ಅ.24: ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ 56ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ

0

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ 56ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ ಅಕ್ಟೋಬರ್ 24ರಂದು ಧರ್ಮಸ್ಥಳದಲ್ಲಿ ನಡೆಯಲಿದೆ. ಪಟ್ಟಾಭಿಷೇಕದ 56ನೇ ವರ್ಧಂತ್ಯುತ್ಸವ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅ.24ರಂದು ವಿವಿಧ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳು ನಡೆಯಲಿವೆ. ಪಟ್ಟಾಭಿಷೇಕ ವರ್ಧಂತ್ಯುತ್ಸವದ ಪ್ರಯುಕ್ತ ದೇವಳದ ಸಿಬ್ಬಂದಿ ವರ್ಗದವರಿಂದ ಅ.19ರಂದು ಧರ್ಮಾಧಿಕಾರಿಗಳಿಗೆ ಗೌರವ ಸಮರ್ಪಣೆ ನಡೆಯಲಿದೆ.

ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ದೇವಳದ ಹಿರಿಯ 25 ನೌಕರರಿಗೆ ಸನ್ಮಾನ ನಡೆಯಲಿದೆ. ಅಕ್ಟೋಬರ್ 20ರಂದು ಶಾಲಾ-ಕಾಲೇಜುಗಳಿಂದ, ಗ್ರಾಮಸ್ಥರಿಂದ, ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ, ಸಿರಿ ಗ್ರಾಮೋದ್ಯೋಗ ಸಂಸ್ಥೆ, ಧರ್ಮಸ್ಥಳ ಸರ್ಕಾರಿ ಕಚೇರಿಗಳ ನೌಕರರಿಂದ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಗೌರವ ಸಮರ್ಪಣೆ ನಡೆಯಲಿದೆ.ಅ.21ರಂದು ವಿವಿಧ ವಿಭಾಗಗಳ ನಡುವೆ ಛದ್ಮವೇಷ ಸ್ಪರ್ಧೆ ನಡೆಯಲಿದೆ. ಅ.24ರಂದು ನಡೆಯುವ ರಾಜ್ಯಸಭಾ ಸದಸ್ಯರೂ ಆಗಿರುವ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ 56ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವದ ಕಾರ್ಯಕ್ರಮಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸಕಲ ಸಿದ್ಧತೆ ನಡೆಯುತ್ತಿದೆ.

21ನೇ ಧರ್ಮಾಧಿಕಾರಿ ಡಾ. ಹೆಗ್ಗಡೆ: ಶ್ರೀ ಕ್ಷೇತ್ರ ಧರ್ಮಸ್ಥಳದ 21ನೇಯ ಧರ್ಮಾಧಿಕಾರಿಯವರಾಗಿ ಪಟ್ಟವನ್ನು ಅಲಂಕರಿಸಿದವರು ಡಾ.ಡಿ ವೀರೇಂದ್ರ ಹೆಗ್ಗಡೆಯವರು.1968ರ ಅಕ್ಟೋಬರ್ 24ರಂದು ಪಟ್ಟಾಭಿಷಿಕ್ತರಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ನವ ಧರ್ಮಸ್ಥಳದ ನಿರ್ಮಾತೃ. ಶ್ರೀ ಕ್ಷೇತ್ರ ಧರ್ಮಸ್ಥಳದ ಪರಂಪರೆಯನ್ನು ಬೆಳೆಸಿದವರು. ಚತುರ್ದಾನಗಳಾದ ಅನ್ನದಾನ, ವಿದ್ಯಾದಾನ, ಅಭಯದಾನ ಮತ್ತು ಔಷಧ ದಾನಗಳಿಂದಲೇ ಕ್ಷೇತ್ರವನ್ನು ಬೆಳಗಿಸಿದವರು ಈಗಿನ ಧರ್ಮಾಧಿಕಾರಿಗಳು. ಹೆಗ್ಗಡೆಯವರ ಸಾಮಾಜಿಕ, ಧಾರ್ಮಿಕ, ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಗಳಿಗೆ ಕೋಟ್ಯಾಂತರ ಭಕ್ತರು ಮನಸೋತಿದ್ದಾರೆ. ಧರ್ಮಸ್ಥಳ ಎಂಬ ಹೆಸರನ್ನು ವಿಶ್ವವಿಖ್ಯಾತಗೊಳಿಸಿದವರು ಪದ್ಮಭೂಷಣ ಡಾ| ಡಿ ವಿರೇಂದ್ರ ಹೆಗ್ಗಡೆಯವರು.ಲಕ್ಷಾಂತರ ಭಕ್ತರ ಮನೆಗಳಲ್ಲಿ ಧರ್ಮಸ್ಥಳದ ಮಂಜುನಾಥನ ಜೊತೆಗೆ ಮಾತನಾಡುವ ಮಂಜುನಾಥ ಎಂದೇ ಭಕುತರು ಕರೆಯುವ ವಿರೇಂದ್ರ ಹೆಗ್ಗಡೆಯವರ ಪೋಟೋಗೂ ಆರಾಧನೆಯಾಗುತ್ತಿದೆ.

LEAVE A REPLY

Please enter your comment!
Please enter your name here