ಸೌಜನ್ಯ ಕೊಲೆ ಪ್ರಕರಣವನ್ನು ನ್ಯಾಯಾಂಗ ಮರು ತನಿಖೆಗೆ ವಹಿಸಲು ವಿಶ್ವ ಹಿಂದೂ ಪರಿಷತ್ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಆಗ್ರಹ- ಪತ್ರಿಕಾಗೋಷ್ಠಿ

0

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಪಾಂಗಾಳದ ನಿವಾಸಿ, ಸೌಜನ್ಯ ಎಂಬ ಹೆಣ್ಣು ಮಗಳನ್ನು ಅಮಾನವೀಯವಾಗಿ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಘಟನೆ 2012ರಲ್ಲಿ ನಡೆದಿತ್ತು.ಈ ಘಟನೆ
ಇಡೀ ದಕ್ಷಿಣ ಕನ್ನಡ ಜಿಲ್ಲೆಗೆ ಕಪ್ಪು ಚುಕ್ಕೆಯಾಗಿದೆ.ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿದ ನಂತರವೂ ಸೌಜನ್ಯ ಕೊಲೆಗೆ ನ್ಯಾಯ ಸಿಗಲಿಲ್ಲ.ಹಾಗಾಗಿ ಈ ಪ್ರಕರಣವನ್ನು ಉಚ್ಚ ನ್ಯಾಯಾಲಯ ಅಥವಾ ಸರ್ವೋಚ್ಚ ನ್ಯಾಯಾಲಯದ ಹಾಲಿ ನ್ಯಾಯಾಧೀಶರ ಮುಖಾಂತರ ಮರುತನಿಖೆ ನಡೆಸಿ ನೈಜ ಆರೋಪಿಗಳನ್ನು ಬಂಧನ ಮಾಡಿ, ಸೌಜನ್ಯ ಕೊಲೆ ರಹಸ್ಯವನ್ನು ಬೇಧಿಸಲು ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಆಗ್ರಹ ಮಾಡಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಕಾರ್ಯಾಧ್ಯಕ್ಷ ಡಾ.ಎಂಬಿ ಪುರಾಣಿಕ್ ಹೇಳಿದರು.

ಅವರು ಆ.2 ರಂದು ಬೆಳ್ತಂಗಡಿಯಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.ಸೌಜನ್ಯಳ ನ್ಯಾಯಕೋಸ್ಕರ ಪ್ರಾಮಾಣಿಕವಾಗಿ, ನ್ಯಾಯ ಸಮ್ಮತವಾಗಿ ಹೋರಾಟ ಮಾಡುವ ಸಂಘಟನೆಗಳಿಗೆ ವಿಶ್ವ ಹಿಂದೂ ಪರಿಷದ್ ಬೆಂಬಲ ನೀಡುತ್ತದೆ.ದಕ್ಷಿಣ ಕನ್ನಡ ಜಿಲ್ಲೆ ದೈವ ದೇವರ ಮೇಲೆ ಅಪಾರ ನಂಬಿಕೆ ಇರುವ ಜಾಗ, ಈ ತುಳುನಾಡಿನಲ್ಲಿ ಅನ್ಯಾಯವಾದಾಗ ದೈವ ದೇವರು ಎಂದಿಗೂ ನಮ್ಮ ಕೈಬಿಡುವುದಿಲ್ಲ.ಯಾವುದೇ ಅನ್ಯಾಯವಾದಾಗ ದೈವ ದೇವರ ಮೊರೆ ಹೋಗುವುದು ನಮ್ಮ ಹಿರಿಯರಿಂದ ಬಂದ ವಾಡಿಕೆ.ಹಾಗಾಗಿ ಇಂತಹ ಪುಣ್ಯ ನಾಗಾರಾಧನೆ, ದೈವಾರಾಧನೆ ನಾಡಿನಲ್ಲಿ ಈ ಅನ್ಯಾಯದ ವಿರುದ್ಧ ಮುಗ್ಧ ಹೆಣ್ಣು ಮಗಳು ಸೌಜನ್ಯ ಕೊಲೆ ಪ್ರಕರಣ ಆದಷ್ಟು ಬೇಗ ಇತ್ಯರ್ಥವಾಗಿ ನೈಜ ಆರೋಪಿಗಳಿಗೆ ಶಿಕ್ಷೆಯಾಗುವಂತೆ, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ದೇವಸ್ಥಾನ, ದೈವಸ್ಥಾನ ಹಾಗೂ ಮಠ ಮಂದಿರಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸುವಂತೆ ವಿಶ್ವ ಹಿಂದೂ ಪರಿಷದ್ ಕರೆ ನೀಡುತ್ತದೆ.

