ಬೆಳ್ತಂಗಡಿ: ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಸ್ಯಾನಿಟರಿ ನ್ಯಾಪ್ ಕಿನ್ ತ್ಯಾಜ್ಯಗಳನ್ನು, ಸ್ಯಾನಿಟರಿ ಡೈಪರ್ ಮತ್ತು ನ್ಯಾಪ್ ಕಿನ್ ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ನಿರ್ವಹಿಸುವ ಸಲುವಾಗಿ ಬೆಳ್ತಂಗಡಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಭವಾನಿಶಂಕರ್ ರವರ ಅಧ್ಯಕ್ಷತೆಯಲ್ಲಿ ಜೂ.6ರಂದು ಸಭೆಯನ್ನು ನಡೆಸಲಾಯಿತು.
ರಾಮ್ಕೀ ಎನರ್ಜಿ ಆಂಡ್ ಎನ್ವಿರಾನ್ಮೆಂಟ್ ಲಿಮಿಟೆಡ್ ನ ಪ್ರಶಾಂತ್ ನಾಯಕ್ ರವರು ಸ್ಯಾನಿಟರಿ ಡೈಪರ್ ಮತ್ತು ನ್ಯಾಪ್ಕಿನ್ ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ನಿರ್ವಹಿಸುವ ವಿಧಾನಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು.
ಪ್ರಥಮ ಹಂತವಾಗಿ ಮಡಂತ್ಯಾರು, ಮಾಲಾಡಿ, ಕುವೆಟ್ಟು, ಲಾಯಿಲ, ಉಜಿರೆ, ಧರ್ಮಸ್ಥಳ, ಚಾರ್ಮಾಡಿ, ನೆರಿಯ, ಕಳಿಯ ಮತ್ತು ತಣ್ಣೀರುಪಂತ ಗ್ರಾಮ ಪಂಚಾಯತಿಗಳು ರಾಮ್ಕೀ ಎನರ್ಜಿ ಆಂಡ್ ಎನ್ವಿರಾನ್ಮೆಂಟ್ ಲಿಮಿಟೆಡ್ನೊಂದಿಗೆ ಒಡಂಬಡಿಕೆ ಮಾಡಿಕೊಂಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ಯಾನಿಟರಿ ಡೈಪರ್ ಮತ್ತು ನ್ಯಾಪ್ಕಿನ್ ತ್ಯಾಜ್ಯಗಳನ್ನು ಸಂಗ್ರಹಿಸಲು ತೀರ್ಮಾನಿಸಲಾಯಿತು.
ಬೆಳ್ತಂಗಡಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯವರು ಮಡಂತ್ಯಾರು, ಮಾಲಾಡಿ, ಕುವೆಟ್ಟು, ಲಾಯಿಲ, ಉಜಿರೆ, ಧರ್ಮಸ್ಥಳ, ಚಾರ್ಮಾಡಿ, ನೆರಿಯ, ಕಳಿಯ ಮತ್ತು ತಣ್ಣೀರುಪಂತ ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಘನತ್ಯಾಜ್ಯ ನಿರ್ವಹಣೆ ವ್ಯವಸ್ಥೆಯ ಮೇಲ್ವಿಚಾರಣಾ ಸಿಬ್ಬಂದಿಗಳು, ಸಂಜೀವಿನಿ ಒಕ್ಕೂಟದ ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.