ಉಜಿರೆ : ಕರ್ನಾಟಕದ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಮುಖಾಂತರ ಇತ್ತೀಚೆಗೆ ನಡೆದ ಭರತನಾಟ್ಯದ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ಕುಮಾರಿ ದೀಕ್ಷಾ ಬಿ.ಎಸ್. ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
2025ನೇ ಜೂನ್ ತಿಂಗಳಲ್ಲಿ ವಿಶ್ವವಿದ್ಯಾನಿಲಯವು ಸಂಗೀತ ನೃತ್ಯ ಮತ್ತು ತಾಳ ವಾದ್ಯಗಳ ವಿವಿಧ ಹಂತಗಳ ಪರೀಕ್ಷೆಗಳನ್ನು ನಡೆಸಿತ್ತು. ಇವುಗಳಲ್ಲಿ ಭರತನಾಟ್ಯದ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ಉಜಿರೆಯ ಕುಮಾರಿ ದೀಕ್ಷಾ ಬಿ.ಎಸ್. ಲಿಖಿತ ಮತ್ತು ಮೌಖಿಕ ಎರಡು ವಿಧದ ಪರೀಕ್ಷೆಗಳಲ್ಲಿಯೂ ಅತ್ಯುತ್ತಮ ಅಂಕಗಳೊಂದಿಗೆ ವಿಶಿಷ್ಟ ಸಾಧನೆಗೆ ಭಾಜನರಾಗಿದ್ದಾರೆ. ಇವರು ಕಳೆದ ಹದಿನೈದು ವರ್ಷಗಳಿಂದ ಭರತನಾಟ್ಯ ಗುರುಗಳಾದ ವಿದುಷಿ ಸ್ವಾತಿ ಕಿರಣ್ ಮತ್ತು ವಿದುಷಿ ಪೃಥ್ವಿ ಕಿರಣ್ ಅವರ ಮಾರ್ಗದರ್ಶನದಲ್ಲಿ ಭರತನಾಟ್ಯ ಕಲಿಯುತ್ತಿದ್ದಾರೆ.
ಹಿಂದೆಯೂ ಭರತನಾಟ್ಯದ ಜೂನಿಯರ್, ಸೀನಿಯರ್, ಮತ್ತು ವಿದ್ವತ್ ಪೂರ್ವ ಪರೀಕ್ಷೆಗಳಲ್ಲಿಯೂ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದ ದೀಕ್ಷಾ ಬಿ.ಎಸ್. ಪ್ರಸ್ತುತ ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ (Regional Institute of Education) ಎಂ.ಎಸ್.ಸಿ.ಡ್ ಎಂಬ ಅಧ್ಯಯನವನ್ನು ಮಾಡುತ್ತಿದ್ದಾರೆ. ಅವರು ಉಜಿರೆಯ ಎಸ್ಡಿಎಂ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಡಾ ಶ್ರೀಧರ ಭಟ್ ಮತ್ತು ಸರಕಾರಿ ಪ್ರೌಢಶಾಲೆ ಹಳೆಪೇಟೆ, ಉಜಿರೆಯ ಗಣಿತ ಶಿಕ್ಷಕಿ ವೀಣಾ ಶ್ಯಾನಭಾಗ್ ದಂಪತಿಯ ಸುಪುತ್ರಿ.