ಮುಂಡಾಜೆ ನಿದ್ದೆ ಮಾತ್ರೆ ಸೇವಿಸಿ ಆಸ್ಪತ್ರೆ ಸೇರಿದ್ದ ತಾಯಿ,ಮಗ ಸಾವು: ನಾನು ಸತ್ತರೆ ಅಮ್ಮನನ್ನು ನೋಡಿಕೊಳ್ಳುವವರು ಯಾರು, ಮಗ ಬರೆದಿಟ್ಟ ನಾಲ್ಕು ಪುಟಗಳ ಮರಣೋತ್ತರ ಪತ್ರ

0

ಬೆಳ್ತಂಗಡಿ: ಆರ್ಥಿಕ ಸಮಸ್ಯೆ ಮತ್ತು ಅನಾರೋಗ್ಯದಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿ ನಿದ್ದೆ ಮಾತ್ರೆ ಸೇವಿಸಿದ್ದ ತಾಯಿ, ಮಗ ಸಾವನ್ನಪ್ಪಿದ್ದಾರೆ. ಮುಂಡಾಜೆ ಗ್ರಾಮದ ಕೂಳೂರು ನಿವಾಸಿ ದಿ. ಕುಂಞಿರಾಮನ್ ನಾಯರ್ ಅವರ ಪುತ್ನಿ ಕಲ್ಯಾಣಿ(96) ಹಾಗೂ ಅವರ ಪುತ್ರ, ಖ್ಯಾತ ಜನಪದ ಕಲಾವಿದ, ಶಿಕ್ಷಕ ಜಯರಾಂ ಕೆ (58) ಅವರು ಗಂಭೀರಾವಸ್ಥೆಯಲ್ಲಿದ್ದು, ಅವರನ್ನು ಉಜಿರೆ ಖಾಸಗಿ ಆಸ್ಷತ್ರೆಗೆ ಸೇರಿಸಿ ತಕ್ಷಣ ಹೆಚ್ಚಿನ ಚಿಕಿತ್ಸೆಗೆ ಮಗನನ್ನು ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿತ್ತು.

ಕಲ್ಯಾಣಿ ಮತ್ತು ಜಯರಾಂ ಕೆ ಅವರು ಕೂಳೂರು ಮನೆಯಲ್ಲಿ ಮೇ. 10ರಂದು ಬೆಳಗ್ಗೆ ನೆರೆಯ ಮನೆಯವರಿಗೆ ಜಯರಾಂ ಅವರ ಮನೆಯ ಬಳಿಯಿಂದ ಯಾವುದೇ ಶಬ್ದ ಕೇಳದೆ ಇದ್ದುದರಿಂದ ಬಂದು ನೋಡಿದಾಗ ತಾಯಿ ಮತ್ತು ಮಗ ಮನೆಯೊಳಗೆ ದೇವರ ಕೋಣೆಯ ಎದುರು ಜೊತೆಯಾಗಿ ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಬಳಿಕ ಊರವರ ಸಹಕಾರದೊಂದಿಗೆ ಮನೆಯ ಬಾಗಿಲು ತೆಗೆದು‌ ಒಳ ಪ್ರವೇಶಿಸಿದಾಗ ಇಬ್ಬರೂ ಉಸಿರಾಡುತ್ತಿದ್ದರು. ತಕ್ಷಣ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಮೂರು ದಿನಗಳವರೆಗೂ ತೀವ್ರ ನಿಗಾ ಘಟಕದಲ್ಲಿದ್ದ ಅವರ ಪೈಕಿ ತಾಯಿ ಕಲ್ಯಾಣಿ ಅವರು ಮೇ.12ರಂದು ಕೊನೆಯುಸಿರೆಳೆದಿದ್ದಾರೆ.

