ಎಸ್.ಡಿ ಶೆಟ್ಟಿ ಮತ್ತು ಎ.ಕೃಷ್ಣಪ್ಪ ಪೂಜಾರಿ ಯವರು ಕಾಂತಾವರ ಕನ್ನಡ ಸಂಘದ ದತ್ತಿನಿಧಿ ಪ್ರಶಸ್ತಿಗೆ ಆಯ್ಕೆ

0

ಬೆಳ್ತಂಗಡಿ: ಕನ್ನಡ ಸಂಘ ಕಾಂತಾವರ ನ.1ರಂದು ಹಮ್ಮಿಕೊಂಡಿರುವ ಕಾಂತಾವರ ಉತ್ಸವ 2023ರ ಸಾಲಿನ ತಾಲೂಕಿನ ಇಬ್ಬರು ದತ್ತಿನಿಧಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಡಾ.ಎಸ್.ಡಿ. ಶೆಟ್ಟಿ: ಡಾ.ಶಾಂತಿನಾಥ ದೀಪಣ್ಣ ಶೆಟ್ಟಿ ಇವರು ಗ್ರಂಥ ಸಂಪಾದಕರಾಗಿ, ಶಾಸನ ಸಂಶೋಧಕರಾಗಿ ನಾಡಿನಾದ್ಯಂತ ವಿದ್ವತ್‌ ವಲಯದಲ್ಲಿ ಪರಿಚಿತರು. ಹೊನ್ನಾವರ ತಾಲೂಕಿನ ಹಳದೀಪುರದ ಸಾಲಿಕೇರಿ ದೀಪಣ್ಣ ಶೆಟ್ಟಿ ಹಾಗೂ ಸುಂದರಮ್ಮ ದಂಪತಿಯ ಪುತ್ರ, ಕರ್ಣಾಟಕ ವಿ.ವಿ.ಯಿಂದ ಕನ್ನಡದಲ್ಲಿ ಸ್ನಾತಕೋತ್ತರ ಮತ್ತು ಶಾಸನ ಶಾಸ್ತ್ರದಲ್ಲಿ ಡಿಪ್ಲೋಮಾ ಪದವಿ ಪಡೆದು ಉಜಿರೆಯ ಎಸ್.ಡಿ.ಎಂ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಮೂವತ್ತೈದು ವರ್ಷಗಳ ಸೇವಾವಧಿಯಲ್ಲಿ ಪ್ರಾಧ್ಯಾಪಕ ಹಾಗೂ ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ಅಲ್ಲಿನ ‘ಡಾ. ಹಾ.ಮಾ. ನಾಯಕ ಸಂಶೋಧನ ಕೇಂದ್ರ’ದ ಸಂಯೋಜನಾಧಿಕಾರಿಯಾಗಿ ಕೆಲಸ ಮಾಡಿರುವ ಅವರು ಅಲ್ಲಿಂದ ಪ್ರಕಟವಾಗುವ ‘ಶೋಧ’ ಸಂಶೋಧನ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿ, ಧರ್ಮಸ್ಥಳದ ಮಂಜೂಷಾ ವಸ್ತು ಸಂಗ್ರಹಾಲಯಕ್ಕೆ ಪ್ರಾಚೀನ ವಸ್ತುಗಳನ್ನು ಸಂಗ್ರಹಿಸುವಲ್ಲಿಯು ಇವರ ಮಹತ್ವದ ಪಾತ್ರ, ಓಲೆ ಗರಿ ಮತ್ತು ಶಾಸನಗಳ ಅಧ್ಯಯನ ಆಧಾರದಿಂದ ಪ್ರಕಟಿಸಿದ್ದಾರೆ.ಇವರ ಪಿಎಚ್‌.ಡಿ ಮಹಾಪ್ರಬಂಧ – ‘ಕರಾವಳಿಯಲ್ಲಿ ಜೈನ ಧರ್ಮ- ಸಾಂಸ್ಕೃತಿಕ ಅಧ್ಯಯನ’ ಎನ್ನುವುದಾಗಿದ್ದು ‘ಸ್ಥವಿರ’, ‘ನಾಗಚಂದ್ರ ಮತ್ತು ಅವನ ಕೃತಿಗಳು’, ‘ಚದುರ ಚಂದ್ರಮನ ಕಾರ್ಕಳ ಗೊಮ್ಮಟೇಶ್ವರ ಚರಿತೆ’, ‘ಹೊಂಬಿದಿರು’, ‘ಮರುದಿಬ್ಬಣ’ ಮೊದಲಾದ ಹಲವಾರು ಅಧ್ಯಯನಶೀಲ ಕೃತಿಗಳು ಇದ್ದು ಇವರು ಹಲವಾರು ವಿಚಾರ ಸಂಕಿರಣಗಳಲ್ಲಿ ವಿದ್ವತ್‌ ಪ್ರಬಂಧಗಳನ್ನು ಮಂಡಿಸಿದ್ದಾರೆ. ಅವರ ಸಾಹಿತ್ಯ ಸೇವೆಯನ್ನು ಗುರುತಿಸಿ ಅವರಿಗೆ ‘ಸಿದ್ಧಾಂತ ಕೀರ್ತಿ ಪ್ರಶಸ್ತಿ’, ‘ಶಾಸನ ಶಾಸ್ತ್ರಜ್ಞ ಪ್ರಶಸ್ತಿ’ ಪ್ರಶಸ್ತಿಗಳು ಲಭಿಸಿವೆ.