ಧರ್ಮ ನೆಲೆಸಿರುವ ಸ್ಥಳವೇ ಧರ್ಮಸ್ಕಳವೆಂಬುದು ಭಕ್ತರ ನಂಬಿಕೆ. ಇಲ್ಲಿ ಸಾಕ್ಷಾತ್ ಪರಮೇಶ್ವರನೇ ನೆಲೆಸಿದ್ದಾನೆ ಎಂದು ಹೇಳುತ್ತಾರೆ.ಧರ್ಮಸ್ಕಳ ಎಂದರೆ ಧರ್ಮವು ನೆಲಸಿರುವ ಸ್ಥಳ ಎಂಬುದು ಭಕ್ತರ ನಂಬಿಕೆ ಹಾಗಾಗಿ ಲಕ್ಷಾಂತರ ಭಕ್ತರು ಈ ಇತಿಹಾಸ ಪ್ರಸಿದ್ಧ ದೇವಸ್ಥಾನಕ್ಕೆ ಬಂದು ಮಂಜುನಾಥ ಸ್ವಾಮಿಯ ಹಾಗೂ ಅಣ್ಯಪ್ಪ ಸ್ವಾಮಿಯ ದರ್ಶನ ಪಡೆಯುತ್ತಾರೆ.ಪ್ರತಿನಿತ್ಯ ಸಾವಿರಾರು ಭಕ್ತರಿಗೆ ಅನ್ನ ದಾಸೋಹ ನಿರಂತರವಾಗಿ ನಡೆಯುತ್ತಾ ಬಂದಿದೆ.ಶ್ರೀಕ್ಷೇತ್ರದ ವತಿಯಿಂದ ಗ್ರಾಮಾಭಿವೃದ್ಧಿ ಯೋಜನೆಗಳು ರಾಜ್ಯದ ಗ್ರಾಮ ಗ್ರಾಮಗಳಲ್ಲಿ ನಡೆಯುತ್ತಿದೆ.ಇಂತಹ ಇತಿಹಾಸ ಪ್ರಸಿದ್ಧ ಕ್ಷೇತ್ರವನ್ನು ಸೌಜನ್ಯ ಕೊಲೆ ಪ್ರಕರಣ ಹೋರಾಟದ ಹೆಸರಿನಲ್ಲಿ ಅವಹೇಳನ ಮಾಡುವುದು, ಅಗೌರವ ತೋರುವುದು, ಶ್ರೀ ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ತರುವಂತಹ ಹೇಳಿಕೆಗಳನ್ನು ವಿಶ್ವ ಹಿಂದೂ ಪರಿಷದ್ ಬಲವಾಗಿ ವಿರೋಧಿಸುತ್ತದೆ.ಮತ್ತು ಶ್ರೀ ಕ್ಷೇತ್ರಕ್ಕೆ ಅವಮಾನ ಮಾಡಿದಲ್ಲಿ ಇಂದಿಗೂ ಸಹಿಸುವುದಿಲ್ಲ.ಸೌಜನ್ಯ ಕೊಲೆ ಪ್ರಕರಣ ಹೋರಾಟವನ್ನು ಮುಂದಿಟ್ಟುಕೊಂಡು ಕೆಲವು ಪ್ರಗತಿಪರ ಬುದ್ಧಿಜೀವಿಗಳ ಸಂಘಟನೆಗಳು ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ.ಈ ರೀತಿಯ ಅಪ ಪ್ರಚಾರ, ಅವಮಾನ ಮಾಡಿದಲ್ಲಿ ಅಂತಹ ಸಂಘಟನೆಗಳಿಗೆ ವಿಶ್ವ ಹಿಂದೂ ಪರಿಷದ್ ನೇರ ಹೋರಾಟದ ಎಚ್ಚರಿಕೆಯನ್ನು ನೀಡುತ್ತದೆಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪುವೆಲ್, ಪ್ರಾಂತ ಸಹ ಸೇವಾ ಪ್ರಮುಖ್ ಗೋಪಾಲ ಕುತ್ತಾರ್, ಪ್ರಾಂತ ಸಹ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ, ವಿಭಾಗ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ, ವಿಭಾಗ ಸಾಮರಸ್ಯ ಪ್ರಮುಖ್ ಭಾಸ್ಕರ್ ಧರ್ಮಸ್ಥಳ, ಪುತ್ತೂರು ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಮಂಗಳೂರು ಜಿಲ್ಲಾ ಅಧ್ಯಕ್ಷ ಎಚ್.ಕೆ.ಪುರುಷೋತ್ತಮ, ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್, ಬೆಳ್ತಂಗಡಿ ತಾಲೂಕು ಅಧ್ಯಕ್ಷ ದಿನೇಶ್ ಚಾರ್ಮಾಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here