ಇತಿಹಾಸ ನಿರ್ಮಿಸಿದವರ ಸ್ಮರಣೆ ಅತ್ಯಗತ್ಯ : ಸಚಿವ ಅಂಗಾರ
ಸಮಾನತೆಯ ಆಡಳಿತ ನೀಡಿದವರು ಕೆಂಪೇಗೌಡರು : ಡಾ.ಆರ್.ಪಿ.
ನಮ್ಮ ಹಿರಿಯರ ತ್ಯಾಗ, ಬಲಿದಾನದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ಬಂತು. ಅವರ ಹೋರಾಟದ ಹಿನ್ನಲೆಯ ಫಲವನ್ನು ನಾವು ಅನುಭವಿಸುತ್ತಿದ್ದೇವೆ. ಅಂತಹ ಹಿರಿಯರ ಸ್ಮರಣೆ ಇಂದಿನ ಅಗತ್ಯ. ಬೆಂಗಳೂರನ್ನು ಕಟ್ಟಿರುವ ಕೆಂಪೇಗೌಡರ ಕೊಡುಗೆ ಅಪಾರವಾಗಿದ್ದು ಅವರ ಪ್ರತಿಮೆ ನಿರ್ಮಾಣವಾಗಿರುವುದು ನಮ್ಮೆಲ್ಲರ ಹೆಮ್ಮೆ” ಎಂದು ಸಚಿವ ಎಸ್.ಅಂಗಾರ ಹೇಳಿದರು.
ನಾಡಪ್ರಭು ಕೆಂಪೇಗೌಡರ ಮೃತ್ತಿಕಾ ಸಂಗ್ರಹಣಾ ಅಭಿಯಾನ ರಥ ಸುಳ್ಯ ಚೆನ್ನಕೇಶವ ದೇವಸ್ಥಾನಕ್ಕೆ ತಲುಪಿ ಅಲ್ಲಿ ವಿವಿಧ ಕಡೆಯಿಂದ ಸಂಗ್ರಹಿಸಲಾಗಿದ್ದ ಮೃತ್ತಿಕೆ ಸಮರ್ಪಣೆ ಯಾದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಹಿರಿಯರು ಮಾಡಿದ ಕಾರ್ಯವನ್ನು ನೆನಪಿಸಿ ಭವಿಷ್ಯಕ್ಕೆ ಹಂಚುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕುರುಂಜಿಯವರು ಇಂದು ನಮ್ಮೆದುರು ಇಲ್ಲವಾದರೂ ಅವರ ಸಾಧನೆ ಅವರನ್ನು ನಮ್ಮಲ್ಲಿ ಜೀವಂತವಾಗಿಸಿದೆ” ಎಂದು ಹೇಳಿದರು.
ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ.ರೇಣುಕಾಪ್ರಸಾದ್ ಕೆ.ವಿ. ಮಾತನಾಡಿ, “ಬೆಂಗಳೂರನ್ನು ಕಟ್ಟಿ ಬೆಳಗಿದವರು ಕೆಂಪೇಗೌಡರು. ಅವರು ಗೌಡ ಸಮಾಜದಲ್ಲಿ ಹುಟ್ಟಿದರೂ ಆಡಳಿತ ನೀಡುವಾಗ ಜಾತಿ, ಮತ ಭೇದವಿಲ್ಲದೆ ಸಮಾನತೆಯ ಆಡಳಿತ ನೀಡಿದವರು. ಅವರ ಪ್ರತಿಮೆ ನಿರ್ಮಿಸಿದ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಅಧ್ಯಕ್ಷತೆ ವಹಿಸಿದ್ದರು.
ಮೀನುಗಾರಿಕಾ ನಿಗಮಾಧ್ಯಕ್ಷ ಎ.ವಿ. ತೀರ್ಥರಾಮ, ತಹಶೀಲ್ದಾರ್ ಅನಿತಾಲಕ್ಷ್ಮೀ, ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಚಂದ್ರಾ ಕೋಲ್ಚಾರ್, ಕ.ಸಾ.ಪ. ಅಧ್ಯಕ್ಷ ಚಂದ್ರಶೇಖರ ಪೇರಾಲು, ನ.ಪಂ. ಮುಖ್ಯಾಧಿಕಾರಿ ಸುಧಾಕರ್ ವೇದಿಕೆಯಲ್ಲಿ ಇದ್ದರು.
ತಾ.ಪಂ.ಇ.ಒ. ಭವಾನಿಶಂಕರ್ ಪ್ರಾಸ್ತಾವಿಕ ಮಾತನಾಡಿದರು. ಉಪತಹಶೀಲ್ದಾರ್ ಚಂದ್ರಕಾಂತ್ ಎಂ.ಆರ್.- ಗ್ರಾಮ ಕರಣಿಕ ತಿಪ್ಪೇಶಪ್ಪ ಕಾರ್ಯಕ್ರಮ ನಿರೂಪಿಸಿದರು. ಸಿಡಿಪಿಒ ಶ್ರೀಮತಿ ರಶ್ಮಿ ಅಶೋಕ್ ನೆಕ್ರಾಜೆ ವಂದಿಸಿದರು.