ಬೆಳ್ತಂಗಡಿ ಲಯನ್ಸ್ ಕ್ಲಬ್ ನ ಸುವರ್ಣ ಮಹೋತ್ಸವ, ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ- ನಗುವಿನಿಂದ ಶಾಂತಿ ಪ್ರಾರಂಭವಾಗುತ್ತದೆ: ಲಯನ್ಸ್ ಜಿಲ್ಲಾ ಉಪರಾಜ್ಯಪಾಲ ಕುಡ್ಪಿ ಅರವಿಂದ ಶೆಣೈ

0

ಬೆಳ್ತಂಗಡಿ: ನಗುವಿನಿಂದ ಶಾಂತಿ ಪ್ರಾರಂಭವಾಗುತ್ತದೆ ಎಂಬುದು ಮದರ್ ತೆರೇಸಾ ಅವರ ವಿಶ್ವ ಶಾಂತಿಯ ಸಂದೇಶ.ಸೇವೆಯ ಮೂಲಕ ಎಲ್ಲರ ಮುಖದಲ್ಲಿ ನಗು ತಂದಿರುವ, ನಿತ್ಯ ನಿರಂತರ ಸಾರ್ಥಕ ಸೇವೆಯೇ ಬೆಳ್ತಂಗಡಿ ಲಯನ್ಸ್ ಕ್ಲಬ್ ನ 49 ವರ್ಷಗಳ ಇತಿಹಾಸ ಎಂಬುದಾಗಿ ಲಯನ್ಸ್ ಜಿಲ್ಲಾ ದ್ವಿತೀಯ ಉಪರಾಜ್ಯಪಾಲ ಕುಡ್ಪಿ ಅರವಿಂದ ಶೆಣೈ ಹೇಳಿದರು.

