ಉಜಿರೆ: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು, ದಕ್ಷಿಣ ಕನ್ನಡ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಬೆಳ್ತಂಗಡಿ ತಾಲೂಕು ಸ್ವೀಪ್ ಸಮಿತಿಯ ಸಹಯೋಗದೊಂದಿಗೆ ಎನ್.ಎಸ್.ಎಸ್ ಸ್ವಯಂಸೇವಕರು ಚುನಾವಣಾ ಜಾಗೃತಿ ಸಪ್ತಾಹದ ಅಂಗವಾಗಿ ಬೆಳ್ತಂಗಡಿ ತಾಲ್ಲೂಕಿನ ಹಲವೆಡೆ ಬೀದಿ ನಾಟಕವನ್ನು ಪ್ರದರ್ಶಿಸಿದರು.
ಏ.19 ರಿಂದ 25 ರವರೆಗೆ ಏಳು ದಿನಗಳ ಕಾಲ ಉಜಿರೆ ಎಸ್.ಡಿ.ಎಂ ಸ್ನಾತಕೋತರ ಪದವಿ ಕಾಲೇಜು, ನಾವರ ಬಸ್ ನಿಲ್ದಾಣ, ಸಂತೆಕಟ್ಟೆ ಬಸ್ ನಿಲ್ದಾಣ, ಬೆಳ್ತಂಗಡಿ ಬಸ್ ನಿಲ್ದಾಣ, ಶ್ರೀ ಧ.ಮಂ.ಇಂಜಿನಿಯರ್ ಕಾಲೇಜು ಉಜಿರೆ, ಉಜಿರೆ ಬಸ್ ನಿಲ್ದಾಣ, ಶ್ರೀ ಧ.ಮಂ. (ಸ್ವಾಯತ್ತ) ಕಾಲೇಜು ಉಜಿರೆ, ಇಲ್ಲಿ “ಮತದಾನ ನಮ್ಮ ಹಕ್ಕು – ನಮ್ಮ ನಡೆ ಮತಗಟ್ಟೆಯ ಕಡೆ” ಎಂಬ ಬೀದಿ ನಾಟಕವನ್ನು ಪ್ರಸ್ತುತ ಪಡಿಸಲಾಯಿತು.
ಈ ಮೂಲಕ ಮತದಾನಕ್ಕೆ ಸಜ್ಜಾಗಿದ್ದ ಯುವ ಮನಸುಗಳಲ್ಲಿ ಹಾಗೂ ಪ್ರಜೆಗಳಲ್ಲಿ ಅರಿವನ್ನು ಮೂಡಿಸಿ ತಿಳುವಳಿಕೆಯ ಬೀಜವನ್ನು ಬಿತ್ತಲಾಯಿತು.
ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನ ಮಾನ್ಯ ತಹಶೀಲ್ದಾರ್ ಪೃಥ್ವಿ ಸಾನಿಕಂ, ಸಹಾಯಕ ಚುನಾವಣಾಧಿಕಾರಿ ಕೆಂಪೇಗೌಡ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ವೈಜಣ್ಣ, ದ.ಕ ಜಿಲ್ಲಾ ಸ್ವೀಪ್ ಸಮಿತಿಯ ಮಾಸ್ಟರ್ ಟ್ರೈನರ್ ಯೋಗೇಶ ಹೆಚ್.ಆರ್, ತಾ.ಪಂ.ಅಧೀಕ್ಷಕರಾದ ಡಿ.ಪ್ರಶಾಂತ್ , TLMT ದಿವ್ಯಾ ಕುಮಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ್, ತಾಲೂಕು ವ್ಯವಸ್ಥಾಪಕರಾದ ಪ್ರಶಾಂತ್ ಬಳಂಜ, ತಾಲೂಕು ಸಹಾಯಕ ಲೆಕ್ಕಾಧಿಕಾರಿ ಗಣೇಶ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಹೇಮಚಂದ್ರ, ರಾ.ಸೇ.ಯೋ. ಘಟಕಗಳ ಯೋಜನಾಧಿಕಾರಿಗಳಾದ ಡಾ. ಮಹೇಶ್ ಕುಮಾರ್ ಶೆಟ್ಟಿ .ಹೆಚ್, ಪ್ರೊ.ದೀಪಾ ಆರ್ ಪಿ, ಸ್ವಯಂಸೇವಕರು ಹಾಗೂ ಮುಂತಾದವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮಕ್ಕೆ ತಾಲೂಕು ಆಡಳಿತ ವಿಭಾಗ ಮತ್ತು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.