ಧರ್ಮಸ್ಥಳ: ಶ್ರೀ ಧ. ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಮಂತ್ರಿ ಮಂಡಲದ ಉದ್ಘಾಟನಾ ಸಮಾರಂಭ ನೆರವೇರಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಡಳಿತ ಮಂಡಳಿಯ ಶೈಕ್ಷಣಿಕ ಮಾರ್ಗದರ್ಶಕ ಶಶಿಶೇಖರ ಎನ್. ಕಾಕತ್ಕರ್ ಆಗಮಿಸಿದ್ದರು.

ಶಾಲಾ ಮಂತ್ರಿಮಂಡಲವನ್ನು ಶಾಲಾ ಸಂಚಾಲಕ ಅನಂತಪದ್ಮನಾಭ ಭಟ್ ದೀಪ ಪ್ರಜ್ವಲಿಸಿ, ಉದ್ಘಾಟನೆಗೊಳಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ. ವಿ. ಆಯ್ಕೆಯಾದ ಮಂತ್ರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಪ್ರಮಾಣ ವಚನ ಸ್ವೀಕಾರದ ಬಳಿಕ ಮಾತನಾಡಿದ ಶಾಲಾ ನಾಯಕಿ ಕ್ಷಮಾ ತನ್ನನ್ನು ಆಯ್ಕೆ ಮಾಡಿದ ಎಲ್ಲರಿಗೂ ಧನ್ಯವಾದ ನೀಡಿ ತನ್ನ ಜವಾಬ್ಧಾರಿಯನ್ನು ಉತ್ತಮವಾಗಿ ನಿರ್ವಹಿಸುವ ಕುರಿತು ಭರವಸೆಯನ್ನು ನೀಡಿದರು.

ಅನಂತ ಪದ್ಮನಾಭ ಭಟ್ ಆಯ್ಕೆಯಾದ ಶಾಲಾ ಮಂತ್ರಿಮಂಡಲದ ಎಲ್ಲರಿಗೂ ಶುಭ ಹಾರೈಸಿ ಅವರ ಜವಾಬ್ದಾರಿಯನ್ನು ತಿಳಿಸಿದರು. ಬಳಿಕ ಮಾತನಾಡಿದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಡಳಿತ ಮಂಡಳಿಯ ಶೈಕ್ಷಣಿಕ ಮಾರ್ಗದರ್ಶಕ ಶಶಿಶೇಖರ ಎನ್. ಕಾಕತ್ಕರ್ ಅವರು ಶಾಲೆಯಲ್ಲಿ ಚುನಾವಣೆಯ ಅಗತ್ಯ, ಶಾಲೆಯಲ್ಲಿ ಮಂತ್ರಿ ಮಂಡಲದ ಅಗತ್ಯ ಏನು, ಮಂತ್ರಿಗಳ ಕಾರ್ಯನಿರ್ವಹಣೆ ಹೇಗೆ,,ವಿರೋಧ ಪಕ್ಷದವರ ಕೆಲಸ ಏನು, ವಿದ್ಯಾರ್ಥಿಗಳ ಜವಾಬ್ದಾರಿ ಏನು ಎಂಬಿತ್ಯಾದಿ ವಿಚಾರವನ್ನು ವಿದ್ಯಾರ್ಥಿಗಳಿಗೆ ಅನೇಕ ಉದಾಹರಣೆ ಸಂಸ್ಕೃತ ಶ್ಲೋಕಗಳ ಮೂಲಕ ಮಾರ್ಮಿಕವಾಗಿ ವಿವರಿಸಿದರು.
ಇಂಡಿಯನ್ ಟಾಲೆಂಟ್ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಿ ಗೌರವಿಸಲಾಯಿತು. ಶಾಲಾ ವಿದ್ಯಾರ್ಥಿನಿ ಮಾಧುರ್ಯ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಶ್ರದ್ಧಾ ಸ್ವಾಗತಿಸಿದರು. ಸಿಂಧೂರ ಶಾಲಾ ಮಂತ್ರಿಮಂಡಲದ ಪರಿಚಯ ಮಾಡಿ, ಯಶ್ವಿತ್ ಅತಿಥಿಗಳ ಕಿರು ಪರಿಚಯ ಮಾಡಿ, ಧನ್ಯ ಧನ್ಯವಾದವಿತ್ತರು.