ಬೆಳ್ತಂಗಡಿ: ಸಾಹಿತ್ಯಾಸಕ್ತಿಯನ್ನು ರೂಢಿಸಿಕೊಳ್ಳುವುದರಿಂದ ಉತ್ತಮ ಬದುಕಿನೊಂದಿಗೆ ನೆಮ್ಮದಿ, ಗೌರವ, ಪ್ರಶಸ್ತಿಗಳನ್ನು ಪಡೆದುಕೊಳ್ಳಬಹುದು. ಎಂದು ಹಿರಿಯ ಸಾಹಿತಿ ಪ. ರಾಮಕೃಷ್ಣ ಶಾಸ್ತ್ರಿ ಹೇಳಿದರು.
ಅವರು ವಾಣಿ ಪದವಿಪೂರ್ವ ಕಾಲೇಜಿನ ಸಾಹಿತ್ಯ ಸಂಘದ ಆಶ್ರಯದಲ್ಲಿ ನಡೆದ ಬರಹ ಕೌಶಲ್ಯ ವಿಷಯದ ಕುರಿತು ಮಾತನಾಡುತ್ತಾ, ಜೀವನದ ಕಷ್ಟ ಸುಖದ ಅನುಭವಗಳನ್ನು ಮತ್ತು ನಮ್ಮ ಹತ್ತಿರದ ವಿಷಯ ಅಥವಾ ಘಟನೆಗಳನ್ನು ಆಸಕ್ತಿಯಿಂದ ಗಮನಿಸಿದಾಗ ಅದು ಬರವಣಿಗೆಗೆ ಸ್ಪೂರ್ತಿಯಾಗುತ್ತದೆ. ಸಾಹಿತ್ಯಕ್ಕೆ ವಿಷಯಗಳನ್ನು ನಾವೇ ಹುಡುಕಿಕೊಂಡು ಹೋಗಬೇಕಾಗುತ್ತದೆ. ಲೇಖನಗಳು ಅಥವಾ ಕಥೆಗಳು ಓದುಗರ ವ್ಯಕ್ತಿತ್ವದಲ್ಲಿ ಬದಲಾವಣೆಯನ್ನು ತರುವುದರೊಂದಿಗೆ ಸಮಾಜದಲ್ಲಿ ನೈತಿಕತೆಯನ್ನು ಕಂಡುಕೊಳ್ಳಬಹುದು ಎಂದರು.
ವಿದ್ಯಾರ್ಥಿಗಳು ರಚಿಸಿದ ‘ಅಕ್ಷರ ವಾಣಿ ಭಿತ್ತಿ ಪತ್ರಿಕೆ’ ಯನ್ನು ಅನಾವರಣಗೊಳಿಸಿದರು. ಕಾಲೇಜಿನ ಪ್ರಾಂಶುಪಾಲ ವಿಷ್ಣು ಪ್ರಕಾಶ್ ಎಂ. ಅಧ್ಯಕ್ಷತೆ ವಹಿಸಿದ್ದರು. ಸಾಹಿತ್ಯ ಸಂಘದ ಸಂಯೋಜಕಿ ರಮ್ಯಾ ಜೋಶಿ ಮತ್ತು ಅಭ್ಯುದಯ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಸನಾ ಶರಿನಾ ಪಿಂಟೋ ಸ್ವಾಗತಿಸಿದರು. ಯಶಸ್ವಿ ಕಾರ್ಯಕ್ರಮ ನಿರೂಪಿಸಿದರು. ಅಭಿಜ್ಞಾ ಧನ್ಯವಾದವಿತ್ತರು.