ಗಂಡಿಬಾಗಿಲು: ಸಿಯೋನ್ ಆಶ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯರ ನೋಂದಣಿ ಅಭಿಯಾನಕ್ಕೆ ಚಾಲನೆ

0

ಬೆಳ್ತಂಗಡಿ: ನೆರಿಯ ಗಂಡಿಬಾಗಿಲಿನ ಸಿಯೋನ್ ಆಶ್ರಮದಲ್ಲಿ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ, ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯರ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಸಿಯೋನ್ ಆಶ್ರಮಕ್ಕೆ ಇಪ್ಪತ್ತೈದನೆಯ ವರ್ಷ, ಬೆಳ್ಳಿ ಹಬ್ಬದ ಸಂಭ್ರಮ.ಈ ಹಿನ್ನೆಲೆಯಲ್ಲಿ ಆಶ್ರಮದ ರಜತ ಮಹೋತ್ಸವದ ಅಂಗವಾಗಿ “ಸ್ಪಂದನ – 2024” ರಾಜ್ಯ ಮಟ್ಟದ ವಿಚಾರ ಸಂಕಿರಣವು ಮಾರ್ಚ್ ತಿಂಗಳಿನಲ್ಲಿ ವೈಭಯುತವಾಗಿ ಜರಗಲಿದೆ.ಈ ವಿಚಾರ ಸಂಕಿರಣವು ಸುವರ್ಣ ಕರ್ನಾಟಕದ ಆಶಯದಂತೆ ನಡೆಯುವ ಎರಡು ದಿನಗಳ ಸಮ್ಮೇಳನದಲ್ಲಿ, ಕನ್ನಡ ಸಾಹಿತ್ಯ ಪರಿಷತ್ತಿಗೆ ಅಜೀವ ಸದಸ್ಯರ ನೋಂದಣಿ ಮಾಡುವ ಯೋಜನೆ ಹಮ್ಮಿಕೊಳ್ಳಲಾಗಿದೆ.ಈ ಯೋಜನೆಗೆ ಸಿಯೋನ್ ಆಶ್ರಮದಲ್ಲಿ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಎಂ.ಪಿ.ಶ್ರೀನಾಥರವರು ಚಾಲನೆ ನೀಡಿದರು.

ಸಿಯೋನ್ ಆಶ್ರಮದ ಆಡಳಿತಾಧಿಕಾರಿಯಾದ ಶೋಭಾ ಯುಪಿ ಇವರನ್ನು ಪ್ರಥಮ ನೋಂದಣಿಯಾಗಿ ಮಾಡಿಕೊಂಡು ಇವರಿಗೆ ನೋಂದಣಿ ಪತ್ರವನ್ನು ನೀಡಲಾಯಿತು.

ನೋಂದಣಿ ಪತ್ರ ಹಸ್ತಾಂತರ ಮಾಡಿದ ಜಿಲ್ಲಾಧ್ಯಕ್ಷರಾದ ಡಾ.ಎಂ.ಪಿ.ಶ್ರೀನಾಥರು ಮಾತನಾಡಿ, ಮಾರ್ಚ್ ತಿಂಗಳಲ್ಲಿ ಜರಗಲಿರುವ ಸಿಯೋನ್ ರಜತ ಮಹೋತ್ಸವಕ್ಕೆ ರಾಜ್ಯದಾದ್ಯಂತದಿಂದ ಭಾಗವಹಿಸುವ ಮಹಾಜನತೆಯಲ್ಲಿ ಕನಿಷ್ಠ ಒಂದು ಸಾವಿರ ಕನ್ನಡಾಭಿಮಾನಿಗಳನ್ನು ಆಜೀವ ಸದಸ್ಯರನ್ನಾಗಿ ಮಾಡುವ ಗುರಿಯನ್ನು ಹೊಂದಲಾಗಿದೆ.ಕರ್ನಾಟಕ ಸರ್ಕಾರದ ಸುವರ್ಣ ಕರ್ನಾಟಕ ಸಂಭ್ರಮ ಆಶಯದಂತೆ, ಸಿಯೋನ್ ಬೆಳ್ಳಿಹಬ್ಬವು ಕನ್ನಡಮಯವಾಗಲೆಂದು ಆಶಿಸಿದರು.ಜೊತೆಗೆ ಸಿಯೋನ್ ಬೆಳ್ಳಿ ಹಬ್ಬದಲ್ಲಿ ಪಾಲ್ಗೊಳ್ಳುವ ಎಲ್ಲ ಮಹಾಜನರು ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯರಾಗುವ ಮೂಲಕ ಸುವರ್ಣ ಕರ್ನಾಟಕದ ಸಂಭ್ರಮವನ್ನು ಅರ್ಥಪೂರ್ಣವಾಗಿಸಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಯದುಪತಿ ಗೌಡ, ಕಾರ್ಯದರ್ಶಿಗಳಾದ ರಾಮಕೃಷ್ಣ ಭಟ್ ಬೆಳಾಲು, ಸಿಯೋನ್ ಆಶ್ರಮದ ಮೆನೇಜಿಂಗ್ ಟ್ರಸ್ಟಿ ಡಾ.ಯು ಸಿ ಪೌಲೋಸ್, ಟ್ರಸ್ಟಿ ಮೇರಿ ಯು.ಪಿ, ರಜತ ಮಹೋತ್ಸವದ ಸ್ವಾಗತ ಸಮಿತಿಯ ಸದಸ್ಯರಾದ ಪ್ರಕಾಶ್ ಪಿಂಟೊ ಉಜಿರೆ ಇವರು ಉಪಸ್ಥಿತರಿದ್ದರು.ಮೇರಿ ಪಿ.ಜೆ ಯವರು ಕಾರ್ಯಕ್ರಮ ಸಂಯೋಜಿಸಿದರು.

LEAVE A REPLY

Please enter your comment!
Please enter your name here