ವೇಣೂರು: ವಂಶಪಾರಂಪರ್ಯ ಆಯುರ್ವೇದ ಪಂಡಿತ, ನಾಡಿ ತಜ್ಞ, ‘ ಕರ್ನಾಟಕ ವೈದ್ಯರತ್ನ’ ಪ್ರಶಸ್ತಿ ಪುರಸ್ಕೃತ ವೈದ್ಯ ಸಲೀಂ ಗರ್ಡಾಡಿ ಅವರಿಗೆ ‘ ವಿಶ್ವ ಕನ್ನಡ ಕಣ್ಮಣಿ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ‘ ಲಭಿಸಿದೆ.
ಶಿವಮೊಗ್ಗ ಜಿಲ್ಲಾ ಪಂಚಾಯತ್, ಶಿಕಾರಿಪುರ ತಾಲೂಕು ಪಂಚಾಯತ್, ಗೊದ್ದನಕೊಪ್ಪ ಗ್ರಾಮ ಪಂಚಾಯತ್ ಹಾಗೂ ವಿವಿಧ ಸಮಿತಿಗಳ ಆಶ್ರಯದಲ್ಲಿ ಶಿವಮೊಗ್ಗದಲ್ಲಿ ನಡೆದ ‘ಜಾನಪದ ಯುವಜನೋತ್ಸವ’ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯಿತು.
ಗರ್ಡಾಡಿಯವರಾಗಿದ್ದು ಮೂಡುಬಿದಿರೆಯಲ್ಲಿ ಸಂಜೀವಿನಿ ಆಯುರ್ವೇದಿಕ್ ಸಂಸ್ಥೆಯನ್ನು ಹೊಂದಿರುವ ವೈದ್ಯ ಎಂ.ಕೆ. ಗರ್ಡಾಡಿ ಅವರ ಪುತ್ರರಾಗಿರುವ ಸಲೀಂ ಗರ್ಡಾಡಿ ಅವರು ಪ್ರಸ್ತುತ ಚಿಕ್ಕಮಗಳೂರಿನಲ್ಲಿ ಅಮೃತ ಸಂಜೀವಿನಿ ಆಯುರ್ವೇದಿಕ್ ಸಂಸ್ಥೆಯನ್ನು ಮುಂದುವರಿಸುತ್ತಿದ್ದಾರೆ. ವಂಶಪಾರಂಪರ್ಯ ಆಯುರ್ವೇದ ಕ್ಷೇತ್ರದಲ್ಲಿ ಎಲೆಮರೆಕಾಯಿಯಂತೆ ಗಣನೀಯ ಸೇವೆ ಸಲ್ಲಿಸಿರುವ ಇವರ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.