ಮಗ ಜಯರಾಂ ಕೆ ಅವರು ಆರೋಗ್ಯ ಸ್ಥಿತಿ ಇನ್ನಷ್ಟು ವಿಷಮಿಸಿದ್ದರಿಂದ ಅವರನ್ನು ಮಂಗಳೂರಿಗೆ ಸಾಗಿಸಲಾಗಿದೆ. ಪತ್ರ ಬರೆದಿಟ್ಟು ಆತ್ಮಹತ್ಯೆ ಯತ್ನ. ತಾಯಿ ಮಲಗಿದ ಜಾಗದಲ್ಲಿ ಜಯರಾಂ ಕೆ ಅವರು ಬರೆದಿರುವ ನಾಲ್ಕು ಪುಟಗಳ ಮರಣೋತ್ತರ ಪತ್ರ ಲಭಿಸಿದ್ದು, ಅದರಲ್ಲಿ ಸಾಲದ ಸಮಸ್ಯೆ, ತನ್ನ ಅನಾರೋಗ್ಯದ ಕಾರಣದಿಂದ ನಾವೇ ನಿದ್ದೆ ಮಾತ್ರೆ ಸೇವಿಸಿರುತ್ತೇವೆ. ನಮ್ಮನ್ನು ಬದುಕಿಸುವ ಪ್ರಯತ್ನ ಮಾಡಬೇಡಿ ಎಂದು ಬರೆಯಲಾಗಿದೆ. ತಾಯಿ ಕಳೆದ ನಾಲ್ಕು ವರ್ಷಗಳಿಂದ ವಯೋ ಸಹಜ ಅನಾರೋಗ್ಯದಿಂದ ಮಲಗಿದಲ್ಲೇ ಇದ್ದು ಅವರ ಆರೈಕೆಯನ್ನು ಮಗನೇ ಮಾಡುತ್ತಿದ್ದರು. ಆದ್ದರಿಂದ ನಾನು ಸತ್ತರೆ ಅಮ್ಮನನ್ನು ನೋಡಿಕೊಳ್ಳುವವರು ಯಾರು ಎಂಬ ಕಾರಣಕ್ಕೆ ನಾವಿಬ್ಬರೂ ಜೊತೆಯಾಗಿ ಸಾಯುತ್ತಿದ್ದೇವೆ ಎಂದು ಬರೆದಿದ್ದಾರೆ.

ಇದರಲ್ಲಿ ತಾಯಿಗೆ ಅವರು ಮೊದಲು ಮಾತ್ರೆ ಕುಡಿಸಿ ಬಳಿಕ ಅವರು ಸೇವಿಸಿದರೇ ಅಥವಾ ಇಬ್ಬರೂ ನಿರ್ಧಾರಕ್ಕೆ ಬಂದು ಒಟ್ಟಿಗೇ ಸೇವಿಸಿದರೆ ಎಂಬುದು ತಿಳಿದು ಬಂದಿಲ್ಲ. ಮೃತ ಕಲ್ಯಾಣಿ ಅವರು ಕಲಾಪ್ರೇಮಿಯಾಗಿದ್ದು, ಸಾಮಾಜಿಕವಾಗಿ ಎಲ್ಲರ ಜೊತೆ ಬೆರೆಯುತ್ತಿದ್ದರು.

ಜಯರಾಂ ಕೆ ಅವರು ಕಲಾವಿದರಾಗಿ, ನಾಟಕ ರಚನೆಕಾರರಾಗಿ, ಜಾನಪದ ಕಲಾರಾಧಕರಾಗಿ, ಚಿತ್ರಕಲಾ ಶಿಕ್ಷಕರಾಗಿ, ರಾಜ್ಯಮಟ್ಟದ ಹಲವು ಪ್ರಶಸ್ತಿ ಪಡೆದುಕೊಂಡಿದ್ದರು. ಸಂಪನ್ಮೂಲ ವ್ಯಕ್ತಿಯಾಗಿಯೂ ಇದ್ದ ಅವರು ಕಳೆದ 26 ವರ್ಷಗಳಿಂದ ಮುಂಡಾಜೆಯಲ್ಲಿ ಕಲಾಕುಂಚ ಆರ್ಟ್ಸ್ ಎಂಬ ಟ್ಯೂಷನ್ ಸೆಂಟರ್ ನಡೆಸುತ್ತಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮೇ.13ರಂದು ಮಗನು ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here