ಲಾಯಿಲ: ಮೇ. 20ರಂದು ಗ್ರಾಮ ಪಂಚಾಯತ್ ಮತ್ತು ಅರಿವು ಕೇಂದ್ರದಲ್ಲಿ ಏಳನೇ ದಿನದ ಬೇಸಿಗೆ ಶಿಬಿರ ನಡೆಯುವುದರೊಂದಿಗೆ ಬೇಸಿಗೆ ಶಿಬಿರವು ಸಂಪನ್ನಗೊಂಡಿತು. ಈ ಕಾರ್ಯಕ್ರಮವು ಪಂ. ಅಧ್ಯಕ್ಷೆ ಜಯಂತಿ ಎಂ.ಕೆ. ಅಧ್ಯಕ್ಷತೆಯಲ್ಲಿ ಪ್ರಾರಂಭಗೊಂಡಿತು. ತಾಲೂಕು ಪಂಚಾಯತ್ ಬೆಳ್ತಂಗಡಿ ಮಾನ್ಯ ಕಾರ್ಯ ನಿರ್ವಹಣಾಧಿಕಾರಿ ಭವಾನಿ ಶಂಕರ ಎನ್., ಉಪಾಧ್ಯಕ್ಷೆ ಸುಗಂಧಿ ಜಗನ್ನಾಥ, ಸದಸ್ಯರಾದ ಜಯಂತಿ, ರಜನಿ ಎಂ.ಆರ್., ಆಶಾಲತಾ, ಆಶಾ ಸಲ್ಡಾನ, ಅರವಿಂದ ಕುಮಾರ್, ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಡಿ.ಪಿ., ಅಂಗನವಾಡಿ ಮೇಲ್ವಿಚಾರಕಿ ನಾಗವೇಣಿ, ಪಂಚಾಯತ್ ಸಿಬ್ಬಂದಿಗಳು, ಡಯಾಸಿಸ್ ಆಫ್ ಬೆಳ್ತಂಗಡಿ ಗುರುಗಳು, ಅಂಗನವಾಡಿ ಶಿಕ್ಷಕರು, ಆಶಾ ಕಾರ್ಯಕರ್ತೆಯರು, ಗುತ್ತಿಗೆದಾರರು, ಪ್ರಮೀಳಾ ಎಂಬಿಕೆ, ಮಕ್ಕಳು, ಪೋಷಕರು ಉಪಸ್ಥಿತರಿದ್ದರು.

ಮಕ್ಕಳ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಪ್ರಾಸ್ತಾವಿಕ ನುಡಿಗಳೊಂದಿಗೆ ಸಮಾರೋಪ ಸಮಾರಂಭಕ್ಕೆ ಆಗಮಿಸಿದ ಎಲ್ಲರಿಗೂ ಸ್ವಾಗತ ನೀಡಿದರು. ದ್ವಿತೀಯ ದರ್ಜೆ ಲೆಕ್ಕ ಸಹಾಯಕಿ ಸುಪ್ರಿತಾ ಎಸ್. ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಅರಿವು ಕೇಂದ್ರದ ಮೇಲ್ವಿಚಾರಕಿ ಹರ್ಷಿತಾ ವರದಿ ಮಂಡಿಸಿದರು. ಹಾಗೂ ಮಕ್ಕಳು ಬೇಸಿಗೆ ಶಿಬಿರದ ಕುರಿತು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು.
ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಮಾಣ ಪತ್ರ ಹಾಗೂ ಸ್ಮರಣಿಕೆಯನ್ನು ನೀಡಲಾಯಿತು. ಮಕ್ಕಳಿಗೆ ಶಿಬಿರದ ಪ್ರತಿ ದಿನ ಉಪಹಾರದ ವ್ಯವಸ್ಥೆ ಮಾಡಿದ ದಾನಿಗಳಿಗೆ ಸ್ಮರಣಿಕೆಯನ್ನು ನೀಡುವುದರೊಂದಿಗೆ ಗೌರವಿಸಲಾಯಿತು. ಮಕ್ಕಳಿಗೆ ಸಾಮಾನ್ಯ ಜ್ಞಾನದ ಪ್ರಶ್ನೆಗಳನ್ನು ಕೇಳಿ ಉತ್ತರಿಸಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

ಮಕ್ಕಳಿಗೆ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾಹಿತಿ ನೀಡಿದ ಬೆಳ್ತಂಗಡಿ ಆರ್ಥಿಕ ಸಮಾಲೋಚನಕಾರಿ ಉಷಾ ಕಾಮತ್ ಇವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾರ್ಯನಿರ್ವಹಣಾಧಿಕಾರಿ ಮಾತಾನಾಡಿ ಮಕ್ಕಳಿಗೆ ಗ್ರಾಮ ಪಂಚಾಯುತ್ ಗ್ರಂಥಾಲಯದ ಸದುಪಯೋಗ ಪಡೆದುಕೊಳ್ಳುವಂತೆ ಹಾಗೂ ಬೇಸಿಗೆ ಶಿಬಿರ ಉತ್ತಮವಾಗಿ ನಡೆದುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಧ್ಯಕ್ಷರು ಶುಭ ಹಾರೈಸಿದರು. ಪಂಚಾಯತ್ ಸದಸ್ಯ ಗಣೇಶ್ ಆರ್. ಇವರು ಧನ್ಯವಾದ ನೀಡಿದರು.