶೇಷ ಕೃತಜ್ಞತೆಗಳು. ತಮ್ಮ ಈ ರೀತಿಯ ಕಾರ್ಯ ಸದಾ ಮುಂದುವರಿಯಲಿ. ನಮ್ಮ ಸಹಕಾರ ಸದಾ ನಿಮ್ಮೊಂದಿಗಿದೆ ಎಂದು ಶಾಲಾ ಪ್ರಾರಂಭೋತ್ಸವವನ್ನು ಉದ್ಘಾಟನೆ ಮಾಡಿರುವ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸದಸ್ಯರಾದ ಪದ್ಮನಾಭರವರು ಹೇಳಿದರು.

ಅವರು ಶಾಲೆಯಲ್ಲಿ ನಡೆದ ಪ್ರಾರಂಭೋತ್ಸವದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಈ ಮಾತುಗಳನ್ನಾಡಿದರು.

ಸಭಾ ಕಾರ್ಯಕ್ರಮದ ಪೂರ್ವಭಾವಿಯಾಗಿ 9ನೇ ತರಗತಿಗೆ ಸೇರ್ಪಡೆಗೊಳ್ಳುತ್ತಿರುವ ಎಲ್ಲ 155 ವಿದ್ಯಾರ್ಥಿಗಳಿಗೆ ಪ್ರಸ್ತುತ 10ನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ನನ್ನ ಮಗು- ನನ್ನ ಗಿಡ ಎಂಬ ಧೇಯದೊಂದಿಗೆ ಸಸಿಗಳನ್ನು ನೀಡುವ ಪೂರ್ವಭಾವಿಯಾಗಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸದಸ್ಯರಾದ ದಿವಾಕರ್ ಶೆಟ್ಟಿ ಅವರು ಗಿಡ ಹಸ್ತಾಂತರ ಮಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರೆ, ಆ ಬಳಿಕ ವಿದ್ಯಾರ್ಥಿಗಳನ್ನು ಶಾಲೆಗೆ ಬ್ಯಾಂಡ್ ವಾದನದೊಂದಿಗೆ ಬರಮಾಡಿಕೊಂಡರು.

ಇದೇ ಸಂದರ್ಭದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಎಲ್ಲಾ ವಿದ್ಯಾರ್ಥಿಗಳು ಶಾಲಾ ಮೈದಾನದಲ್ಲಿ ನೂತನ ರೀತಿಯಲ್ಲಿ ಗಿಡಗಳನ್ನು ಪ್ರದರ್ಶಿಸಿ ಪಥ ಸಂಚಲನವನ್ನು ನಡೆಸಿದರು. ಗಿಡವನ್ನು ಸ್ವೀಕರಿಸಿರುವ 9ನೇ ತರಗತಿಯ ವಿದ್ಯಾರ್ಥಿಗಳು ಈ ಗಿಡವನ್ನು ತಮ್ಮ ತಮ್ಮ ಮನೆಯಲ್ಲಿ ನೆಟ್ಟು ಪೋಷಿಸಿ ಬೆಳೆಸುತ್ತೇವೆ ಎನ್ನುವ ಮನ ಪ್ರತಿಜ್ಞೆಯನ್ನು ಮಾಡಿದರು.

ಈ ವರ್ಷದ ಪುಂಜಾಲಕಟ್ಟೆ ಶಾಲೆಯ ಧ್ಯೇಯ ವಾಕ್ಯ ನಮ್ಮ ನಡೆ- ಮೌಲ್ಯಾಧಾರಿತ ಶಿಕ್ಷಣದ ಕಡೆ ಎಂದು ಸಂಸ್ಥೆಯ ಉಪ ಪ್ರಾಂಶುಪಾಲ ಉದಯಕುಮಾರ್ ಬಿ ಯವರು ಘೋಷಿಸಿದರು.

ಸಭಾಧ್ಯಕ್ಷತೆಯನ್ನು ಉದಯಕುಮಾರ್ ಬಿ ವಹಿಸಿಕೊಂಡು ಸಭೆಯನ್ನು ಮುನ್ನಡೆಸಿ ಸಂದರ್ಭೋಚಿತವಾಗಿ ಮಕ್ಕಳಿಗೆ ಹಾಗೂ ಪೋಷಕರಿಗೆ ಕಿವಿ ಮಾತನ್ನು ಹೇಳಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ಯಾಮ್ ಪ್ರಸಾದ್ ಸಂಪಿಗೆತಾಯರವರು ಸಮಯೋಚಿತವಾಗಿ ಪ್ರೋತ್ಸಾಹದ ಮಾತುಗಳೊಂದಿಗೆ ಕಾರ್ಯಕ್ರಮಕ್ಕೆ ಕಳೆಯನ್ನು ತಂದು ಕೊಟ್ಟರು.

ಇದೇ ಸಂದರ್ಭದಲ್ಲಿ ಇಲಾಖೆಯಿಂದ ನೀಡಲಾದ ಸಮವಸ್ತ್ರ, ಪಠ್ಯಪುಸ್ತಕ ಎಲ್ಲಾ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಬಳಿಕ ಎಲ್ಲಾ ವಿಧ್ಯಾರ್ಥಿಗಳಿಗೆ ಸಿಹಿ ಬೋಜನದ ವ್ಯವಸ್ಥೆ ಮಾಡಲಾಗಿತ್ತು.

ಶಾಲಾ ಶಿಕ್ಷಕರ ಪ್ರಾರ್ಥನೆಯೊಂದಿಗೆ ಸಭೆ ಆರಂಭಗೊಂಡರೆ, ವಿಜ್ಞಾನ ಶಿಕ್ಷಕರಾದ ನಿರಂಜನ್ ಜೈನ್ ಐ ಸ್ವಾಗತಿಸಿದರೆ, ಆಂಗ್ಲ ಭಾಷೆ ಶಿಕ್ಷಕರಾದ ಹರಿಪ್ರಸಾದ್ ಆರ್ ಧನ್ಯವಾದವಿದ್ದರೆ, ಸಮಾಜ ವಿಜ್ಞಾನ ಶಿಕ್ಷಕರಾದ ಧರಣೇಂದ್ರ ಕೆ ರವರು ಕಾರ್ಯಕ್ರಮ ಸಂಘಟಿಸಿ ನಿರೂಪಿಸಿದರು.

ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಸ್ಥರಾದ ಶ್ರೀ ಸುರೇಶ್ ಶೆಟ್ಟಿ ಹಾಗೂ ಅಧ್ಯಾಪಕ ಬಳಗ, ಶಾಲಾ ಅಭಿವೃದ್ಧಿ ಸಮಿತಿಯ ಕ್ರಿಯಾಶೀಲ ಸದಸ್ಯರಾದ ದಿವಾಕರ್ ಶೆಟ್ಟಿ ಹಾಗೂ ಪೋಷಕ ಬಂಧುಗಳು ಸರ್ವ ರೀತಿಯ ಸಹಕಾರ ನೀಡಿದರು.ಸಂಸ್ಥೆಯ ಎಲ್ಲಾ ಶಿಕ್ಷಕ ಬಳಗ ಸರ್ವ ರೀತಿಯ ಸಹಕಾರವನ್ನು ನೀಡಿದರು.

LEAVE A REPLY

Please enter your comment!
Please enter your name here