ಉಜಿರೆ: ಎಸ್.ಡಿ.ಎಂ ರಸಾಯನಶಾಸ್ತ್ರ ರಾಷ್ಟ್ರೀಯ ವಿಚಾರ ಸಂಕಿರಣ- ಅನ್ವಯಿಕ ಪ್ರಯೋಗಗಳಿಂದ ಸುಸ್ಥಿರ ಬೆಳವಣಿಗೆ: ಡಾ.ಸತೀಶ್ಚಂದ್ರ ಎಸ್

0

ಉಜಿರೆ: ಅತ್ಯಾಧುನಿಕ ಸಂಸ್ಕರಿತ ಭೌತವಸ್ತು ಸಂಬಂಧಿತ ರಾಸಾಯನಿಕ ಮತ್ತು ಜೈವಿಕ ಅನ್ವಯಿಕತೆಯ ಪ್ರಯೋಗಗಳು ಸುಸ್ಥಿರ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದು ಆಶಾದಾಯಕ ಸಂಗತಿ ಎಂದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್. ಅಭಿಪ್ರಾಯಪಟ್ಟರು.

ಇಲ್ಲಿನ ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದಲ್ಲಿ ರಸಾಯನಶಾಸ್ತ್ರ ಅಧ್ಯಯನ ವಿಭಾಗ ಹಾಗೂ ಅಭಿವೃದ್ಧಿ ಕೋಶದ ಸಹಯೋಗದೊಂದಿಗೆ ಆಯೋಜಿಸಲಾದ ‘ಅಡ್ವಾನ್ಸ್ಡ್ ಮೆಟೀರಿಯಲ್ಸ್ ಫಾರ್ ಕೆಮಿಕಲ್ ಬಯೋಲಾಜಿಕಲ್ ಅಪ್ಲಿಕೇಶನ್ಸ್’ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಮಾ.6ರಂದು ಉದ್ಘಾಟಿಸಿ ಅವರು ಮಾತನಾಡಿದರು.

ಅತ್ಯಾಧುನಿಕ ತಂತ್ರಜ್ಞಾನದ ಪರಿಕಲ್ಪನೆಗಳು ಪ್ರಯೋಗಕ್ಕೊಳಪಟ್ಟ ನಂತರ ತಾಂತ್ರಿಕತೆಯ ಪ್ರಯೋಜನಗಳು ವ್ಯಾಪಕವಾದವು. ಇವುಗಳ ನೆರವಿನೊಂದಿಗೆ ಕಚ್ಚಾವಸ್ತುಗಳು ಸಂಸ್ಕರಿತಗೊಂಡು ಹೊಸರೂಪ ಪಡೆದವು.ಹೀಗೆ ವಿಸ್ತೃತಗೊಂಡ ಭೌತವಸ್ತುಗಳ ರೂಪಾಂತರವು ರಾಸಾಯನಿಕ ಮತ್ತು ಜೈವಿಕ ಶಾಸ್ತ್ರಗಳ ವಲಯದಲ್ಲಿ ವಿನೂತನ ಪ್ರಯೋಗಗಳಿಗೆ ಸಹಕಾರಿಯಾಗಿದೆ.

ಇದರ ಆಧಾರದಲ್ಲಿ ನಿರ್ವಹಿಸಲ್ಪಟ್ಟ ಸಂಶೋಧಕ ಹೆಜ್ಜೆಗಳ ಫಲಿತಾಂಶಗಳಿಂದ ಹೊಸದಾದ ಕೌಶಲಪೂರ್ಣ ತಾಂತ್ರಿಕ ಅವಕಾಶಗಳನ್ನು ಸೃಷ್ಟಿಯಾದವು.ಇವುಗಳಿಂದ ವಿಜ್ಞಾನ, ತಂತ್ರಜ್ಞಾನ ಮಾತ್ರವಲ್ಲದೇ ಕೃಷಿ, ಆರೋಗ್ಯ ಸೇರಿದಂತೆ ಮನುಷ್ಯನ ದೈನಂದಿನ ಬದುಕಿಗೆ ಸಹಾಯಕವಾಗುವ ಕ್ಷೇತ್ರಗಳು ಪ್ರಯೋಜನ ಪಡೆಯಲು ಸಾಧ್ಯವಾಗಿದೆ ಎಂದರು.

ಅತ್ಯಾಧುನಿಕ ಸಂಸ್ಕರಿತ ಭೌತವಸ್ತುಗಳ ಅನ್ವೇಷಕ ಪ್ರಜ್ಞೆಯು ಅಂತರ್‌ಶಿಸ್ತೀಯ ಅಧ್ಯಯನದ ವ್ಯಾಪಕತೆಯನ್ನು ಹೆಚ್ಚಿಸುತ್ತಿದೆ. ಇದನ್ನು ದೃಷ್ಟಿಯಲ್ಲಿರಿಸಿಕೊಂಡು ರಸಾಯನಶಾಸ್ತ್ರ ವಲಯದ ಯುವ ಸಂಶೋಧಕರು ಕಾರ್ಯೋನ್ಮುಖರಾಗಬೇಕು. ಇಂಥ ಅಂತರ್‌ಶಿಸ್ತೀಯ ಸಂಶೋಧನಾತ್ಮಕ ಹೆಜ್ಜೆಗಳು ಸಾಮಾಜಿಕವಾಗಿ ಮೌಲಿಕವೆನ್ನಿಸಿಕೊಳ್ಳುತ್ತವೆ ಎಂದರು.

