ಉಜಿರೆಯಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ- ಸ್ವಚ್ಛ ಪರಿಸರ ಸ್ವಸ್ಥ ಜೀವನಕ್ಕೆ ನಾಂದಿ: ಪ್ರಮೋದ್ ಕುಮಾರ್

0

ಉಜಿರೆ: ಗಾಂಧೀಜಿ ಮತ್ತು ಶಾಸ್ತ್ರೀಜಿ ಅವರು ಸಾತ್ವಿಕ ಬದುಕು ಹಾಗೂ ಆದರ್ಶಗಳನ್ನು ಮೈಗೂಡಿಸಿಕೊಂಡು ನಾಯಕರಾದವರು. ಅಂತಹ ಮಹಾನ್ ವ್ಯಕ್ತಿಗಳ ಜಯಂತಿಯಂದು ಸ್ವಚ್ಛತಾ ಜಾಥಾ ಹಾಗೂ ಅಭಿಯಾನ ಸ್ತುತ್ಯರ್ಹ. ಪ್ರತಿಯೊಬ್ಬರಲ್ಲೂ ಸ್ವಚ್ಛತೆಯ ಅರಿವು ಹಾಗೂ ಜಾಗೃತಿ ಅಗತ್ಯವಾಗಿದೆ. ನಾವು ಬದಲಾದರೆ ಸಮಾಜ ಹಾಗೂ ದೇಶವೇ ಬದಲಾಗುತ್ತದೆ. ಒಟ್ಟಾರೆ ಸ್ವಚ್ಛ ಪರಿಸರ ಸ್ವಸ್ಥ ಜೀವನಕ್ಕೆ ನಾಂದಿ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರಮೋದ್ ಕುಮಾರ್ ಬಿ. ಹೇಳಿದರು.

ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ , ರೋವರ್ಸ್ ಹಾಗೂ ರೇಂಜರ್ಸ್ ಮತ್ತು ಜೂನಿಯರ್ ರೆಡ್ ಕ್ರಾಸ್ ಗಳ ಸಹಯೋಗದಲ್ಲಿ ಗಾಂಧೀ ಹಾಗೂ ಶಾಸ್ತ್ರೀ ಜಯಂತಿ ಅಂಗವಾಗಿ ನಡೆದ ಸ್ವಚ್ಛತಾ ಪ್ರತಿಜ್ಞೆ ಹಾಗೂ ಸ್ವಚ್ಛತಾ ಜಾಥಾ ಹಾಗೂ ಅಭಿಯಾನ ಉದ್ಘಾಟಿಸಿ ಮಾತನಾಡಿದರು.

ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಲಾಯಿತು. ವಿದ್ಯಾರ್ಥಿಗಳಿಗೆ ಸ್ವಚ್ಛತಾ ಪ್ರತಿಜ್ಞೆ ಬೋಧಿಸಲಾಯಿತು. ಎಲ್ಲ ಸಂಯೋಜಕ ಘಟಕಗಳ ವಿದ್ಯಾರ್ಥಿ ಸ್ವಯಂ ಸೇವಕರು ಉಜಿರೆಯ ಪರಿಸರವನ್ನು ಜಾಥಾ ಹಾಗೂ ಅಭಿಯಾನ ನಡೆಸಿ ಸ್ವಚ್ಛತಾ ಕಾರ್ಯ ಮಾಡಿದರು.

ರಾ. ಸೇ. ಯೋಜನೆಯ ಸಹ ಯೋಜನಾಧಿಕಾರಿ ಪದ್ಮಶ್ರೀ ರಕ್ಷಿತ್ , ರೋವರ್ಸ್ ಹಾಗೂ ರೇಂಜರ್ಸ್ ಅಧಿಕಾರಿಗಳಾದ ಲಕ್ಷ್ಮೀಶ ಭಟ್ ಹಾಗೂ ಅಂಕಿತಾ, ರೆಡ್ ಕ್ರಾಸ್ ಸಂಯೋಜಕರಾದ ಅರ್ಚನಾ ಹಾಗೂ ಕವನಶ್ರೀ ಉಪಸ್ಥಿತರಿದ್ದರು.

ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here