ಬೆಳ್ತಂಗಡಿ: 2024-25ನೇ ಸಾಲಿನ ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಮೂಡುಬಿದಿರೆಯ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಕು.ಸಾನಿಧ್ಯ ಮರುಮೌಲ್ಯಮಾಪನದ ನಂತರ ತನ್ನ ಅಂಕವನ್ನು 625ಕ್ಕೆ 625 ಸಾನಿಧ್ಯ ರಾವ್ ಅಂಕಗಳನ್ನು ಗಳಿಸುವುದರೊಂದಿಗೆ ರಾಜ್ಯದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ. ಇದರೊಂದಿಗೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಉತ್ಕೃಷ್ಟ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಗಳಿಸಿದ ಏಕೈಕ ವಿದ್ಯಾರ್ಥಿನಿ ಎಂಬ ಕೀರ್ತಿಗೆ ಸಾನಿಧ್ಯ ರಾವ್ ಭಾಜನರಾಗಿರುತ್ತಾರೆ.
ಈ ವರ್ಷ 196 ಮಂದಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದು ಇವರಲ್ಲಿ ರಾಜ್ಯಮಟ್ಟದಲ್ಲಿ ಭರತ್ ಜಿ ಗೌಡ(623) 3ನೇ ಸ್ಥಾನ, ಮಂಗಳ ಜಿ(622) ಹಾಗೂ ಅಖಿಲೇಶ್ ಕೆ ಬಿ(622) 4ನೇ ಸ್ಥಾನ, ಪರಿಣಿತ ಎಚ್ ಎಸ್(621) 5ನೇ ಸ್ಥಾನ, ಕೃತಿಕ ಎಮ್(619) ಹಾಗೂ ಸುಧಾಶ್ರೀ ಮೊರಬಾದ್(619) 7ನೇ ಸ್ಥಾನ, ತೀಕ್ಷ್ಯ ಎಮ್ (618) 8ನೇ ಸ್ಥಾನ, ಅಭಿಷೇಕ್ ಆರ್ ಪಾಟೀಲ್(617), ರೋಶಿನಿ ಎಸ್ (617) ಹಾಗೂ ಮಂಥನ್ ಜೈನ್(617) 9ನೇ ಸ್ಥಾನ, ನಿಶಾಂತ್ ಎ(616) ನಿತ್ಯ ಆರ್ ಹೆಚ್(616) ಹಾಗೂ ನಿಹಾಲ್ ವಿ ಗೌಡ (616) 10ನೇ ಸ್ಥಾನವನ್ನು ಪಡೆದಿದ್ದಾರೆ.
ಶೇ. 100 ಫಲಿತಾಂಶದೊಂದಿಗೆ 14 ಮಂದಿ ವಿದ್ಯಾರ್ಥಿಗಳು ಅಗ್ರ ಹತ್ತು ರ್ಯಾಂಕ್ ಗಳನ್ನು ಮುಡಿಗೇರಿಸಿಕೊಂಡು, 45 ವಿದ್ಯಾರ್ಥಿಗಳು 600ಕ್ಕೂ ಅಧಿಕ ಅಂಕಗಳನ್ನು, 145 ವಿದ್ಯಾರ್ಥಿಗಳು 85%ಕ್ಕೂ ಅಧಿಕ ಅಂಕಗಳನ್ನು ಗಳಿಸಿ ಉತ್ಕೃಷ್ಟ ಸಾಧನೆಯನ್ನು ಸಂಸ್ಥೆಯು ದಾಖಲಿಸಿರುವುದನ್ನು ಇಲ್ಲಿ ನೆನೆಪಿಸಿಕೊಳ್ಳಬಹುದಾಗಿದೆ.
ಶಿಕ್ಷಣದೊಂದಿಗೆ ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿಯನ್ನು ಮೂಲ ಧೈಯವಾಗಿರಿಸಿಕೊಂಡಿರುವ ಎಕ್ಸಲೆಂಟ್ ಸಂಸ್ಥೆಯ ವಿದ್ಯಾರ್ಥಿಗಳ ಅತ್ಯುತ್ತಮ ಫಲಿತಾಂಶಕ್ಕೆ ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಮುಖ್ಯೋಪಾಧ್ಯಾಯ ಶಿವಪ್ರಸಾದ್ ಭಟ್, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಅಭಿನಂದನೆಯನ್ನು ಸಲ್ಲಿಸಿದ್ದಾರೆ.