

ಬೆಳ್ತಂಗಡಿ: ಸೌಜನ್ಯ ಅವರಿಗೆ ನ್ಯಾಯ ಒದಗಿಸಿಕೊಡುವುದಕ್ಕಾಗಿ ಸುಪ್ರೀಂಕೋರ್ಟ್ನಲ್ಲಿ ಹೋರಾಟ ನಡೆಸುತ್ತೇನೆ ಎಂದು ಸಾಮಾಜಿಕ ಹೋರಾಟಗಾರರೂ ಆಗಿರುವ ಚಲನಚಿತ್ರ ನಟ ಚೇತನ್ ಅಹಿಂಸಾ ಹೇಳಿದರು. ಧರ್ಮಸ್ಥಳ ಗ್ರಾಮದ ಪಾಂಗಳದಲ್ಲಿರುವ ಕು.ಸೌಜನ್ಯ ಅವರ ಮನೆಯಲ್ಲಿ ತಾಯಿ ಕುಸುಮಾವತಿ ಹಾಗೂ ಕುಟುಂಬಸ್ಥರನ್ನು ಭೇಟಿ ಮಾಡಿದ ಬಳಿಕ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.
ರಾಜ್ಯದ ಗೃಹ ಸಚಿವರ ಜೊತೆಗೆ ಸೌಜನ್ಯ ಮನೆಯರೊಂದಿಗೆ ಮಾತುಕತೆಗಾಗಿ ಮಧ್ಯಸ್ಥಿಕೆ ವಹಿಸುತ್ತೇನೆ. ಸೌಜನ್ಯ ನ್ಯಾಯಕ್ಕಾಗಿ ನನ್ನ ಹೋರಾಟವನ್ನು ಮೀಸಲಿಡುತ್ತೇನೆ ಎಂದು ಹೇಳಿದ ಅವರು ಸೌಜನ್ಯ ಹೋರಾಟದ ವಿಚಾರದಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಮರೆತು ಒಟ್ಟಾಗಬೇಕು ಎಂದು ಹೋರಾಟಗಾರರಲ್ಲಿ ಮನವಿ ಮಾಡಿದರು. ಸೌಜನ್ಯಳ ಅಜ್ಜ ಬಾಬು ಗೌಡ, ಮಾವ ವಿಠ್ಠಲ ಗೌಡ, ಸಾಮಾಜಿಕ ಹೋರಾಟಗಾರ ಶೇಖರ್ ಲಾಯಿಲ, ಬರಹಗಾರ ಶಫಿ ಬಂಗಾಡಿ, ಸಾಮಾಜಿಕ ಕಾರ್ಯಕರ್ತರಾದ ಸದಾನಂದ ನಾಲ್ಕೂರು, ಸತೀಶ್ ಪುದುವೆಟ್ಟು, ಜಯಂತ್ ಟಿ. ಮೊದಲಾದವರು ಉಪಸ್ಥಿತರಿದ್ದರು.