ಕೊಯ್ಯೂರು: ಅಂಕಗಳ ಜೊತೆಗೆ ಜೀವನ ಮೌಲ್ಯಗಳನ್ನು ಕಲಿತುಕೊಳ್ಳಬೇಕು. ಜೀವನದಲ್ಲಿ ಯಾವುದೇ ಸಾಧನೆ ಸಾಧ್ಯವಿದೆ. ಆದರೆ ಸಾಧಿಸುವ ಛಲ ಇರಬೇಕು ” ಎಂದು ಉಜಿರೆಯ ಶ್ರೀ ಧ. ಮಂ. ಪದವಿ ಕಾಲೇಜ್ ನ ಪ್ರಾಧ್ಯಾಪಕ, ಡಾ.ಹಾ.ಮಾ.ನ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ದಿವ ಕೊಕ್ಕಡ ಅಭಿಪ್ರಾಯಪಟ್ಟರು. ಅವರು ಕೊಯ್ಯೂರು ಸರ್ಕಾರಿ ಪದವಿ ಪೂರ್ವ ಕಾಲೇಜ್ ನ ಕಾಲೇಜು ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ನಿರ್ವಹಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷೆ ದಯಾಮಣಿ “ಕೊಯ್ಯೂರು ಗ್ರಾಮದ ಶಿಕ್ಷಣ ಸಂಸ್ಥೆಗಳು ಹಲವಾರು ಪ್ರತಿಭೆಗಳನ್ನು ಸೃಷ್ಟಿಸಿವೆ. ನಮ್ಮ ಕಾಲೇಜು ನಮ್ಮ ಹೆಮ್ಮೆ” ಎಂದು ಕಾಲೇಜ್ ನ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಕೊಯ್ಯೂರು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರವೀಂದ್ರನಾಥ ಗೌಡ ಭಾಗವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ದಾಮೋದರ ಗೌಡ ಬೆರ್ಕೆ ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾರ್ಥಿನಿಯರಾದ ವಿನಯ, ಚಿರಸ್ವಿ, ವಿದ್ಯಾ, ಐಶ್ವರ್ಯ, ಫಾತಿಮತ್ ಸಹಲ ಪ್ರಾರ್ಥಿಸಿದರು. ಪ್ರಾಂಶುಪಾಲ ಮೋಹನ ಗೌಡ ಪ್ರಸ್ತಾವನೆಯೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು. ಉಪನ್ಯಾಸಕ ಲಕ್ಷ್ಮಣ ಗೌಡ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕರಾದ ಭವ್ಯ, ತೃಪ್ತಿ, ಸಂತೋಷ್ ಕುಮಾರ್ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಗ್ರಾಮ ಪಂಚಾಯತ್ ಸದಸ್ಯ ಲೋಕೇಶ್ ಗೌಡ ಪಾಂಬೇಲು ವಂದನಾರ್ಪಣೆಗೈದರು.