ವೇಣೂರು: ಕರಿಮಣೇಲು ಗಾಂಧಿನಗರದ‌ಲ್ಲಿ ಎರಡು ಮನೆಗಳಿಗೆ ಸಿಡಿಲು ಬಡಿತ

0

ಬೆಳ್ತಂಗಡಿ: ವೇಣೂರಿನ ಕರಿಮಣೇಲು ಸಮೀಪದ ಗಾಂಧಿನಗರದ‌ ಎರಡು ಮನೆಗಳಿಗೆ ಆ.14ರಂದು ಸಂಜೆ ಸಿಡಿಲು ಬಡಿದು ಭಾರೀ ನಷ್ಟ ಉಂಟಾಗಿದೆ.

ಇಸುಬು ಮತ್ತು ಅಬ್ದುಲ್ ರಹಿಮಾನ್ ಎಂಬವರ ಮನೆಗೆ ಸಂಜೆಯ ವೇಳೆ ಸಿಡಿಲು‌ ಬಡಿದ ಪರಿಣಾಮ ಮನೆಯ ವಿದ್ಯುತ್ ಉಪಕರಣಗಳೆಲ್ಲವೂ ಸುಟ್ಟು ಕರಕಲಾಗಿದೆ. ಅಲ್ಲದೆ ಹಿಂಭಾಗದ ಶೀಟಿನ‌ ಮೇಲ್ಛಾವಣಿ ಕೂಡ ಪುಡಿಪುಡಿಯಾಗಿದ್ದು ಅಪಾರ ನಷ್ಟ ಸಂಭವಿಸಿದೆ. ಅಬ್ದುಲ್ ರಹಿಮಾನ್ ಅವರ ಮನೆಯವರು ಘಟನೆಯ ವೇಳೆ ಕುಟುಂಬ ಸಮೇತ ಮೂಡಬಿದ್ರೆಗೆ ತೆರಳಿದ್ದರಿಂದ ಜೀವಾಪಾಯದಿಂದ ಪಾರಾಗಿದ್ದಾರೆ.

ಇಸುಬು ಅವರ ಮನೆಯಲ್ಲಿ ಮಹಿಳೆಯರು ಮತ್ತು ಮಕ್ಕಳಿದ್ದರಾದರೂ ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಸಿಡಿಲಿನ ಆಘಾತಕ್ಕೆ ಮನೆಯ ಕಿಟಕಿ ಬಾಗಿಲುಗಳು, ಗಾಜು, ಮೇಲ್ಛಾವಣಿಯ ಶೀಟು, ಹೆಂಚುಗಳಿಗೆ ಹಾನಿಯಾಗಿದೆ.ಗೋಡೆ ಕೂಡ ಬಿರುಕು ಬಿಟ್ಟಿದೆ. ಸದ್ರಿ ಮನೆಯಲ್ಲಿ ವಾಸಿಸಲು ಭಯಪಡುವಂತಾಗಿದೆ.

ಅಲ್ಲದೆ ಇವರ ಪಕ್ಕದ ಮನೆಯವರ ಇನ್ವರ್ಟರ್ ಗಳು, ವಿದ್ಯುತ್ ಉಪಕರಣಗಳು ಕೆಟ್ಟು ಹೋಗಿದೆ. ವಿಚಾರ ತಿಳಿದ ವೇಣೂರು ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಸಂಬಂಧಪಟ್ಟ ಇಲಾಖೆಯಿಂದ ಪರಿಹಾರದ ಭರವಸೆ ನೀಡಿದ್ದಾರೆ.

LEAVE A REPLY

Please enter your comment!
Please enter your name here