ಗುರುವಾಯನಕೆರೆ ಬಂಟರ ಭವನದಲ್ಲಿ ಜು.23 ರಂದು ನಡೆದ ಲಯನ್ಸ್ ಕ್ಲಬ್ ಬೆಳ್ತಂಗಡಿಯ ಸುವರ್ಣ ವರ್ಷಾಚರಣೆ ಹಾಗೂ ನೂತನ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ 2022 ನೇ ಸಾಲಿನ ಅಧ್ಯಕ್ಷ ಡಾ. ದೇವಿಪ್ರಸಾದ್ ಬೊಳ್ಮ ಸ್ವಾಗತಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕ ಶಿವಕುಮಾರ್ ಮತ್ತು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡುವೆಟ್ನಾಯ ಶುಭ ಕೋರಿದರು. ಲಯನ್ಸ್ ಸುವರ್ಣ ಸಂಭ್ರಮದ ಲೋಗೋ ವನ್ನು ಸ್ಥಾಪಕ ಸದಸ್ಯ ಎಂ.ಜಿ ಶೆಟ್ಟಿ ಅವರು ಅನಾವರಣಗೊಳಿಸಿದರು.
2023-24 ನೇ ಸಾಲಿನ ಅಧ್ಯಕ್ಷ, ಉದ್ಯಮಿ ಉಮೇಶ್ ಶೆಟ್ಟಿ ದಂಪತಿ, ಅವರ ಮಾತೃಶ್ರೀ ಸಹಿತ ದೀಪಬೆಳಗಿಸಿ, ನೂತನ ಸಾಲಿನ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು.
ಪ್ರಾಂತ್ಯಾಧ್ಯಕ್ಷ ಹೆರಾಲ್ಡ್ ತಾವ್ರೋ, ಜಿಲ್ಲಾ ಕೇಬಿನೆಟ್ ಸೆಕ್ರೆಟರಿ ಓಸ್ವಾಲ್ಡ್ ಪಿಂಟೋ, ವಲಯಾಧ್ಯಕ್ಷರುಗಳಾದ ದಿನೇಶ್ ಎಂ.ಕೆ ಮತ್ತು ಪ್ರತಿಭಾ ಹೆಬ್ಬಾರ್, ವಲಯದ ಇತರ 7 ಕ್ಲಬ್ಬುಗಳ ಅಧ್ಯಕ್ಷರುಗಳು, ನಿರ್ಗಮನ ಕೋಶಾಧಿಕಾರಿ ಪಂಚಾಕ್ಷರಪ್ಪ, ನೂತನ ಕೋಶಾಧಿಕಾರಿ ಸುಭಾಷಿಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸುವರ್ಣ ಮಹೋತ್ಸವದ ಅಂಗವಾಗಿ 50 ದೀಪಗಳನ್ನು ವೇದಿಕೆಗೆ ತರಲಾಗಿ ಅದರಲ್ಲಿ 50 ನೇ ದೀಪದಲ್ಲಿ ಕಾರ್ಯಕ್ರಮದ ಪ್ರಧಾನ ದೀಪಪ್ರಜ್ವಲನಗೊಳಿಸಲಾಯಿತು.
ಸಾಧಕರಿಗೆ ಸನ್ಮಾನದ ಪ್ರಯುಕ್ತ ಸಿ.ಎ ಉತ್ತೀರ್ಣರಾದ ನಿರೀಕ್ಷಾ ಎನ್ ನಾವರ ಮತ್ತು ಕಬಡ್ಡಿ ಕ್ರೀಡಾ ಸಾಧಕಿ ಅರ್ಚನಾ ಗೌಡ ಅವರಿಗೆ ಸನ್ಮಾನ ನೆರವೇರಿಸಲಾಯಿತು.
ಶವಾಗಾರದಲ್ಲಿ ಮರಣೋತ್ತರ ಪರೀಕ್ಷಾ ಸಹಾಯಕ ಸಿಬ್ಬಂದಿಗಳಾದ ಆನಂದ ಕೆಲ್ಲಕೆರೆ ಮತ್ತು ವಸಂತ ಸುದೆಮುಗೇರು, ಉರಗಸ್ನೇಹಿ ಅಶೋಕ್ ಪೂಜಾರಿ, ಅಂಚೆ ಮತ್ತು ಸಾಮಾಜಿಕ ಸೇವಕ ಸದಾಶಿವ ಕಕ್ಕ್ಯೇನ ಮತ್ತು ಜೀವರಕ್ಷಕ ಆಂಬುಲೆನ್ಸ್ ಸೇವಕ ಹಮೀದ್ ಆದರ್ಶನಗರ ಇವರನ್ನು ಅಭಿನಂದಿಸಲಾಯಿತು.
ಕು. ಅನನ್ಯಾ ಪ್ರಾರ್ಥನೆ ಹಾಡಿದರು. ಕೃಷ್ಣ ಆಚಾರ್ ವೇದಿಕೆಗೆ ಆಹ್ವಾನಿಸಿದರು. ಪ್ರಭಾಕರ ಗೌಡ ಬೊಳ್ಮ ಧ್ವಜವಂದನೆಯನ್ನು, ನೀತಿಸಂಹಿತೆಯನ್ನು ಧತ್ತಾತ್ರೇಯ ಗೊಲ್ಲ, ವಾರ್ಷಿಕ ವರದಿಯನ್ನು ಕಾರ್ಯದರ್ಶಿ ತುಕಾರಾಮ, ಪ್ರಮಾಣ ವಚನಕಾರರ ಪರಿಚಯವನ್ನು ವಸಂತ ಶೆಟ್ಟಿ, ನೂತನ ಅಧ್ಯಕ್ಷರ ಪರಿಚಯವನ್ನು ಧರಣೇಂದ್ರ ಕೆ ಜೈನ್, ನೂತನ ಕಾರ್ಯದರ್ಶಿ ಮತ್ತು ಕೋಶಾಧಿಕಾರಿಯ ಪರಿಚಯನ್ನು ನಿತ್ಯಾನಂದ ನಾವರ, ಸೇವಾ ಚಟುವಟಿಕೆಯ ನಿರ್ವಹಣೆಯನ್ನು ಹೇಮಂತ ರಾವ್ ‌ಯರ್ಡೂರು, ಸಾಧಕರ ಪರಿಚಯವನ್ನು ಕಿರಣ್ ಕುಮಾರ್ ಶೆಟ್ಟಿ, ನೂತನ ಸದಸ್ಯರ ಪರಿಚಯವನ್ನು ಮಂಜುನಾಥ ಜಿ ಮತ್ತು ರಘುರಾಮ ಶೆಟ್ಟಿ ನಿರ್ವಹಿಸಿದರು. ಲಾಂಗೂಲ ಚಾಲಕ ರಾಮಕೃಷ್ಣ ಗೌಡ ಜವಾಬ್ದಾರಿ ನಿರ್ವಹಿಸಿದರು.

ಪ್ರಕಾಶ್ ಶೆಟ್ಟಿ ನೊಚ್ಚ, ರವೀಂದ್ರ ಶೆಟ್ಟಿ ಬಳಂಜ ಕಾರ್ಯಕ್ರಮ ನಿರ್ವಹಿಸಿದರು. ನೂತನ ಕಾರ್ಯದರ್ಶಿ ಅನಂತಕೃಷ್ಣ ವಂದನಾರ್ಪಣೆಗೈದರು. ಅರವಿಂದ ಶೆಣೈ ಮತ್ತು ಮಮತಾ ಶೆಣೈ ದಂಪತಿಯನ್ನು, ನಿರ್ಗಮನಾಧ್ಯಕ್ಷ ಡಾ. ದೇವಿಪ್ರಸಾದ್ ಬೊಳ್ಮ ಮತ್ತು ಪ್ರಾಂತ್ಯಾಧ್ಯಕ್ಷ ವಸಂತ ಶೆಟ್ಟಿ ಅವರನ್ನು ಗೌರವಿಸಲಾಯಿತು. ನೂತನವಾಗಿ 10 ಮಂದಿ ಲಯನ್ಸ್ ಗೆ ಸೇರ್ಪಡೆಗೊಂಡರು.

LEAVE A REPLY

Please enter your comment!
Please enter your name here