
ಉಜಿರೆ: ಶ್ರೀ ಧ.ಮಂ.ಅ. ಸೆಕೆಂಡರಿ ಶಾಲೆಯಲ್ಲಿ ತುಳು ಸಂಸ್ಕೃತಿ ಕುರಿತ ಕಾರ್ಯಕ್ರಮ ‘ಆಟಿಡೊಂಜಿ ದಿನ’ ಆ.13ರಂದು ನಡೆಯಿತು. ಮುಖ್ಯ ಅತಿಥಿ, ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಧನ್ಯಕುಮಾರ್ ದೀಪ ಬೆಳಗಿ, ಹಿಂಗಾರ ಅರಳಿಸಿ, ಚೆನ್ನೆಮಣೆ ಆಡುವುದರ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿ, ಆಟಿ ತಿಂಗಳ ಮಹತ್ವ, ತಿಂಡಿ ತಿನಿಸು, ಆರೋಗ್ಯದ ಹಿನ್ನೆಲೆ ಇರುವ ಪದಾರ್ಥಗಳು ಹಾಗೂ ಆಟಿ ಅಮಾವಾಸ್ಯೆ ಬಗ್ಗೆ ತಿಳಿಸಿದರು.
ತುಳು ಭಾಷಾ ಶಿಕ್ಷಕಿ ತ್ರಿವೇಣಿ ಅವರು ಆಟಿ ತಿಂಗಳಿನಲ್ಲಿ ನಡೆಯುವ ದೈವಾರಾಧನೆ, ನಾಗಾರಾಧನೆ ಬಗ್ಗೆ ತಿಳಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯೋಪಾಧ್ಯಾಯ ಸುರೇಶ್ ಕೆ. ಹಿಂದಿನ ಕಾಲದ ಆಟಿ ತಿಂಗಳ ಕಷ್ಟದ ಜೀವನದ ಬಗ್ಗೆ ತಿಳಿಸಿದರು. ವಿದ್ಯಾರ್ಥಿಗಳು ತುಳು ಜಾನಪದ ನೃತ್ಯ, ಕವಿತೆ ಮುಂತಾದ ಮನೋರಂಜನೆ ಕಾರ್ಯಕ್ರಮ ನೀಡಿದರು.
ವಿದ್ಯಾರ್ಥಿಗಳಾದ ನಿಶ್ಮಿತ್ ಸ್ವಾಗತಿಸಿ, ನವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ರಕ್ಷಿತಾ ವಂದಿಸಿದರು.