ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಸೌಖ್ಯವನ ಪರೀಕದಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಸೌಖ್ಯವನ ಪರೀಕ ಇಲ್ಲಿ ಭಾರತ ದೇಶದ 78ನೇ ಹಾಗೂ ಸೌಖ್ಯವನ ಸಂಸ್ಥೆಯ 19ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಗಣ್ಯರ ಉಪಸ್ಥಿತಿಯಲ್ಲಿ ವಿಜೃಂಭನೆಯಿಂದ ಆಚರಿಸಲಾಯಿತು.

ಭಾರತೀಯ ಸೇನೆಯಲ್ಲಿ 35 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಲೆಫ್ಟಿನೆಂಟ್ ಕರ್ನಲ್ ಶ್ರೀ ಜಗದೀಶ್ ಹೆಚ್ ರವರು ಧ್ವಜರೋಹಣವನ್ನು ಮಾಡಿದರು. ರಾಷ್ಟ್ರ ಗೀತೆ ಹಾಗೂ ವಂದೇ ಮಾತರಂ ಹಾಡಿನ ಮೂಲಕ ರಾಷ್ಟ್ರ ಧ್ವಜಕ್ಕೆ ಗೌರವವನ್ನು ಸಲ್ಲಿಸಲಾಯಿತು. ನಂತರ ಆಸ್ಪತ್ರೆಯ ಕ್ಷೇಮ ಹಾಲ್‌ನಲ್ಲಿ ಜರುಗಿದ ಸಭಾ ಕಾರ್ಯಕ್ರಮದಲ್ಲಿ ಶಾಂತಿವನ ಟ್ರಸ್ಟ್ ಕಾರ್ಯದರ್ಶಿಗಳಾದ ಬಿ. ಸೀತಾರಾಮ ತೋಳ್ಪಾಡಿತ್ತಾಯ ರವರು ಅಧ್ಯಕ್ಷತೆಯನ್ನು ವಹಿಸಿದ್ದರು.

ಧ್ವಜ ವಂದನೆಯನ್ನು ಮಾಡಿದ ಲೆಫ್ಟಿನೆಂಟ್ ಕರ್ನಲ್ ಶ್ರೀ ಜಗದೀಶ್ ಹೆಚ್ ರವರು ತಮ್ಮ ಶುಭ ನುಡಿಗಳನ್ನಾಡುತ್ತಾ ದೇಶ ಪ್ರೇಮದ ಸಂದರ್ಭದಲ್ಲಿ ಭಾರತೀಯರಾದ ನಾವು ಒಗ್ಗಟ್ಟನ್ನು ಪ್ರದರ್ಶಿಸುವಲ್ಲಿ ಏಕಾಗ್ರತೆ ಮತ್ತು ಸ್ಥಿರ ಮನಸ್ಸಿನವರಾಗಿರಬೇಕೆಂದು ಹೇಳುತ್ತಾ ತನ್ನ ೩೫ ವರ್ಷಗಳ ಸೇನೆಯಲ್ಲಿ ಅನುಭವಿಸಿದ ಮತ್ತು ಕಠಿಣ ಪರಿಸ್ಥಿತಿಗಳಲ್ಲಿ ಕರ್ತವ್ಯ ನಿರ್ವಹಿಸಿದ ಬಗ್ಗೆ ಮನಮುಟ್ಟುವಂತೆ ತಿಳಿಸಿದರು.

ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಅನುಭವಿಸಿದ ನೋವು ಮತ್ತು ಈ ಯುದ್ಧವು ಪ್ರಪಂಚದಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯಲು ಭಾರತದ ಸೇನೆಯು ಅಪಾರ ಶ್ರಮ ವಹಿಸಿ ಜಯಿಸಿರುವುದು ಪ್ರಮುಖ ಕಾರಣ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಇನ್ನೋರ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಹಿರಿಯಡಕದ ಶ್ರೀ ಸದಾನಂದ ನಾಯಕ್ ರವರು ಉಪಸ್ಥಿತರಿದ್ದು ಸಭಾ ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿದರು.

ಹಿರಿಯ ಸಮಾಜ ಸೇವಕರಾದ ಇವರು ತಮ್ಮ ನೇತ್ರವನ್ನು ತನ್ನ ಕಾಲಾ ನಂತರ ದಾನ ಮಾಡುವುದಾಗಿ ವಾಗ್ಧಾನ ಮಾಡಿರುತ್ತಾರೆ. ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಸೀತಾರಾಮ ತೋಳ್ಪಾಡಿತ್ತಾಯರವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಸ್ವಾತಂತ್ರ್ಯ ದಿನದ ಮಹತ್ವವನ್ನು ತಿಳಿಸುತ್ತಾ ಧ್ವಜವಂದನೆ ಮಾಡಿದ ಜಗದೀಶ ರವರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿ ಶುಭ ಹಾರೈಸಿದರು.

ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾ|| ಗೋಪಾಲ್ ಪೂಜಾರಿಯವರು ಉಪಸ್ಥಿತರಿದ್ದು ಪ್ರಸ್ತುತ ದೇಶದ ವಿದ್ಯಮಾನಗಳಲ್ಲಿ ಅಭಿವ್ಯಕ್ತ ಸ್ವಾತಂತ್ರ್ಯದ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದರು. ಸಮಾರಂಭದಲ್ಲಿ ಜಗದೀಶ್ ಹೆಚ್ ಮತ್ತು ಸದಾನಂದ್ ನಾಯಕ್ ರವರನ್ನು ಸಂಸ್ಥೆಯ ಪರವಾಗಿ ಗೌರವಿಸಲಾಯಿತು.ಸಮಾರಂಭದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳಿಂದ ದೇಶ ಭಕ್ತಿಯ ಹಾಡುಗಳು ಹಾಗೂ ನೃತ್ಯಗಳು ಪ್ರದರ್ಶನಗೊಂಡವು. ಕಿಕ್ಕಿರಿದು ನೆರೆದಿದ್ದ ಕಾರ್ಯಕ್ರಮದಲ್ಲಿ ಕಿರಿಯ ವೈದ್ಯರ ಹಾಗೂ ಆಡಳಿತ ವಿಭಾಗದವರ ದೇಶಭಕ್ತಿಯ ನೃತ್ಯವು ಎಲ್ಲರ ಮನಸೂರೆಗೊಂಡಿತು. ಡಾ|| ಶೋಭಿತ್ ಶೆಟ್ಟಿಯವರು ಉಪಸ್ಥಿತರಿದ್ದು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಆಸ್ಪತ್ರೆಯ ವ್ಯವಸ್ಥಾಪಕ ಪ್ರವೀಣ್ ಕುಮಾರ್ ರವರು ಸ್ವಾಗತಿಸಿ ಪ್ರಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ|| ಪೂಜಾ ಜಿ ಯವರು ವಂದಾನಾರ್ಪಣೆಗೈದರು. ಕೊನೆಯಲ್ಲಿ ಸ್ವಸ್ಥಿ ಮಂತ್ರದೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.

LEAVE A REPLY

Please enter your comment!
Please enter your name here