ಡಾ.ಡಿ.ವೀರೇಂದ್ರ ಹೆಗ್ಗಡೆ ಅವರಿಂದ ‘ದೀಪ ಸಮನ್ವಯ’ ಸಂಚಿಕೆ ಬಿಡುಗಡೆ

0

ಉಜಿರೆ: ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳು ಹೊರತಂದ ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಸಚಿತ್ರ ಬರಹಗಳನ್ನೊಳಗೊಂಡ ‘ದೀಪ ಸಮನ್ವಯ’ ವಿಶೇಷ ಸಂಚಿಕೆಯನ್ನು ಧರ್ಮಸ್ಥಳ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ. ಡಿ ವೀರೇಂದ್ರ ಹೆಗ್ಗಡೆ ಬಿಡುಗಡೆಗೊಳಿಸಿದರು.

ಧರ್ಮಸ್ಥಳದಲ್ಲಿ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು ಫೋಟೋಗ್ರಫಿಯ ಸೂಕ್ಷ್ಮತೆಗಳು ಮತ್ತು ಮುದ್ರಣ ಮಾಧ್ಯಮದ ಪ್ರಯೋಗಶೀಲತೆಯ ಆಯಾಮಗಳನ್ನು ವಿಶ್ಲೇಷಿಸಿದರು. ಲಕ್ಷದೀಪೋತ್ಸವದ ಸಮಗ್ರ ವಿವರಗಳನ್ನು ಒಟ್ಟಾಗಿಸಿ ಸಂಚಿಕೆ ರೂಪದಲ್ಲಿ ಹೊರತಂದ ಪ್ರಯತ್ನವನ್ನು ಶ್ಲಾಸಿದರು.

ಫೋಟೋಗ್ರಫಿಯ ಕಲಾತ್ಮಕ ಸಾಧ್ಯತೆಗಳ ಕುರಿತು ಮಾಧ್ಯಮ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಒಂದು ನಿರ್ದಿಷ್ಟ ಮೂರ್ತಿಯನ್ನು ನೋಡಿದಾಗ ಅದರ ಮೂಲಕ ವ್ಯಕ್ತವಾಗುವ ವಿವಿಧ ಬಗೆಯ ಭಾವಗಳನ್ನು ಗ್ರಹಿಸಿ ಕ್ಯಾಮರಾದ ಮೂಲಕ ದಾಖಲಿಸುವ ಸೃಜನಶೀಲತೆಯನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಫ್ರಾನ್ಸ್‌ನಲ್ಲಿ ತಾವು ಸೆರೆಹಿಡಿದ ಮಹತ್ವದ ಫೋಟೋಗಳನ್ನು ಈ ಸಂದರ್ಭದಲ್ಲಿ ಪರಿಚಯಿಸಿ ಒಂದು ನಿರ್ದಿಷ್ಟ ವಸ್ತುವನ್ನು ವಿವಿಧ ಆಯಾಮಗಳಲ್ಲಿ ಗ್ರಹಿಸಿ ಕ್ಯಾಮರಾದ ಮೂಲಕ ದಾಖಲಿಸುವ ವಿಧಾನವನ್ನು ವಿವರಿಸಿದರು. ಒಂದು ಚಿತ್ರಕ್ಕೆ ಹಲವು ಅರ್ಥಪದರುಗಳಿರುತ್ತವೆ.ಛಾಯಾಗ್ರಾಹಕ ತನ್ನ ಸೂಕ್ಷ್ಮ ಗ್ರಹಿಕೆಯಿಂದ ಗಮನಿಸಿ ಸೆರೆಹಿಡಿದಾಗ ಫೋಟೋಗಳು ಜೀವಂತಿಕೆಯನ್ನು ಪಡೆಯುತ್ತವೆ ಎಂದು ನುಡಿದರು.

ಶ್ರೀ ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರಕುಮಾರ್ ಅವರು ವಿದ್ಯಾರ್ಥಿಗಳ ವಿಶೇಷ ವರದಿಗಳು, ನುಡಿ ಚಿತ್ರಗಳು, ವಿಶೇಷ ಬರಹ ಹಾಗೂ ಛಾಯಾಚಿತ್ರಗಳ ಕುರಿತು ಹರ್ಷ ವ್ಯಕ್ತಪಡಿಸಿದರು. ನಂತರ ವಿದ್ಯಾರ್ಥಿಗಳ ಲಕ್ಷದೀಪೋತ್ಸವದ ಅನುಭವಗಳನ್ನು ಆಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here