ಪ್ರೊ.ಎ. ಕೃಷ್ಣಪ್ಪ ಪೂಜಾರಿಯವರಿಗೆ ಶ್ರೇಷ್ಠ ಶಿಕ್ಷಕ ಸೌರಭ ಪ್ರಶಸ್ತಿ: ಶಿಕ್ಷಕರಾಗಿ, ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಶಿಕ್ಷಣ ಕ್ಷೇತ್ರದಲ್ಲಿ ಸಾರ್ಥಕ ಸೇವೆಯನ್ನು ಸಲ್ಲಿಸಿ ನಿವೃತ್ತರಾದ ಪ್ರೊ.ಎ.ಕೃಷ್ಣಪ್ಪ ಪೂಜಾರಿ ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಸಕ್ರೀಯಸೇವಾ ನಿರತರು, ಬೆಳ್ತಂಗಡಿ ಶ್ರೀ ಸತ್ಯಸಾಯಿ ಸೇವಾ ಸಮಿತಿ ಸಂಚಾಲಕರಾಗಿ, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷರಾಗಿ, ಉಪ್ಪಿನಂಗಡಿ ಜೇಸಿಸ್ ಅಧ್ಯಕ್ಷರಾಗಿ, ರಾಮಕುಂಜ ಯಕ್ಷಗಾನ ಸಂಘದ ಸಂಚಾಲಕರಾಗಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ, ಪುತ್ತೂರು ಶ್ರೀ ಗುರುನಾರಾಯಣ ಸೇವಾ ಸಂಘದ ಉಪಾಧ್ಯಕ್ಷರಾಗಿ, ಶರವೂರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಉತ್ಸವ ಸಮಿತಿಯ ಅಧ್ಯಕ್ಷರಾಗಿ, ಬೆಳ್ತಂಗಡಿ ಶ್ರೀ ಗುರು ರಾಘವೇಂದ್ರ ಮಠದ ಗೌರವ ಸಲಹೆಗಾರರಾಗಿ ಮತ್ತು ಇತರ ಅನೇಕ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪ್ರಶಸ್ತಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸನ್ಮಾನ, ಬಿಲ್ಲವಾಸ್ ದುಬೈ ಗೌರವ ಪ್ರಶಸ್ತಿ, ಮುಂಬೈ ಬಿಲ್ಲವ ಮಹಾ ಮಂಡಲದ ಗೌರವ ಪ್ರಶಸ್ತಿ, ಅರ್ಕುಳ ಚಾರಿಟೇಬಲ್ ಟ್ರಸ್ಟ್ ನಿಂದ ಸಮಾಜ ಸೇವಾ ಪ್ರಶಸ್ತಿ ಹೀಗೆ ಹಲವು ಪ್ರಶಸ್ತಿ, ಸನ್ಮಾನಗಳನ್ನು ಪಡೆರುತ್ತಾರೆ.

ನವೆಂಬರ್ 1ರಂದು ನಡೆಯುವ ‘ಕಾಂತಾವರ ಉತ್ಸವ’ದಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆಯಲ್ಲಿ ಪ್ರಸಸ್ತಿ ಪ್ರದಾನ ನಡೆಯಲಿದೆ.

LEAVE A REPLY

Please enter your comment!
Please enter your name here