ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಯಶಸ್ವಿ ಉಚಿತ ನೇತ್ರ ತಪಾಸಣೆ ಶಿಬಿರ

0

ಮಡಂತ್ಯಾರು: ಮಂಗಳೂರು ಕೆಮಿಕಲ್ಸ್ ಮತ್ತು ಫರ್ಟಿಲೈಸರ್ಸ್ (MCF) ಲಿಮಿಟೆಡ್ ಮಂಗಳೂರು ಮತ್ತು ಜಸ್ಟೀಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ ಹಾಗೂ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘ, ಇವರ ಜಂಟಿ‌ ಆಶ್ರಯದಲ್ಲಿ, ಸೆಪ್ಟೆಂಬರ್‌ 01ರಂದು ಕಾಲೇಜು ಆವರಣದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಏರ್ಪಡಿಸಿಲಾಗಿತ್ತು. ಶಿಬಿರವು ಅಭೂತಪೂರ್ವ ಪ್ರತಿಕ್ರಿಯೆಯನ್ನು ಕಂಡಿತು. 340 ವ್ಯಕ್ತಿಗಳು ನೋಂದಾಯಿಸಿಕೊಂಡು ನೇತ್ರ ತಪಾಸಣೆಗೆ ಒಳಗಾಗಿ, ಅವರಲ್ಲಿ 199 ಮಂದಿಗೆ ಉಚಿತ ಕನ್ನಡಕ ಮುಂಬರುವ ದಿನಗಳಲ್ಲಿ ವಿತರಿಸಿ, 29 ಮಂದಿಯನ್ನು ಹೆಚ್ಚಿನ ವಿಶೇಷ ಚಿಕಿತ್ಸೆಗಾಗಿ ಜಸ್ಟೀಸ್ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ಶಿಫಾರಸು ಮಾಡಲಾಗಿದೆ.

ಶಿಬಿರವನ್ನು ಬೆಳ್ತಂಗಡಿಯ ಮಾನ್ಯ ಶಾಸಕರು ಹಾಗೂ ಸೇಕ್ರೆಡ್ ಹಾರ್ಟ್ ಕಾಲೇಜಿನ ಹೆಮ್ಮೆಯ ಹಿರಿಯ ವಿದ್ಯಾರ್ಥಿ ಹರೀಶ್ ಪೂಂಜ ಅವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದವರು ಎಸ್. ಗಿರೀಶ್, MCF Ltd. ನ ಮುಖ್ಯ ಉತ್ಪಾದನಾ ಅಧಿಕಾರಿ, ಅದೇರೀತಿ ವಂದನೀಯ ಡಾ|ಸ್ಟ್ಯಾನಿ ಗೋವಿಯಸ್, ಸೇಕ್ರೆಡ್ ಹಾರ್ಟ್ ವಿದ್ಯಾ ಸಂಸ್ಥೆಗಳ ಸಂಚಾಲಕರು, ಪ್ರೊ.ಅಲೆಕ್ಸ್ ಐವನ್ ಸಿಕ್ವೇರಾ, ಸೇಕ್ರೆಡ್ ಹಾರ್ಟ್ ಕಾಲೇಜಿನ ಪ್ರಾಂಶುಪಾಲರು ಮತ್ತು ವಿಲ್ಸನ್ ರೂಪೇಶ್ ಮೊರಾಸ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರು, ಸೇಕ್ರೆಡ್ ಹಾರ್ಟ್ ಕಾಲೇಜು ಉದ್ಘಾಟನಾ ಸಮಾರಂಭದಲ್ಲಿ ಗಣ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಉದ್ಘಾಟನಾ ಭಾಷಣದಲ್ಲಿ ಶಾಸಕ ಹರೀಶ್ ಪೂಂಜಾರವರು ಕಾಲೇಜಿನಲ್ಲಿ ತಮ್ಮ ಅಚ್ಚುಮೆಚ್ಚಿನ ನೆನಪುಗಳನ್ನು ಪ್ರೀತಿಯಿಂದ ನೆನಪಿಸಿಕೊಂಡರು ಮತ್ತು “ಸಮಾಜಕ್ಕೆ ಬೆಳಕನ್ನು” ತರುವ ಉದ್ದೇಶದಿಂದ ಆಯೋಜಿಸಿದ ಈ ಕಾರ್ಯಕ್ಕಾಗಿ ಸಂಘಟಕರನ್ನು ಶ್ಲಾಘಿಸಿದರು. ತನಗೆ ಉನ್ನತ ನೀತಿ ಶಿಕ್ಷಣ ನೀಡಿ ನಾಯಕತ್ವ ಮೌಲ್ಯಗಳನ್ನು ಭೋದಿಸಿದ ಕಾಲೇಜಿನ ಎಲ್ಲಾ ಪ್ರಾಧ್ಯಾಪಕ ವೃಂದದವರಿಗೆ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.