ಬೆಂಗಳೂರಿನ ಆಂಥೆಮ್ ಬಯೋಸೈನ್ಸ್ಸ್ ಸಂಸ್ಥೆಯ ನೂತನ ತಂತ್ರಜ್ಞಾನ ಮತ್ತು ಅಭಿವೃದ್ಧಿ ಘಟಕದ ಮುಖ್ಯಸ್ಥ ಮುಖ್ಯಸ್ಥ ಡಾ. ಕರುಣಾನಿಧಿ ಜ್ಞಾನವೇಲು ಸಮ್ಮೇಳನದ ಪ್ರಧಾನ ಆಶಯ ಪ್ರಸ್ತುತಪಡಿಸಿದರು. ರಾಷ್ಟ್ರೀಯ ವಿಚಾರ ಸಂಕಿರಣದ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.

ಎಸ್ ಡಿ ಎಂ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಸಾಯನಿಕ ಮತ್ತು ಜೈವಿಕ ಅನ್ವಯಿಕತೆಯ ಪ್ರಯೋಗಗಳಿಂದಾಗಿ ವೈದ್ಯಕೀಯ ರಂಗದಲ್ಲಿ ಮಹತ್ವಪೂರ್ಣ ಪಲ್ಲಟಗಳಾಗಿವೆ. ಕ್ರಾಂತಿಕಾರಕ ಎನ್ನಿಸುವಂಥ ವೈದ್ಯಕೀಯ ಹೆಜ್ಜೆಗಳು ರೂಪುಗೊಂಡಿವೆ. ಹ್ಯುಮುಲಿನ್‌ನ ಆವಿಷ್ಕಾರವು ಅಂಥದ್ದೊಂದು ಕ್ರಾಂತಿಕಾರಕ ಹೆಜ್ಜೆಯಾಗಿದೆ. ಇಂಥ ಅನ್ವೇಷಣೆಯು ಮನುಷ್ಯರ ಆರೋಗ್ಯಕ್ಕೆ ಅಡ್ಡಪರಿಣಾಮ ಉಂಟುಮಾಡದೆಯೇ ಸುಸ್ಥಿತಿಗೆ ತರುವಲ್ಲಿ ನಿರ್ಣಾಯಕ ಪಾತ್ರವಹಿಸುತ್ತಿದೆ ಎಂದು ಹೇಳಿದರು.

ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸುವ ನಿಟ್ಟಿನಲ್ಲಿಯೂ ರಾಸಾಯನಿಕ ಮತ್ತು ಜೈವಿಕ ಶಾಸ್ತ್ರ ವಲಯದ ಅನ್ವಯಿಸುವಿಕೆಯ ಅತ್ಯಾಧುನಿಕ ಪ್ರಯೋಗಗಳು ಪ್ರಮುಖ ಪಾತ್ರವಹಿಸುತ್ತಿವೆ. ಯುವಸಂಶೋಧಕರು ಶ್ರೇಷ್ಠ ವಿಜ್ಞಾನಿಗಳು ಮತ್ತು ಸಂಶೋಧಕರ ಬದುಕಿನ ಸಾಧನೆಯ ವಿವರಗಳನ್ನೊಳಗೊಂಡ ಮೌಲಿಕ ಜೀವನ ಚರಿತ್ರೆಯ ಕೃತಿಗಳನ್ನು ಓದಬೇಕು. ಅಂಥ ಅಧ್ಯಯನವು ಅನ್ವೇಷಕ ಪ್ರಜ್ಞೆಯನ್ನು ಮತ್ತಷ್ಟು ನಿಖರಗೊಳಿಸುತ್ತದೆ ಎಂದರು.

ಎಸ್ ಡಿ ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಹಾಗೂ ರಸಾಯನಶಾಸ್ತ್ರ ಅಧ್ಯಯನ ವಿಭಾಗ ಮುಖ್ಯಸ್ಥ ಡಾ. ವಿಶ್ವನಾಥ ಪಿ. ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ರಸಾಯನ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ನೆಫಿಸತ್ ಪಿ. ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ, ಅಸೋಸಿಯೇಟ್ ಪ್ರೊಫೆಸರ್ ಡಾ.ನವೀನ್ ಕುಮಾರ್ ವಂದಿಸಿದರು.

ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ಸಂಶೋಧನಾ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕಿ ಡಾ.ಸೌಮ್ಯ ಬಿ.ಪಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here