ಬೆಳ್ತಂಗಡಿ: ಅತ್ಯಂತ ಗ್ರಾಮೀಣ ಪ್ರದೇಶವಾದ ನೇಲ್ಯಡ್ಕದಲ್ಲಿರುವ ಸ. ಪ್ರೌ. ಶಾಲೆಗೆ ಮಂಗಳೂರಿನ ಎಂ.ಸಿ.ಸಿ ಬ್ಯಾಂಕ್ ನವರು 2 ವಾಲಿಬಾಲ್ ಹಾಗೂ 2 ತ್ರೋಬಾಲ್ ಪೋಲ್ ಗಳನ್ನು ಕೊಡುಗೆಯಾಗಿ ನೀಡಿದರು.
ಬೆಳ್ತಂಗಡಿ ಶಾಖೆಯ ಬ್ಯಾಂಕಿನ ಮ್ಯಾನೇಜರ್ ಶರುಣ್ ಪಿಂಟೋ ಹಾಗೂ ಸಿಬ್ಬಂದಿ ರಾಜೇಶ್ ನೇಲ್ಯಡ್ಕಕ್ಕೆ ಆಗಮಿಸಿ ಈ ಕೊಡುಗೆಯನ್ನು ಸಂಸ್ಥೆಗೆ ಹಸ್ತಾಂತರಿಸಿದರು. ಗ್ರಾಮೀಣ ಪ್ರದೇಶದಲ್ಲಿರುವ ಕನ್ನಡ ಮಾಧ್ಯಮ ಸರಕಾರಿ ಪ್ರೌಢ ಶಾಲೆಗೆ ಶಾಶ್ವತ ಕೊಡುಗೆಯನ್ನು ನೀಡಿದ ಎಂ.ಸಿ.ಸಿ ಬ್ಯಾಂಕ್ ಅಧ್ಯಕ್ಷರಿಗೆ ಹಾಗೂ ಆಡಳಿತ ಮಂಡಳಿಯ ಎಲ್ಲಾ ಸದಸ್ಯರಿಗೆ ಮುಖ್ಯೋಪಾಧ್ಯಾಯ ರಾಜೇಂದ್ರ ಕೃಷ್ಣ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು.
ಎಸ್. ಡಿ. ಎಂ. ಸಿ ಯ ಯಶವಂತ ಗೌಡ ಅಧ್ಯಕ್ಷತೆ ವಹಿಸಿದ್ದರು. ಈ ಸಮಾರಂಭದಲ್ಲಿ ಸಂಸ್ಥೆಯ ಎಲ್ಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಅರವಿಂದ ಗೋಖಲೆ ಸ್ವಾಗತಿಸಿದರು. ಕಾರ್ಯಕ್ರಮವನ್ನು ದೈಹಿಕ ಶಿಕ್ಷಣ ಶಿಕ್ಷಕ ವಿಜಯಕುಮಾರ್ ನಿರೂಪಿಸಿ, ಉದಯಕುಮಾರ್ ವಂದಿಸಿದರು.