ವಂ.ಡಾ.ಸ್ಟ್ಯಾನಿ ಗೋವಿಯಸ್ ಇಂತಹ ಉದಾತ್ತ ಉದ್ದೇಶದಿಂದ ಮತ್ತು ಸಮರ್ಪಣಾ ಭಾವದಿಂದ ಈ ಕಾರ್ಯಕ್ರಮವನ್ನು ಆಯೋಜಿಸಿದ ಹಿರಿಯ ವಿದ್ಯಾರ್ಥಿ ಸಂಘಕ್ಕೆ ಪ್ರಾಮಾಣಿಕ ಧನ್ಯವಾದಗಳನ್ನು ಅರ್ಪಿಸಿದರು.ನಾವು ನೆಲೆ ನಿಂತ ಸಮುದಾಯಕ್ಕೆ ಮರಳಿ ನೀಡುವ ಮಹತ್ವವನ್ನು ಒತ್ತಿ ಹೇಳಿದರು ಮತ್ತು ಈ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿ ಸಂಘದ ಪ್ರಯತ್ನಗಳನ್ನು ಶ್ಲಾಘಿಸಿದರು.

ಪ್ರಾಂಶುಪಾಲ ಪ್ರೊ.ಅಲೆಕ್ಸ್ ಐವನ್ ಸಿಕ್ವೇರಾ ರವರು, ಈ‌ ಶಿಬಿರವನ್ನು ಸಾಕಾರಗೊಳಿಸಲು ಪಟ್ಟ ಕಠಿಣ ಪರಿಶ್ರಮವನ್ನು ನೆನಪಿಸಿ, ಇದನ್ನು ಆಯೋಜಿಸಲು ಶ್ರಮಿಸಿದ ಎಲ್ಲರಿಗೂ ವಂದಿಸಿದರು.‌ಎಸ್.ಗಿರೀಶ್ ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಶಿಬಿರಕ್ಕೆ ಆಗಮಿಸಿದ ಜನಸ್ತೋಮ ಕಂಡು ಹರ್ಷ ವ್ಯಕ್ತಪಡಿಸಿದರು. ಸಂಘಟಕರು ಮಾಡಿದ ಅಚ್ಚುಕಟ್ಟಾದ ವ್ಯವಸ್ಥೆಗಳನ್ನು ಶ್ಲಾಘಿಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮತ್ತು ಎಂಸಿಎಫ್ ಲಿಮಿಟೆಡ್ ಉದ್ಯೋಗಿ ವಿಲ್ಸನ್ ರೂಪೇಶ್ ಮೊರಾಸ್ ಅವರ ಪ್ರಯತ್ನವನ್ನು ವಿಶೇಷವಾಗಿ ಶ್ಲಾಘಿಸಿದರು. ಅದೇರೀತಿ MCF ನ ಕಣ್ಣಿನ ಆರೈಕೆ ಯೋಜನೆಗಳಿಗೆ ನಿರಂತರ  ಬೆಂಬಲ ನೀಡುವ, ಜಸ್ಟಿಸ್ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಡಾ.ಹೃಷಿಕೇಶ್ ಅಮೀನ್ ಅವರ ನೇತೃತ್ವದ ವೈದ್ಯಕೀಯ ತಂಡಕ್ಕೆ ವಿಶೇಷವಾಗಿ ಅಭಿವಂದಿಸಿದರು.

ಎಂ.ಸಿ.ಎಫ್ ಆಡಳಿತ ತಂಡದ ಸದಸ್ಯರಾದ ಡಾ.ಯೋಗೀಶ್ ರವರ ಆತ್ಮೀಯ ಸ್ವಾಗತ ಹಾಗೂ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ಆರಂಭವಾಯಿತು.ಧನ್ಯವಾದವನ್ನು ಪ್ರಸ್ತಾಪಿಸಿದ ವಿಲ್ಸನ್ ರೂಪೇಶ್ ಮೊರಾಸ್ ರವರು ಭಾಗವಹಿಸಿದವರಿಗೆ, ಅತಿಥಿಗಳಿಗೆ ಮತ್ತು ಸ್ವಯಂಸೇವಕರಿಗೆ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮವನ್ನು ನೆಲ್ಸನ್ ಮೋನಿಸ್ ಮತ್ತು ರೋಸ್ ಪ್ರಿಯಾ ಪಿಂಟೋ ಅವರು ನಿರೂಪಿಸಿದರು.

ಒಟ್ಟಿನಲ್ಲಿ ಸೇವೆಯ ಮನೋಭಾವದಿಂದ ಹಮ್ಮಿಕೊಂಡ ಈ ಯೋಜನೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿತು.

LEAVE A REPLY

Please enter your comment!
Please enter your name here