ಮೊಗ್ರು: ಮುಗೇರಡ್ಕ ದೈವಸ್ಥಾನ ವತಿಯಿಂದ ಮುಗೇರಡ್ಕ ಮುಳುಗು ಸೇತುವೆ ಸಂಚಾರಕ್ಕೆ ಮುಕ್ತ

0

ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮದ ಮುಗೇರಡ್ಕ ದೈವಸ್ಥಾನ ಪಕ್ಕದಲ್ಲಿ ಹರಿಯುತ್ತಿರುವ ಪವಿತ್ರ ನದಿ ನೇತ್ರಾವತಿ ಕಿನಾರೆಯಲ್ಲಿ ಇರುವ ಮುಳುಗು ಸೇತುವೆ ಪ್ರತಿ ವರ್ಷದಂತೆ ಈ ವರ್ಷನು ಮಳೆ ನೀರಿಗೆ ಕೊಚ್ಚಿ ಹೋಗಿದ್ದು ಡಿಸೆಂಬರ್ ನಂತರ ಸೇತುವೆಯ ಸಂಪರ್ಕ ರಸ್ತೆಯನ್ನು ಸಾರ್ವಜನಿಕ ಸೇವೆಗೆ ಬಳಸಲು ಅನುಕೂಲವಾಗುವಂತೆ ಮಾಡಲು ಸರಕಾರದ ಯಾವುದೇ ಅನುದಾನ ಇಲ್ಲದೇ ಅಂದಾಜು ಸುಮಾರು 53,000 ವೆಚ್ಚದಲ್ಲಿ ಮುಗೇರಡ್ಕ ದೈವಸ್ಥಾನ ವತಿಯಿಂದ ಈ ವರ್ಷನೂ ಈ ರಸ್ತೆಗೆ ಹಿಟಾಚಿ ಮೂಲಕ ರಸ್ತೆ ದುರಸ್ತಿ ಮಾಡಲಾಯಿತು.

ಸುಮಾರು 30 ವರ್ಷಗಳ ಹಿಂದೆ ಮುಗೇರಡ್ಕ ದೈವಸ್ಥಾನದ ಜಾತ್ರೋತ್ಸವ ಸಂದರ್ಭದಲ್ಲಿ ಅಕ್ಕಿಮುಡಿ, ಹರಾಜು ಹಾಕಿ, ಸ್ಥಳೀಯ ಗ್ರಾಮಸ್ತರ ದೇಣಿಗೆ ಪಡೆದು ಅಂದಿನ ಕಾಲದ ಅನುಕೂಲಕ್ಕೆ ತಕ್ಕಂತೆ ನಿರ್ಮಾಣ ಆದ ಮುಗೇರಡ್ಕ ಮುಳುಗು ಸೇತುವೆಯು ಪ್ರತಿ ಮಳೆಗಾಲದ ಪ್ರವಾಹದಲ್ಲಿ ಮುಳುಗಡೆ ಆಗಿ ಆ ಸೇತುವೆಯ ಮುಕ್ಕಾಲು ಭಾಗ ನೀರಲ್ಲಿ ಕೊಚ್ಚಿ ಹೋಗುವುದು ವಾಡಿಕೆ.ಈ ಸೇತುವೆ ಡಿಸೆಂಬರ್-ಜೂನ್ ತನಕ ಸಂಚಾರಕ್ಕೆ ತೆರೆದು ಮೊಗ್ರು, ಬಂದಾರು, ಕಣಿಯೂರು, ಇಳoತಿಲ ಗ್ರಾಮ ಹಾಗೂ ಉಜಿರೆ ಕಡೆಯಿಂದ ಬರುವ ಮತ್ತು ಉಜಿರೆ ಬೆಳ್ತಂಗಡಿ ಧರ್ಮಸ್ಥಳ ತನಕದ ಜನರಿಗೆ ಪುತ್ತೂರು ತಾಲೂಕು ಹಾದು ಹೋಗುವ ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕ ಮಾಡಲು ಅನುಕೂಲವಾಗುತ್ತದೆ.ಮಳೆಗಾಲ ಸಮಯದಲ್ಲಿ ನೀರಿನ ಸೆಳೆತಕ್ಕೆ ಸಿಕ್ಕಿ 50% ರಸ್ತೆ ನೀರಲ್ಲಿ ಕೊಚ್ಚಿ ಹೋಗಿ ಸಂಪರ್ಕ ಕಡಿತವಾಗುತ್ತದೆ. ಈ ತಾತ್ಕಾಲಿಕ ಸೇತುವೆಯಲ್ಲಿ ದಿನ ನಿತ್ಯ ಸಾವಿರಾರು ವಾಹನ ಓಡಾಟ ಇರುವ ಕಾರಣ ಪ್ರತಿ ವರ್ಷ ದೈವಸ್ಥಾನ ವತಿಯಿಂದ ರಿಪೇರಿ ಮಾಡುವ ಕಾರ್ಯ ಅನೇಕ ವರ್ಷಗಳಿಂದ ನಡೆದು ಬಂದಿರುತ್ತದೆ.

ಇದೇ ಜಾಗದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಇವರ ಪ್ರಯತ್ನದಲ್ಲಿ ಹಿಂದಿನ ಸರಕಾರದ ಅವಧಿಯಲ್ಲಿ ಇಲ್ಲಿಗೆ ಒಂದು ಬೃಹತ್ ಸೇತುವೆ ಸಹಿತ ಕಿಂಡಿ ಆಣೆಕಟ್ಟಿಗೆ ಅನುಮೋದನೆ ದೊರೆತು ಕಾಮಗಾರಿ ಆರಂಭವಾಗಿ ತುಂಬಾ ವೇಗದಿಂದ ಇದ್ದ ನಿರ್ಮಾಣ ಕಾರ್ಯ ನಡೆಯುತ್ತಿತ್ತು, ಯಾಕೋ ಕೆಲವು ದಿನಗಳಿಂದ ನಿಧಾನವಾಗಿ ಸಾಗುತಿದ್ದು, ಇನ್ನೂ ಕೆಲವು ವರ್ಷ ಇದೇ ಹಳೆ ಸೇತುವೆಯನ್ನು ಅವಲಂಬಿಸಬೇಕಾದ ಅನಿವಾರ್ಯತೆಯಲ್ಲಿ ಜನ ಸಾಮಾನ್ಯರು ಸರಕಾರದ ನಡೆಗೆ ಹಿಡಿ ಶಾಪ ಹಾಕುತಿದ್ದು, ಮುಗೇರಡ್ಕ ದೈವಸ್ಥಾನದ ವತಿಯಿಂದ ಪ್ರತಿ ವರ್ಷ ನಡೆಯುವ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೀಯ ಅಭಿಪ್ರಾಯ ವ್ಯಕ್ತವಾಗುತ್ತಿದೆ.ಆದಷ್ಟು ಬೇಗ ಮುಗೇರಡ್ಕ ಸೇತುವೆ ಕಾಮಗಾರಿಗೆ ವೇಗ ಸಿಗಲಿ ಆದಷ್ಟು ಶೀಘ್ರದಲ್ಲಿ ಪ್ರಯಾಣಿಕರಿಗೆ ಸೇತುವೆಯು ಸಂಚಾರಕ್ಕೆ ಅನುಕೂಲವಾಗಲಿ ಎಂಬುದೇ ರಾಜ್ಯ ಸರ್ಕಾರಕ್ಕೆ ನಾಗರಿಕರ ಒಕ್ಕೊರಲ ಬೇಡಿಕೆ.

LEAVE A REPLY

Please enter your comment!
Please enter your name here