
ಪಟ್ರಮೆ: ಗೆಳೆಯರ ಬಳಗ ಪಟ್ರಮೆ ನೇತೃತ್ವದಲ್ಲಿ ಶಾಲಾ ಎಸ್.ಡಿ.ಎಮ್.ಸಿ ಸಹಕಾರದಲ್ಲಿ ಶ್ರೀ ಗಣೇಶ ಚೌತಿ ಪ್ರಯುಕ್ತ ಆ.27ರಂದು ಸ.ಉ.ಹಿ.ಪ್ರಾಥಮಿಕ ಶಾಲೆ ಅನಾರಿನಲ್ಲಿ ಶ್ರಮದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆ 9ಗಂಟೆಗೆ ಹಿರಿಯ ಕೃಷಿಕ ಡೊಂಬಯ್ಯ ಗೌಡರು ತೆಂಗಿನ ಗಿಡ ನಡುವ ಮೂಲಕ ಶ್ರಮದಾನ ಉದ್ಘಾಟಿಸಿದರು.
ಶಾಲಾ ಆವರಣದ ಸುತ್ತ ತುಂಬಿದ್ದ ಬಲ್ಲೆಗಳನ್ನು ಸ್ವಚ್ಚಗೊಳಿಸಲಾಯಿತು. ತೆಂಗಿನ ಗಿಡಗಳಿಗೆ ಸೊಪ್ಪು ಹಾಕಲಾಯಿತು. 12 ತೆಂಗಿನ ಗಿಡಗಳನ್ನು ನಡಲಾಯಿತು. ಅಡಿಕೆ ತೋಟದ ಬಲ್ಲೆ ಸ್ವಚ್ಚಗೊಳಿಸಿ ಗಿಡಗಳಿಗೆ ಸೊಪ್ಪು ಹಾಕಲಾಯಿತು.
ಶಿರೀಷ್ ರಾಜ್ ಸಂಕೇಶ 3 ತೆಂಗಿನ ಗಿಡ, ಅಣ್ಣು ಗೌಡ ಹಿರ್ತಡ್ಕ 4, ಚಂದ್ರ ಶೇಖರ ಗೌಡ ಅನಾರು 3, ಶಾಯಿದಾ 1, ಶಾಲೆಯಿಂದ 1 ಹೀಗೆ 12 ತೆಂಗಿನ ಗಿಡಗಳನ್ನು ಉಚಿತವಾಗಿ ಒದಗಿಸಿದರು. ಜಯಂತ ಪಾದೇಜಾಲು, ದಿನೇಶ್ ಮೈಕೆ, ದೊಲ್ಲ ಗೌಡ ಜಾಲು ಬಲ್ಲೆ ಸ್ವಚ್ಚಗೊಳಿಸಲು ಮಿಷನ್ ಒದಗಿಸಿದ್ದರು.
ಶ್ರಮದಾನದಲ್ಲಿ ಗೆಳೆಯರ ಬಳಗದ ಅಧ್ಯಕ್ಷ ಚೋಮ ಪಾದೇಜಾಲು, ಎಸ್.ಡಿ.ಎಮ್.ಸಿ ಅಧ್ಯಕ್ಷ ಧನಂಜಯ ಗೌಡ, ಉಪಾಧ್ಯಕ್ಷೆ ರೇವತಿ, ಮಾಜಿ ಅಧ್ಯಕ್ಷರಾದ ದೊಲ್ಲ ಗೌಡ, ಶ್ಯಾಮರಾಜ್, ಶಾಲಾ ಶಿಕ್ಷಕ ಜಯಂತ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ವಿಮಲ, ಡಿ.ವೈ.ಎಫ್.ಐ ಪಟ್ರಮೆ ಅಧ್ಯಕ್ಷ ಭುವನೇಶ್ ನೆಕ್ಕರೆ, ಶಾಲಾ ಬಿಸಿಯೂಟ ನೌಕರರಾದ ರೇಖಾ, ಗೀತಾ ಮೊದಲಾದವರ ಸಹಿತ ಮೂವತ್ತಕ್ಕೂ ಹೆಚ್ಚು ಶ್ರಮದಾನಿಗಳು ಭಾಗವಹಿಸಿದ್ದರು. ಆರಿಷ್ ಪಟ್ರಮೆ ಪಿಕಪ್ ಒದಗಿಸಿದ್ದರು. ಶ್ರಮದಾನದ ಕೊನೆಯಲ್ಲಿ ನ್ಯಾಯವಾದಿ ಬಿಯಂಭಟ್ ಎಲ್ಲಾ ಶ್ರಮದಾನಿಗಳಿಗೆ ನೆನಪಿನ ಕಾಣಿಕೆಯನ್ನು ನೀಡಿದರು.
ಶ್ರೀ ಗಣೇಶ ಚೌತಿಯನ್ನು ಈ ರೀತಿ ಸರ್ವ ಧರ್ಮೀಯರ ದೇವ ಮಂದಿರಕ್ಕೆ ಸಮನಾಗಿರುವ ಸರಕಾರಿ ಶಾಲೆಯ ಅಗತ್ಯ ಕೆಲಸಗಳನ್ನು ಶ್ರಮದಾನದ ಮೂಲಕ ನೆರವೇರಿಸಿ ಅರ್ಥಪೂರ್ಣವಾಗಿ ಆಚರಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇದು ಸತತ ಎರಡನೆಯ ವರ್ಷದ ಶ್ರಮದಾನವಾಗಿದೆ.