ಅ.17ರ ಸಂಜೆ 7.22 ರ ಶುಭ ಮುಹೂರ್ತದಲ್ಲಿ ಉದ್ಭವಗೊಂಡು ಭಕ್ತರ ತೀರ್ಥ ಸ್ನಾನ
ಹರಿಹರ ಪಲ್ಲತ್ತಡ್ಕ; ಕೊಡಗಿನ ತಲಕಾವೇರಿಯಲ್ಲಿ
ತುಲಾ ಸಂಕ್ರಮಣದ ಪ್ರಯುಕ್ತ ನಡೆಯುವ ತೀರ್ಥೊದ್ಭವದ ಹೊತ್ತಲ್ಲೆ ಹರಿಹರ ಶ್ರೀ ಹರಿಹರೇಶ್ವರ ದೇವಾಲಯದ ತ್ರಿವೇಣಿ ಸಂಗಮದಲ್ಲೂ ತೀರ್ಥೊದ್ಭವ ಆಗುತ್ತದೆ ಎನ್ನುವ ಪ್ರತೀತಿ ಇದೆ.
ಪಶ್ಚಿಮ ಘಟ್ಟ ಸಾಲು ಪರ್ವತದಿಂದ ಪಶ್ಚಿಮಾಭಿಮುಖವಾಗಿ ಹರಿದು ಬಂದ ನದಿಯು ಹರಿಹರ ದೇವಸ್ಥಾನದ ಸಂಗಮ ಕ್ಷೇತ್ರದ ಅಘಾನಾಶಿನಿ ಎಂಬಲ್ಲಿ ಸಂಗಮಗೊಂಡು ಮುಂದಕ್ಕೆ ಹರಿಯುತ್ತದೆ. ಅಂತಹ ಪುಣ್ಯ ಸಂಗಮ ಕ್ಷೇತ್ರದಲ್ಲೂ ಅ.17 ರಂದು ಸಂಜೆ ತಲಕಾವೇರಿಯಲ್ಲಿ ನಡೆಯುವ ತೀರ್ಥೊದ್ಭವ ಪರ್ವಕಾಲದಲ್ಲಿ ಇಲ್ಲಿಯೂ ತೀರ್ಥೊದ್ಭವ ನಡೆಯಲಿದ್ದು ಅಂದು ನೂರಾರು ಭಕ್ತರು ತೀರ್ಥ ಸ್ನಾನ ನೆರವೇರಿಸಲಿದ್ದಾರೆ.
ದೇವಳದ ಮುಂದಿರುವ ಸಂಗಮ ಕ್ಷೇತ್ರದ ತ್ರಿವೇಣಿ ಸಂಗಮದಲ್ಲಿ ಪ್ರತಿ ವರ್ಷ ತುಲಾ ಸಂಕ್ರಮಣದಂದು ತೀರ್ಥೋದ್ಬವ ನಡೆಯುತ್ತದೆಂಬ ಭಕ್ತರ ನಂಬಿಕೆಯಂತೆ ಇಲ್ಲಿ ತೀರ್ಥ ಸ್ನಾನ ನೆರವೇರಿಸಲಾಗುತ್ತದೆ. ದೇವಳದ ಪ್ರಧಾನ ಅರ್ಚಕರು ಅಂದು ನದಿ ದಂಡೆಯಲ್ಲಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸುವರು.. ಗಣಪತಿ ಪೂಜೆ, ಗಂಗಾ ಪೂಜೆ ನಡೆದ ಬಳಿಕ ನದಿಗೆ ತೆರಳಿ ಬಾಗಿನ ಅರ್ಪಿಸಲಾಗುತ್ತದೆ. ಬಳಿಕ ಭಕ್ತರು ತೀರ್ಥ ಸ್ನಾನ ನೆರವೇರಿಸುವರು.ಅಂದು ಗ್ರಾಮಸ್ಥರಲ್ಲದೆ ಗುತ್ತಿಗಾರು, ಮಡಪ್ಪಾಡಿ, ನಡುಗಲ್ಲು, ಸುಬ್ರಹ್ಮಣ್ಯ, ಬಾಳುಗೋಡು, ಕೊಲ್ಲಮೊಗ್ರು ಈ ಪ್ರದೇಶಗಳಿಂದ ಭಕ್ತರು ಆಗಮಿಸಿ ಪುಣ್ಯ ಸ್ನಾನ ಈಡೇರಿಸಿಕೊಳ್ಳುತ್ತಾರೆ.
ವರದಿ: ಕುಶಾಲಪ್ಪ ಕಾಂತುಕುಮೇರಿ