


ಬೆಳ್ತಂಗಡಿ: ಗ್ರಾಮ ಸಭೆಯಲ್ಲಿ ವೇದಿಕೆಯಲ್ಲಿ ಕುಳಿತುಕೊಂಡಿದ್ದ ಸದಸ್ಯೆಯೋರ್ವರು ದಿಢೀರ್ ಕುಸಿದು ಬಿದ್ದು ಪ್ರಜ್ಞಾಹೀನ ಸ್ಥಿತಿಗೆ ಒಳಪಟ್ಟ ಘಟನೆ ನ.15ರಂದು ತಾಲೂಕಿನ ಇಳಂತಿಲ ಗ್ರಾಮ ಸಭೆಯಲ್ಲಿ ನಡೆದಿದೆ. ಇಳಂತಿಲ ಗ್ರಾ.ಪಂ.ನ ಸಭಾಂಗಣದಲ್ಲಿ ಗ್ರಾ.ಪಂ. ಅಧ್ಯಕ್ಷೆ ಸವಿತಾ ಎಚ್. ಅವರ ಅಧ್ಯಕ್ಷತೆಯಲ್ಲಿ, ಚರ್ಚಾ ನಿಯಂತ್ರಣಾಧಿಕಾರಿಯಾಗಿದ್ದ ಪಂಚಾಯತ್ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರ ಜನಾರ್ದನ ಕೆ.ಬಿ.ಯವರ ಉಪಸ್ಥಿತಿಯಲ್ಲಿ ನ.15ರಂದು ಗ್ರಾಮ ಸಭೆ ನಡೆಯುತ್ತಿತ್ತು. ಪಿಡಿಒ ಶ್ರವಣ್ ಕುಮಾರ್ ಲೆಕ್ಕಪತ್ರ ಹಾಗೂ ವರದಿಗೆ ಮಂಜೂರಾತಿ ಪಡೆದುಕೊಂಡ ಬಳಿಕ ಇಲಾಖಾ ಮಾಹಿತಿ ವೇಳೆ ಆರೋಗ್ಯಾಧಿಕಾರಿಗಳು ಮಾಹಿತಿ ನೀಡುತ್ತಿದ್ದಂತೆ ಗ್ರಾ.ಪಂ. ಸದಸ್ಯೆ ಕುಸುಮಾ ಎಂಬವರು ಕುಳಿತ್ತಲ್ಲೇ ಏಕಾಏಕಿ ಕುಸಿದು ಬಿದ್ದು, ಪ್ರಜ್ಞಾಹೀನ ಸ್ಥಿತಿ ತಲುಪಿದರು.


ಇದನ್ನು ಗಮನಿಸಿದ ವೈದ್ಯಾಧಿಕಾರಿಗಳ ಸಹಿತ ಆಶಾ ಕಾರ್ಯಕರ್ತೆಯರು, ಗ್ರಾ.ಪಂ. ಸದಸ್ಯರು ಅವರ ಸಹಾಯಕ್ಕೆ ಧಾವಿಸಿದರು. ಹಿರಿಯ ಸದಸ್ಯ ಇಸುಬು ಪೆದಮಲೆಯವರು ಆಂಬುಲೆನ್ಸ್ ಸಂಪರ್ಕಿಸಿ ಅವರನ್ನು ತಕ್ಷಣಕ್ಕೆ ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಸಭೆಯಲ್ಲಿ ಸದಸ್ಯರಾದ ಚಂದ್ರಿಕಾ ಭಟ್, ಉಷಾ, ಜಾನಕಿ, ನುಸ್ರತ್, ರಮೇಶ, ಸಿದ್ದೀಕ್ ಹಾಗೂ ಕಾರ್ಯದರ್ಶಿ ವಿಜಯ, ಸಿಬ್ಬಂದಿ ಸತೀಶ್ ಉಪಸ್ಥಿತರಿದ್ದರು.









