ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಗೇರುಕಟ್ಟೆಯ ಪರಪ್ಪು ಬಸ್ ನಿಲ್ದಾಣದಲ್ಲಿ ಅಪರಿಚಿತ ವೃದ್ಧೆಯೋರ್ವರು ಅಸ್ವಸ್ಥಗೊಂಡು ಕುಳಿತಿದ್ದ ಬಗ್ಗೆ ಮಾಹಿತಿ ತಿಳಿದ ಕಳಿಯ ಪಿಡಿಓ ವೃದ್ದೆಯನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿ ಮಾನವೀಯತೆ ಮೆರೆದ ಘಟನೆ ನಡೆದಿದೆ.
ಪರಪ್ಪು ಬಸ್ ನಿಲ್ದಾಣದಲ್ಲಿ ಅಸ್ವಸ್ಥಗೊಂಡು ವೃದ್ಧೆಯೋರ್ವರು ಕುಳಿತಿರುವುದನ್ನು ಕಂಡ ಗೇರುಕಟ್ಟೆ ನಾಟಿ ವೈದ್ಯ ಅಬ್ದುಲ್ ಶಾಫಿ ಯವರು ಬೀಟ್ ಪೊಲೀಸ್ ಮುಖಾಂತರ ಕಳಿಯ ಅಭಿವೃದ್ಧಿ ಅಧಿಕಾರಿ ಸಂತೋಷ್ ಪಾಟೀಲ್ ಗೆ ಮಾಹಿತಿ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಹೋಗಿ ವೃದ್ಧೆಯನ್ನು ವಿಚಾರಿಸಿದ್ದಾರೆ. ಆದರೆ ಆಕೆಗೆ ಮಾತು ಬಾರದೆ ಇರುವುದು ತಿಳಿದು ನಂತರ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದಾರೆ. ಬೆಳ್ತಂಗಡಿ ಪೊಲೀಸರು ವೃದ್ಧೆಯ ಮನೆಯವರ ಪತ್ತೆಗಾಗಿ ಹುಡುಕಾಟ ನಡೆಸಿದ್ದು, ಇನ್ನೂ ಮನೆಯವರ ಸಂಪರ್ಕ ಸಾಧ್ಯವಾಗುತ್ತಿಲ್ಲ. ಹಾಗಾಗಿ ಪ್ರಕಟನೆ ಮೂಲಕ ಪತ್ತೆಗೆ ಮನವಿ ನೀಡಿದ್ದಾರೆ.