ಸೂಳಬೆಟ್ಟು ಸ.ಕಿ.ಪ್ರಾ ಶಾಲೆಯಲ್ಲಿ ಪ್ರಾಥಮಿಕ ಶಾಲಾ ವಿಭಾಗದ ನೂತನ ಕಟ್ಟಡ ಉದ್ಘಾಟನೆ

0

ಬೆಳ್ತಂಗಡಿ: ಈಗಿನ ರಾಜ್ಯ ಸರಕಾರ ವಿವೇಕ ಕೊಠಡಿಗಳ ಯೋಜನೆಯನ್ನು ನಿಲ್ಲಿಸುವುದರ ಮೂಲಕ ಶೈಕ್ಷಣಿಕ ವ್ಯವಸ್ಥೆಗೆ ಅನ್ಯಾಯ ಮಾಡುತ್ತಿದೆ ಎಂದು ಶಾಸಕ ಹರೀಶ ಪೂಂಜ ಹೇಳಿದರು.

ಸೂಳಬೆಟ್ಟು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ರೂ.27 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಪ್ರಾಥಮಿಕ ಶಾಲಾ ವಿಭಾಗದ ನೂತನ ಕಟ್ಟಡವನ್ನು ಮಾ.3ರಂದು ಉದ್ಘಾಟಿಸಿ ಅವರು ಮಾತನಾಡಿದರು.ಹಿಂದಿನ ಸರಕಾರವು ವಿವೇಕ ಯೋಜನೆಗೆ 500ಕೋಟಿ ರೂ.ಗಳನ್ನು ಮೀಸಲಾಗಿರಿಸಿತ್ತು.

ಇದರಿಂದ ವರ್ಷಕ್ಕೆ 10 ಕೊಠಡಿಗಳ ನಿರ್ಮಾಣ ಸಾಧ್ಯವಾಗುತ್ತಿತ್ತು. ಮುಂದಿನ 10 ವರ್ಷಗಳಲ್ಲಿ 400 ಕೊಠಡಿಗಳ ನಿರ್ಮಾಣಮಾಡುವ ಗುರಿ ಹೊಂದಲಾಗಿತ್ತು.ಈ ಯೋಜನೆ ಸಾಕಾರಗೊಂಡಿದ್ದರೆ ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಕೊಠಡಿಗಳ ಕೊರತೆಯೇ ಉಂಟಾಗುತ್ತಿರಲಿಲ್ಲ ಎಂದ ಅವರು ವಿವೇಕ ಯೋಜನೆಯನ್ನು ಸರಕಾರ ಹಿಂದೆಗೆದುಕೊಂಡಿರುವುದನ್ನು ಸಭೆಯಲ್ಲಿ ಖಂಡಿಸಿದರು.

ಸರಕಾರಿ ಶಾಲೆಗೆ ಆಯ್ಕೆಯಾಗುವ ಶಿಕ್ಷಕರು ಯೋಗ್ಯ ತರಬೇತಿಯನ್ನು ಪಡೆದುಬರುವುದರಿಂದ ಇಲ್ಲಿ ಸಿಗುವಷ್ಟು ಗುಣಮಟ್ಟದ ಶಿಕ್ಷಣ ಖಾಸಗಿ ಶಾಲೆಗಳಲ್ಲೂ ಸಿಗುವುದಿಲ್ಲ ಎಂಬುದು ನಿರ್ವಿವಾದ.ದೇಶದ ಸಹಸ್ರಾರು ಚಿಂತಕರು, ಮೇಧಾವಿಗಳು, ಜನಪ್ರತಿನಿಧಿಗಳು ಕಲಿತದ್ದು ಸರಕಾರಿ ಶಾಲೆಗಳಲ್ಲೇ ಎಂಬುದನ್ನು ನಾವು ನೆನಪಿಸಿಕೊಳ್ಳಬೇಕು.ಪೋಷಕರೂ ಶಾಲಾಭಿವೃದ್ಧಿಯಲ್ಲಿ ಎಲ್ಲಾ ರೀತಿಯಲ್ಲಿ ಸಹಕರಿಸಿದರೆ ಶಾಲಾ ಮುಚ್ಚದಂತೆ ನೋಡಿಕೊಳ್ಳಬಹುದು ಎಂದರು.

ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಪ್ರಮೋದ್‌ ಪೂಜಾರಿ ವಹಿಸಿದ್ದರು. ವೇದಿಕೆಯಲ್ಲಿ ಅಳದಂಗಡಿ ಸತ್ಯದೇವತಾ ದೈವಸ್ಥಾನದ ಆಡಳ್ತೆದಾರ ಶಿವಪ್ರಸಾದ ಅಜಿಲ, ಬಳಂಜ ಗ್ರಾ.ಪಂ ಸದಸ್ಯರಾದ ಬಾಲಕೃಷ್ಣ ಪೂಜಾರಿ, ಜಯ ಶೆಟ್ಟಿ, ಅಳದಂಗಡಿ ಗ್ರಾ.ಪಂ. ಸದಸ್ಯ ಪ್ರವೀಣ ಬರಯ, ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ, ಇ.ಸಿ.ಓ. ಚೇತನಾಕ್ಷಿ, ಸಿ.ಆರ್.ಪಿ. ಕಿರಣ್‌ ಕುಮಾರ್‌, ಶಾಲಾ ಸ್ಥಳದ ದಾನಿ ಅನಂತ ಮರಾಠೆ, ಭಜನೆ ತರಬೇತುದಾರ ಸಂದೇಶ್‌ ಮದ್ದಡ್ಕ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ.ಶಶಿಧರ ಡೋಂಗ್ರೆ, ಧ್ವಜಕಟ್ಟೆಯನ್ನು ನಿರ್ಮಿಸಿಕೊಟ್ಟ ನಿರಂಜನ ಜೋಶಿ, ವಿದ್ಯಾರ್ಥಿ ನಾಯಕಿ ಪ್ರತೀಕ್ಷಾ ಉಪಸ್ಥಿತರಿದ್ದರು.

ಕಳೆದ 60 ವರ್ಷಗಳಲ್ಲಿ ಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತರಾದ ಪ್ರೇಮಾವತಿ ಭಟ್‌, ಶ್ರೀವತ್ಸ ತಂತ್ರಿ, ದಿ.ನರಹರಿ ಮೆಹೆಂದಳೆ ಪರವಾಗಿ ಅವರ ಪುತ್ರ ಪ್ರವೀಣಚಂದ್ರ ಮೆಹೆಂದಳೆ, ದಿ.ಕಾಂತಪ್ಪ ಮೂಲ್ಯ ಪರವಾಗಿ ಅವರ ಪತ್ನಿ ಜಾನಕಿ ಅವರನ್ನು, ಶಾಲೆಗೆ ಸ್ಥಳದಾನ ನೀಡಿದ ಅನಂತ ಮರಾಠೆ ಅವರನ್ನು, ಶಾಲಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ, ಹಿರಿಯ ವಿದ್ಯಾರ್ಥಿ ವಿಶ್ವನಾಥ ಡೋಂಗ್ರೆ ಅವರನ್ನು, ಶಾಲಾಭಿವೃದ್ಧಿಗೆ ಸಹಕರಿಸಿದ ದಾನಿಗಳನ್ನು ಸಮ್ಮಾನಿಸಲಾಯಿತು.

ಅಂಗನವಾಡಿ ಹಾಗೂ ಶಾಲಾ ಮಕ್ಕಳಿಗೆ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.ಬಹುಮಾನಿತರ ಹೆಸರುಗಳನ್ನು ಅಂಗನವಾಡಿ ಕಾರ್ಯಕರ್ತೆ ಶಕುಂತಲಾ, ಶಾಲಾ ಶಿಕ್ಷಕಿ ಸೌಮ್ಯ ವಾಚಿಸಿದರು.

ಶಾಲಾ ಮುಖ್ಯೋಪಾಧ್ಯಾಯಿನಿ ಲೀನಾ ಮೋರಸ್‌ ಸ್ವಾಗತಿಸಿ, ವರದಿ ವಾಚಿಸಿದರು.ಚಂದ್ರಹಾಸ ಬಳಂಜ ಕಾರ್ಯಕ್ರಮ ನಿರ್ವಹಿಸಿದರು.

ಸಹ ಶಿಕ್ಷಕಿ ಉಮೈಬಾ, ಅಕ್ಷರ ದಾಸೋಹ ಸಿಬ್ಬಂದಿ ಮಮತಾ, ಲವಿನಾ, ಚಿತ್ರಾಕ್ಷಿ, ಸಹಕರಿಸಿದರು.ಕಾರ್ಯಕ್ರಮಕ್ಕೆ ಮೊದಲು ನರಹರಿ ಜೋಶಿ ಸ್ಮರಣಾರ್ಥ ನಿರ್ಮಿಸಲಾದ ಧ್ವಜಕಟ್ಟೆಯನ್ನು ಶಾಸಕರು ಉದ್ಘಾಟಿಸಿದರು. ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ರಕ್ಷಿತ್‌ ಶಿವರಾಂ ಭೇಟಿ ನೀಡಿದರು.

ಅಂಗನವಾಡಿ ಪುಟಾಣಿಗಳಿಂದ, ಶಾಲಾ ಮಕ್ಕಳಿಂದ, ಹಿರಿಯ ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆದವು.ಅಮ್ಮ ಕಲಾವಿದೆರ್‌ ಕುಡ್ಲ ಇವರಿಂದ ಅಮ್ಮೆರ್‌ ನಾಟಕ ಪ್ರದರ್ಶನಗೊಂಡಿತು.

LEAVE A REPLY

Please enter your comment!
Please enter your name here